ನಟಿಯರ ತೀವ್ರ ಜಗಳ: ಪೊಲೀಸರು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್

‘ಸಿನಿಮಾ ಮತ್ತು ಟಿವಿ ಕಲಾವಿದರ ಸಂಘ’ದ ಜಗಳ ಬೀದಿಗೆ ಬಂದಿದೆ. ಪೊಲೀಸರ ಸಮ್ಮುಖದಲ್ಲೇ ನಟಿಯರು ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ನಟಿಯರ ಈ ವರ್ತನೆ ಕಂಡು ಪೊಲೀಸರು ಗರಂ ಆಗಿದ್ದಾರೆ. ಜಗಳ ಮಾಡಿದ ನಟಿಯರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ನಟಿಯರ ತೀವ್ರ ಜಗಳ: ಪೊಲೀಸರು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್
Cintaa Fight

Updated on: Sep 13, 2026 | 7:28 AM

ಹಿಂದಿಯ ‘ಸಿನಿಮಾ ಮತ್ತು ಟಿವಿ ಕಲಾವಿದರ ಸಂಘ’ ಈಗ ವಿವಾದದ ಕಾರಣಕ್ಕೆ ಸುದ್ದಿ ಆಗುತ್ತಿದೆ. ಸಂಘದ ಮುಂಬೈ ಕಚೇರಿಯಲ್ಲಿ ಹಿರಿಯ ನಟಿಯರ ನಡುವೆ ತೀವ್ರ ಸ್ವರೂಪದ ಗಲಾಟೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಬೇಕಾಗಿ ಬಂದ ಘಟನೆ ವರದಿಯಾಗಿದೆ. ನಟಿಯರಾದ ಪೂನಮ್ ಧಿಲ್ಲೋನ್, ಪದ್ಮಿನಿ ಕೊಲ್ಹಾಪುರೆ, ಉಪಾಸನಾ ಸಿಂಗ್ ಹಾಗೂ ಕುನಿಕಾ ಸದಾನಂದ್ ಸೇರಿದಂತೆ ಹಲವರು ಭಾಗಿಯಾಗಿದ್ದ ಈ ಜಗಳದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕಚೇರಿಯಲ್ಲಿದ್ದ ಸಂಘದ ಅಧಿಕೃತ ದಾಖಲೆಗಳು ಮತ್ತು ಫೈಲ್‌ಗಳನ್ನು ನಟಿ ಪೂನಮ್ ಧಿಲ್ಲೋನ್ ಅವರ ಕಾರಿಗೆ ಸ್ಥಳಾಂತರಿಸಿ ತೆಗೆದುಕೊಂಡು ಹೋಗಲಾಗಿದೆ ಎಂದು ಕುನಿಕಾ ಸದಾನಂದ್ ಅವರು ಇತ್ತೀಚೆಗೆ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪದ್ಮಿನಿ ಕೊಲ್ಹಾಪುರೆ ಅವರನ್ನು ಇತರ ಸದಸ್ಯರು ಪ್ರಶ್ನಿಸುತ್ತಿರುವ ವಿಡಿಯೋ ಹೊರಬಿದ್ದಿದೆ. ‘ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದನ್ನು ಒಪ್ಪಿಕೊಳ್ಳುತ್ತೀರಾ?’ ಎಂದು ಪ್ರಶ್ನಿಸಿದಾಗ, ‘ಸಮಿತಿಯನ್ನು ವಿಸರ್ಜಿಸಲಾಗಿದೆ ಎಂದು ಘೋಷಿಸುವ ಪತ್ರವನ್ನು ತೋರಿಸಿ’ ಎಂದು ಪದ್ಮಿನಿ ಮರುಪ್ರಶ್ನಿಸಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು, ‘ನಮಗೆ ಎಲ್ಲರೂ ಒಂದೇ, ಈ ವಿಚಾರದಲ್ಲಿ ನೀವು ಮೂರನೇ ವ್ಯಕ್ತಿಗಳು’ ಎಂದು ತಿಳಿಸಲು ಪ್ರಯತ್ನಿಸಿದ್ದಾರೆ. ಆದರೆ ಪದ್ಮಿನಿ ಅವರು, ‘ನಮ್ಮ ಡೇಟಾವನ್ನು ಕದಿಯಲಾಗಿದೆ’ ಎಂದು ಆರೋಪಿಸಿದ್ದಾರೆ. ಇನ್ನೊಂದು ವಿಡಿಯೋದಲ್ಲಿ, ತಮ್ಮ ಕಾರನ್ನು ಏಕೆ ತಪಾಸಣೆ ಮಾಡಲಾಗುತ್ತಿದೆ ಎಂದು ಪೂನಮ್ ಧಿಲ್ಲೋನ್ ಪೊಲೀಸರನ್ನು ಪ್ರಶ್ನಿಸಿದ್ದಾರೆ.

