
ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಲವು ದಾಖಲೆಗಳನ್ನು ಬರೆಯುತ್ತಿದೆ. ಸಿನಿಮಾ ಬಿಡುಗಡೆ ಆಗಿ ತಿಂಗಳ ಮೇಲಾದರೂ ಸಾವಿರಾರು ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ. ಸಿನಿಮಾವನ್ನು ಬಗ್ಗೆ ಸ್ವತಃ ಪ್ರಧಾನಿ ಮೋದಿ ಅವರೇ ಹೊಗಳಿದ್ದಾರೆ. ಇದೆಲ್ಲದರ ಜೊತೆಗೆ ಕೆಲವರು ಸಿನಿಮಾವನ್ನು ಟೀಕೆ ಸಹ ಮಾಡುತ್ತಿದ್ದು, ಇದೊಂದು ಪ್ರಾಪಗಾಂಡ ಸಿನಿಮಾ ಎನ್ನುತ್ತಿದ್ದಾರೆ. ಜೊತೆಗೆ ಸಿನಿಮಾ ಪ್ರದರ್ಶನ ನಿಲ್ಲಿಸುವ ಪ್ರಯತ್ನಗಳು ಸಹ ಅಲ್ಲಲ್ಲಿ ನಡೆಯುತ್ತಿವೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಆಗ್ರಹಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಉತ್ತರ ಪ್ರದೇಶದಲ್ಲಿ ಸಿನಿಮಾದ ವಿರುದ್ಧ ಹೈಕೋರ್ಟ್ ಮೊರೆ ಹೋಗಲಾಗಿದೆ.
‘ಧುರಂಧರ್ 2’ ಸಿನಿಮಾ ಕಾಲ್ಪನಿಕ ಕತೆಯಾದರೂ ಹಲವು ನಿಜ ವ್ಯಕ್ತಿಗಳ ಪಾತ್ರಗಳು ಸಿನಿಮಾನಲ್ಲಿವೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಪಾಕಿಸ್ತಾನದ ಹಲವು ಉಗ್ರ ಸಂಘಟನೆ ಮುಖಂಡರು, ಪಾಕ್ನ ರಾಜಕಾರಣಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಉತ್ತರ ಪ್ರದೇಶದ ಮಾಜಿ ಸಂಸದ ಅತೀಕ್ ಅಹ್ಮದ್ ಇನ್ನೂ ಕೆಲವರ ಪಾತ್ರಗಳು ಸಿನಿಮಾನಲ್ಲಿವೆ. ಇದೀಗ ಅತೀಕ್ ಅಸ್ಲಂ ಪಾತ್ರದ ಕುರಿತಾಗಿ ಕೆಲವರು ಆಕ್ಷೇಪ ಎತ್ತಿ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ.
‘ಧುರಂಧರ್ 2’ ಸಿನಿಮಾನಲ್ಲಿ ಮಾಜಿ ಸಂಸದ ಮತ್ತು ರೌಡಿಯಾಗಿಯೂ ಕುಖ್ಯಾತಿ ಪಡೆದಿದ್ದ ಅತೀಕ್ ಅಹ್ಮದ್ ಅನ್ನು ಪಾಕಿಸ್ತಾನದ ಜೊತೆಗೆ ಸಂಬಂಧ ಹೊಂದಿದ್ದ ವ್ಯಕ್ತಿಯಾಗಿ ತೋರಿಸಲಾಗಿದೆ. ಸಿನಿಮಾನಲ್ಲಿ ಆತನ ಕೊಲೆಯನ್ನು ರಾಷ್ಟ್ರೀಯ ಗುಪ್ತಚರ ಇಲಾಖೆ ಮಾಡಿಸಿದೆ ಎಂದು ತೋರಿಸಲಾಗಿದೆ. ಇದರ ವಿರುದ್ಧ ಅಲಹಾಬಾದ್ ಹೈಕೋರ್ಟ್ನಲ್ಲಿ ಕೇಸು ದಾಖಲಿಸಲಾಗಿದೆ.
ಇದನ್ನೂ ಓದಿ: ‘ಧುರಂಧರ್ 3’ ಸಿನಿಮಾ ಬರಲಿದೆಯೇ? ಕುತೂಹಲದ ಪ್ರಶ್ನೆಗೆ ಉತ್ತರ ನೀಡಿದ ನಟ ರಾಕೇಶ್ ಬೇಡಿ
ಎನ್ಜಿಓ ಒಂದು ಅಲಹಾಬಾದ್ ಹೈಕೋರ್ಟ್ನಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದು, ಸಿನಿಮಾ ಸುಳ್ಳು ಮಾಹಿತಿಗಳನ್ನು ಒಳಗೊಂಡಿದ್ದು, ಸತ್ಯಕ್ಕೆ ದೂರವಾದ ಅಂಶ ಸಿನಿಮಾನಲ್ಲಿದೆ. ಅಲ್ಲದೆ ಅತೀಕ್ ಅಹ್ಮದ್ ಕೊಲೆಯ ಪ್ರಕರಣ ಇನ್ನೂ ಚಾಲ್ತಿಯಲ್ಲಿದೆ. ಹಾಗಾಗಿ ‘ಧುರಂಧರ್ 2’ ಸಿನಿಮಾದ ಪ್ರದರ್ಶನವನ್ನು ಉತ್ತರ ಪ್ರದೇಶದಲ್ಲಿ ಶೀಘ್ರವೇ ನಿಲ್ಲಿಸುವಂತೆ ಆದೇಶ ನೀಡುವಂತೆ ಕೋರ್ಟ್ಗೆ ಮನವಿ ಮಾಡಲಾಗಿದೆ.
‘ಧುರಂಧರ್ 2’ ಸಿನಿಮಾನಲ್ಲಿ ಪಾಕ್ನ ಉಗ್ರ ಸಂಘಟನೆ ಮುಖಂಡನೊಬ್ಬ ಅತೀಖ್ ಅಹ್ಮದ್ ಜೊತೆಗೆ ಫೋನಿನಲ್ಲಿ ಮಾತನಾಡುತ್ತಿರುವ ದೃಶ್ಯವಿದೆ. ಅತೀಖ್ ಸಾವಿನ ದೃಶ್ಯವೂ ಇದೆ. ಸಿನಿಮಾನಲ್ಲಿ ಅತೀಖ್ ಪಾತ್ರಕ್ಕೆ ಅತೀಫ್ ಎಂದು ಹೆಸರು ನೀಡಲಾಗಿದೆ. ಅತೀಖ್ ಅವರನ್ನು ಪಾಕಿಸ್ತಾನದ ಜೊತೆಗೆ ಲಿಂಕ್ ಇದ್ದ ವ್ಯಕ್ತಿ ಎಂದು ತೋರಿಸಿರುವುದಕ್ಕೆ ಈಗಾಗಲೇ ಉತ್ತರ ಪ್ರದೇಶದ ಎಸ್ಪಿ ಪಕ್ಷದ ಕೆಲ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಪಿಐಎಲ್ ಸಹ ದಾಖಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