AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ತಾಳಿ ಧರಿಸಿದ್ದು ದೊಡ್ಡ ವಿಷಯ ಅಲ್ಲ’; ಸೀಕ್ರೆಟ್ ಮದುವೆ ವದಂತಿಗೆ ಕಂಗನಾ ಸ್ಪಷ್ಟನೆ

ನಟಿ ಕಂಗನಾ ರಣಾವತ್ ಅವರ ಕೊರಳಿನಲ್ಲಿ ತಾಳಿ ನೋಡಿದ ಎಲ್ಲರಿಗೂ ಅಚ್ಚರಿ ಆಗಿತ್ತು. ಆ ಬಗ್ಗೆ ಸ್ವತಃ ಕಂಗನಾ ಮೌನ ಮುರಿದಿದ್ದಾರೆ. ‘ಇದು ದೊಡ್ಡ ವಿಷಯವೇ ಅಲ್ಲ’ ಎಂದು ಅವರು ಹೇಳಿದ್ದಾರೆ. ಮಂಗಳಸೂತ್ರ ಧರಿಸಿದ್ದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

‘ನಾನು ತಾಳಿ ಧರಿಸಿದ್ದು ದೊಡ್ಡ ವಿಷಯ ಅಲ್ಲ’; ಸೀಕ್ರೆಟ್ ಮದುವೆ ವದಂತಿಗೆ ಕಂಗನಾ ಸ್ಪಷ್ಟನೆ
Kangana Ranaut
ಮದನ್​ ಕುಮಾರ್​
|

Updated on: May 22, 2026 | 5:06 PM

Share

ಬಾಲಿವುಡ್ ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್ ಅವರು ಇತ್ತೀಚೆಗೆ ಮಂಗಳಸೂತ್ರ (Mangalsutra) ಮತ್ತು ಹಸಿರು ಬಳೆಗಳನ್ನು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿತ್ತು. ಕಂಗನಾ ರಣಾವತ್ ಯಾರಿಗೂ ತಿಳಿಯದಂತೆ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ವದಂತಿಗಳು ಕಾಳ್ಗಿಚ್ಚಿನಂತೆ ಹಬ್ಬಿದ್ದವು. ಆ ‘ಅದೃಷ್ಟವಂತ ಪುರುಷ’ ಯಾರು ಎಂದು ನೆಟ್ಟಿಗರು ಹುಡುಕಾಡಲಾರಂಭಿಸಿದ್ದರು. ಈ ಎಲ್ಲಾ ಊಹಾಪೋಹಗಳಿಗೆ ಸ್ವತಃ ಕಂಗನಾ ರಣಾವತ್ (Kangana Ranaut) ಅವರೇ ಸ್ಪಷ್ಟನೆ ನೀಡಿದ್ದು, ‘ಇದರಲ್ಲಿ ಇಷ್ಟೊಂದು ತಲೆಕೆಡಿಸಿಕೊಳ್ಳುವಂತದ್ದು ಏನಿದೆ?’ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಕಂಗನಾ ಅವರು ಗುಲಾಬಿ ಬಣ್ಣದ ಸಲ್ವಾರ್ ಸೂಟ್ ಧರಿಸಿ, ಕತ್ತಿನಲ್ಲಿ ಮಂಗಳಸೂತ್ರ ಹಾಗೂ ಕೈಯಲ್ಲಿ ಹಸಿರು ಬಳೆಗಳೊಂದಿಗೆ ಕಟ್ಟಡವೊಂದರಿಂದ ಹೊರಬಂದು ತಮ್ಮ ಕಾರಿನತ್ತ ತೆರಳುತ್ತಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು. ಇದನ್ನು ನೋಡಿದ ತಕ್ಷಣವೇ, ‘ಕಂಗನಾ ರಹಸ್ಯವಾಗಿ ಮದುವೆಯಾಗಿದ್ದಾರೆ’ ಎಂದು ನೆಟ್ಟಿಗರು ತೀರ್ಮಾನಿಸಿಬಿಟ್ಟಿದ್ದರು.