ಈ ವಿಡಿಯೋವನ್ನು ಕುನಿಕಾ ರೆಕಾರ್ಡ್ ಮಾಡುತ್ತಿದ್ದು, ಅವರ ಮೇಲೆಯೂ ಪೂನಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟಿಯರು ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿದಾಗ ಆಕ್ರೋಶಗೊಂಡ ಪೊಲೀಸ್ ಅಧಿಕಾರಿಯೊಬ್ಬರು, ‘ನಮಗೆ ಈ ರೀತಿ ಮಾತನಾಡಲು ಬೇಸರವಾಗುತ್ತದೆ. ನಾವು ಕೊಳಚೆ ಪ್ರದೇಶದ ಜನರೊಂದಿಗೂ ಈ ರೀತಿ ಮಾತನಾಡುವುದಿಲ್ಲ. ನಿಮಗಿರುವ ಗೌರವ ಮತ್ತು ಕೀರ್ತಿಯನ್ನಾದರೂ ಉಳಿಸಿಕೊಳ್ಳಿ. ಜನ ನಿಮ್ಮನ್ನು ನೋಡುತ್ತಿದ್ದಾರೆ. ನೀವು ನಿಮ್ಮ ಆರೋಪಗಳಲ್ಲೇ ಮುಳುಗಿದ್ದೀರಿ ಹೊರತು ನಮ್ಮ ಮಾತು ಕೇಳುತ್ತಿಲ್ಲ. ಬೇರೆಯವರಾಗಿದ್ದರೆ ಕೆನ್ನೆಗೆ ಬಾರಿಸುತ್ತಿದ್ದೆವು. ನಾವು ನಿಮಗೆ ಗೌರವ ಕೊಡುತ್ತಿದ್ದೇವೆ. ಆದರೆ ಅದಕ್ಕೂ ಒಂದು ಮಿತಿ ಇದೆ’ ಎಂದು ಗದರಿಸಿದ್ದಾರೆ.

ಇದನ್ನೂ ಓದಿ: ಹುಳ ಕಚ್ಚಿ ನಟ ಅಸ್ವಸ್ಥ: ತನಿಖೆಗೆ ಸಿಎಂ ಅನ್ನು ಒತ್ತಾಯಿಸಿದ ಕಲಾವಿದರ ಸಂಘ

ಅಲ್ಲದೆ, ಈಗಾಗಲೇ ತೆಗೆದುಕೊಂಡು ಹೋಗಲಾಗಿದೆ ಎನ್ನಲಾದ ದಾಖಲೆಗಳನ್ನು ಮರಳಿ ತರಿಸಿಕೊಡುವಂತೆ ನಟಿ ಉಪಾಸನಾ ಸಿಂಗ್ ಪೊಲೀಸರನ್ನು ಕೋರಿದಾಗ, ‘ಅದು ನನ್ನ ಕೆಲಸವಲ್ಲ. ದಾಖಲೆಗಳನ್ನು ತಿದ್ದುಪಡಿ ಮಾಡಿದ್ದರೆ ಅಥವಾ ದುರ್ಬಳಕೆ ಮಾಡಿದ್ದರೆ ಲೇಬರ್ ಕಮಿಷನ್ ಅವರನ್ನು ವಿಚಾರಿಸಲಿದೆ’ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಆದರೆ ಸದಸ್ಯರು ಪೊಲೀಸರೊಂದಿಗೂ ಹಾಗೂ ಪರಸ್ಪರ ಜಗಳವಾಡುವುದನ್ನು ಮುಂದುವರಿಸಿದ್ದಾರೆ. ಚುನಾವಣೆ ಘೋಷಣೆ ಆಗಿರುವುದರಿಂದ ಯಾರನ್ನೂ ಕಚೇರಿ ಪ್ರವೇಶಿಸಲು ಬಿಡಬಾರದು ಎಂದು ಕುನಿಕಾ ಪ್ರತಿಪಾದಿಸಿದ್ದಾರೆ.

ಏನಿದು ಸಂಘದ ವಿವಾದ?

ಕಳೆದ ಆಗಸ್ಟ್‌ನಲ್ಲಿ ಸಂಘದ 21 ಸದಸ್ಯರ ಪೈಕಿ 8 ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಒಟ್ಟು 11 ಸದಸ್ಯರು ರಾಜೀನಾಮೆ ನೀಡಿದಾಗ ಈ ವಿವಾದ ಆರಂಭವಾಗಿತ್ತು. ಸಂಘವು ಸಂವಿಧಾನಬದ್ಧ ಆಡಳಿತ ಮತ್ತು ಸಾಮೂಹಿಕ ನಿರ್ಧಾರಗಳಿಂದ ದೂರ ಸರಿಯುತ್ತಿದೆ ಎಂದು ಜಂಟಿ ಪತ್ರದಲ್ಲಿ ಆರೋಪಿಸಲಾಗಿತ್ತು. ಶೇ.50ಕ್ಕೂ ಹೆಚ್ಚು ಸದಸ್ಯರು ರಾಜೀನಾಮೆ ನೀಡಿರುವುದರಿಂದ ಸಮಿತಿ ವಿಸರ್ಜನೆಯಾಗಿದೆ ಎಂದು ಉಪಾಸನಾ ಸಿಂಗ್ ವಾದಿಸಿದರೆ, ಪೂನಮ್ ಧಿಲ್ಲೋನ್ ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us