ಮತ್ತೊಂದು ರಾಷ್ಟ್ರ ಪ್ರಶಸ್ತಿ ಗ್ಯಾರಂಟಿ; ಕಂಗನಾ ಹೊಸ ಸಿನಿಮಾ ಟ್ರೇಲರ್ ನೋಡಿ ಫ್ಯಾನ್ಸ್ ಫಿದಾ

26/11 ಮುಂಬೈ ದಾಳಿಯ ಘಟನೆಯನ್ನು ಆಧರಿಸಿ ‘ಭಾರತ್ ಭಾಗ್ಯ ವಿಧಾತ’ ಸಿನಿಮಾ ಮಾಡಲಾಗಿದೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ನಟಿ ಕಂಗನಾ ರಣಾವತ್ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರದಿಂದ ಕಂಗನಾ ಅವರಿಗೆ ಮತ್ತೊಂದು ರಾಷ್ಟ್ರ ಪ್ರಶಸ್ತಿ ಸಿಗಲಿದೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

ಮತ್ತೊಂದು ರಾಷ್ಟ್ರ ಪ್ರಶಸ್ತಿ ಗ್ಯಾರಂಟಿ; ಕಂಗನಾ ಹೊಸ ಸಿನಿಮಾ ಟ್ರೇಲರ್ ನೋಡಿ ಫ್ಯಾನ್ಸ್ ಫಿದಾ
Bharat Bhhagya Viddhaata Poster

Updated on: Jun 02, 2026 | 8:50 PM

ಬಾಲಿವುಡ್ ನಟಿ ಮತ್ತು ಸಂಸದೆ ಕಂಗನಾ ರಣಾವತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಭಾರತ್ ಭಾಗ್ಯ ವಿಧಾತ’ (Bharat Bhhagya Viddhaata) ಸಿನಿಮಾದ ಟ್ರೇಲರ್ ಮಂಗಳವಾರ (ಜೂನ್ 2) ಬಿಡುಗಡೆಯಾಗಿದೆ. 26/11 ಮುಂಬೈ ಭೀಕರ ಭಯೋತ್ಪಾದನಾ ದಾಳಿಯ ಸಮಯದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನೂರಾರು ರೋಗಿಗಳನ್ನು ರಕ್ಷಿಸಿದ ಮುಂಬೈನ ‘ಕಾಮಾ ಮತ್ತು ಅಲ್ಬ್ಲೆಸ್’ ಆಸ್ಪತ್ರೆಯ ಧೀರ ನರ್ಸ್‌ಗಳು ಹಾಗೂ ವೈದ್ಯಕೀಯ ಸಿಬ್ಬಂದಿಯ ನೈಜ ಶೌರ್ಯದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಮನೋಜ್ ತಪಾಡಿಯಾ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಕಂಗನಾ ರಣಾವತ್ (Kangana Ranaut) ಅವರು ನರ್ಸ್ ಪಾತ್ರವನ್ನು ಮಾಡಿದ್ದಾರೆ.

ಬಿಡುಗಡೆಯಾಗಿರುವ 2 ನಿಮಿಷ 24 ಸೆಕೆಂಡುಗಳ ಟ್ರೇಲರ್​ನಲ್ಲಿ ಭೀಕರ ಗುಂಡಿನ ಸದ್ದು, ಪೊಲೀಸ್ ಸೈರನ್ ಮತ್ತು 26/11ರ ಮುಂಬೈ ದಾಳಿಯ ಸುದ್ದಿ ಪ್ರಸಾರದ ತುಣುಕು ಹೈಲೈಟ್ ಆಗಿದೆ. ಇವುಗಳೊಂದಿಗೆ ಟ್ರೇಲರ್ ರೋಚಕವಾಗಿ ಆರಂಭವಾಗುತ್ತದೆ. ಬಳಿಕ ಆಸ್ಪತ್ರೆಯ ನರ್ಸ್‌ಗಳ ದೈನಂದಿನ ಶಾಂತಿಯುತ ಜೀವನವನ್ನು ತೋರಿಸಲಾಗುತ್ತದೆ. ಆದರೆ ಉಗ್ರರ ದಾಳಿ ಆಸ್ಪತ್ರೆಯ ಮೇಲೆ ನಡೆದಾಗ ಇಡೀ ಪರಿಸ್ಥಿತಿಯೇ ಬದಲಾಗಿಹೋಗುತ್ತದೆ.