ಈ ಕುರಿತು ಶುಕ್ರವಾರ (ಮೇ 22) ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ಹರಡುತ್ತಿರುವ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ‘ನಾನು ಪ್ರತಿದಿನ ನಗರದ ಸುತ್ತಮುತ್ತ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುತ್ತೇನೆ. ಯಾರೋ ಒಬ್ಬರು ನನ್ನ ಕ್ಯಾರೆಕ್ಟರ್ ಮೇಕ್-ಅಪ್ ಲುಕ್‌ನ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಈಗ ನನಗೆ ಸಾಲು ಸಾಲು ಫೋನ್ ಕರೆಗಳು ಬರುತ್ತಿವೆ. ಅಷ್ಟಕ್ಕೂ ವಿವಾಹಿತ ಮಹಿಳೆಯ ಲುಕ್‌ನಲ್ಲಿ ಕಾಣಿಸಿಕೊಂಡರೆ ಅದರಲ್ಲಿ ಅಷ್ಟೊಂದು ದೊಡ್ಡ ವಿಷಯ ಏನಿದೆ? ನಟರು ಚಿತ್ರಗಳಿಗಾಗಿ ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡುತ್ತಾರೆ. ನಾನು ಎಂದಿಗೂ ರಹಸ್ಯವಾಗಿ ಮದುವೆಯಾಗುವುದಿಲ್ಲ. ಇದು ನನ್ನ ಪ್ರಾಮಿಸ್’ ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಕಂಗನಾ ರಣಾವತ್ ಅವರು ತೀವ್ರವಾದ ಬಿಸಿಲಿನಲ್ಲಿ ಹೊರಾಂಗಣ ಶೂಟಿಂಗ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಎಸಿ ರೂಮ್‌ನಲ್ಲಿ ಕುಳಿತು ದೂರುವ ಸುದ್ದಿ ನಿರೂಪಕರ ಕಾಲೆಳೆದಿದ್ದಾರೆ. ‘ಎಸಿ ಸ್ಟುಡಿಯೋಗಳಲ್ಲಿ ಕುಳಿತುಕೊಳ್ಳುವ ನ್ಯೂಸ್ ಆ್ಯಂಕರ್‌ಗಳು ಹೊರಗಿನ ತಾಪಮಾನ ಮತ್ತು ಬಿಸಿಲಿನ ಬೇಗೆಯ ಬಗ್ಗೆ ದೂರುತ್ತಿದ್ದಾರೆ. ಆದರೆ ನಮ್ಮಂತವರ ಪಾಡೇನು? ನಾವು ಅಷ್ಟೊಂದು ಲೈಟ್ಸ್‌ ನಡುವೆ ಹೊರಾಂಗಣ ಶೂಟಿಂಗ್ ಮಾಡುತ್ತಿದ್ದೇವೆ. ದೂರುವುದನ್ನು ನಿಲ್ಲಿಸಿ ಫ್ರೆಂಡ್ಸ್. ಜೀವನ ಸವಾಲಾಗಿದ್ದರಷ್ಟೇ ಬದುಕಿದ್ದೀವಿ ಎನಿಸುತ್ತದೆ, ಸುಲಭ ಮತ್ತು ನಿರೀಕ್ಷಿತವಾಗಿದ್ದರೆ ಅದು ಸಾವಿಗೆ ಸಮಾನ. ಹ್ಯಾಪಿ ಸಮ್ಮರ್’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಂಗನಾ ಮಾಡಿದ ‘ಎಮರ್ಜೆನ್ಸಿ’ ಸಿನಿಮಾ 2 ದಿನ ಓಡಲಿಲ್ಲ: ಖಾರವಾಗಿ ಹೇಳಿದ ‘ಧುರಂಧರ್ 2’ ನಟ

‘ಎಮರ್ಜೆನ್ಸಿ’ ಚಿತ್ರದ ಸೋಲಿನ ನಂತರ ಕಂಗನಾ ಅವರು ‘ಭಾರತ್ ಭಾಗ್ಯ ವಿಧಾತ’ ಸಿನಿಮಾದಲ್ಲಿ ನಟಿಸಿದ್ದಾರೆ. 2008ರಲ್ಲಿ ಮುಂಬೈನಲ್ಲಿ ನಡೆದ ಭೀಕರ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಆಸ್ಪತ್ರೆಯೊಂದರ ಒಳಗೆ ನಡೆಯುವ ನೈಜ ಘಟನೆಗಳ ಆಧಾರಿತ ಕಥೆಯನ್ನು ಈ ಸಿನಿಮಾ ತೋರಿಸಲಿದೆ. ಈ ಚಿತ್ರವು ಜೂನ್ 12ರಂದು ತೆರೆಕಾಣಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More