‘ಭಾರತ್ ಭಾಗ್ಯ ವಿಧಾತ’ ಸಿನಿಮಾ ಟ್ರೇಲರ್:

ಆಸ್ಪತ್ರೆಯೊಳಗೆ ಉಗ್ರರು ನುಗ್ಗಿ ದಾಳಿ ನಡೆಸುತ್ತಿರುವಾಗ, ಕಂಗನಾ ಅವರ ಪಾತ್ರವು ತನ್ನ ಪ್ರಾಣದ ಹಂಗು ತೊರೆದು ಒಳಗೆ ಸಿಲುಕಿರುವ ರೋಗಿಗಳನ್ನು ರಕ್ಷಿಸಲು ಮುಂದಾಗುತ್ತದೆ. ತೀವ್ರವಾದ ಅಪಾಯ ಮತ್ತು ಸಾವಿನ ಭಯದ ನಡುವೆಯೂ ಹೆಲ್ತ್‌ಕೇರ್ ಸಿಬ್ಬಂದಿ ತೋರಿದ ಧೈರ್ಯ ಹಾಗೂ ನಿಸ್ವಾರ್ಥ ಸೇವೆಗೆ ಈ ಟ್ರೇಲರ್ ಕನ್ನಡಿ ಹಿಡಿದಿದೆ. ಟ್ರೇಲರ್ ನೋಡಿದ ಅಭಿಮಾನಿಗಳು ‘ಈ ಚಿತ್ರದಿಂದ ಕಂಗನಾ ಅವರಿಗೆ ಮತ್ತೊಂದು ನ್ಯಾಷನಲ್ ಅವಾರ್ಡ್ ಗ್ಯಾರಂಟಿ’ ಎಂದು ಕಮಂಟ್ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಇತಿಹಾಸದ ಪುಟಗಳಲ್ಲಿ ಮರೆತುಹೋಗುವ ಇಂತಹ ನರ್ಸ್‌ಗಳ ಮತ್ತು ವೈದ್ಯಕೀಯ ಸಿಬ್ಬಂದಿಯ ಮಹತ್ವದ ಕೊಡುಗೆಯನ್ನು ಜಗತ್ತಿಗೆ ಸಾರುವ ಉದ್ದೇಶವನ್ನು ಈ ಸಿನಿಮಾ ಹೊಂದಿದೆ. ಮುಂಬೈ ದಾಳಿಯ ಕರಾಳ ರಾತ್ರಿಯಲ್ಲಿ ಆಸ್ಪತ್ರೆಯಲ್ಲಿದ್ದ ಸುಮಾರು 400 ರೋಗಿಗಳನ್ನು ಸುರಕ್ಷಿತವಾಗಿ ಕಾಪಾಡಿದ ವೈದ್ಯಕೀಯ ಸಿಬ್ಬಂದಿಗೆ ಈ ಚಿತ್ರದ ಮೂಲಕ ಗೌರವ ಸಲ್ಲಿಸಲಾಗಿದೆ.

ಇದನ್ನೂ ಓದಿ: 8 ಗಂಟೆ ಕೆಲಸದ ಶಿಫ್ಟ್ ವಿವಾದ: ದೀಪಿಕಾ ಪಡುಕೋಣೆ ಪರ ನಿಂತ ಕಂಗನಾ ರಣಾವತ್

‘ಭಾರತ್ ಭಾಗ್ಯ ವಿಧಾತ’ ಚಿತ್ರದಲ್ಲಿ ಕಂಗನಾ ರಣಾವತ್ ಅವರೊಂದಿಗೆ ಗಿರಿಜಾ ಓಕ್ ಪ್ರಮುಖ ಪಾತ್ರದಲ್ಲಿದ್ದಾರೆ. ಉಳಿದಂತೆ ಸ್ಮಿತಾ ತಾಂಬೆ, ಅಮೃತಾ ನಾಮದೇವ್, ಈಶಾ ಡೇ, ಪ್ರಿಯಾ ಬೆರ್ಡೆ, ಆಶಾ ಶೆಲಾರ್, ಸುಹಿತಾ ಥಟ್ಟೆ, ರಸಿಕಾ ಆಗಾಶೆ, ಆದಿತ್ಯ ಮಿಶ್ರಾ ಮತ್ತು ಜಾಹಿದ್ ಖಾನ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಜೂನ್ 12ರಂದು ಈ ಸಿನಿಮಾ ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us