
ಭಾರತೀಯ ಚಿತ್ರರಂಗದ ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ (Asha Bhosle) ಅವರ ಅಗಲಿಕೆಯಿಂದ ಅಭಿಮಾನಿಗಳಿಗೆ, ಆಪ್ತರಿಗೆ, ಕುಟುಂಬದವರಿಗೆ ತೀವ್ರ ನೋವಾಗಿದೆ. ಏಪ್ರಿಲ್ 12ರಂದು ನಿಧನರಾದ ಅವರ ಅಂತಿಮ ಸಂಸ್ಕಾರ ಇಂದು (ಏ.13) ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಈ ಸಂದರ್ಭದಲ್ಲಿ ಬಾಲಿವುಡ್ನ ಹಲವು ಗಣ್ಯರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು. ಆದರೆ, ಅಲ್ಲಿ ನಡೆದ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಖ್ಯಾತ ನಟ ಜಾಕಿ ಶ್ರಾಫ್ ಅವರು ಪಾಪರಾಜಿಗಳ (Paparazzi) ವರ್ತನೆಗೆ ಬೇಸರಗೊಂಡು ಗರಂ ಆದ ವಿಡಿಯೋ ಈಗ ವೈರಲ್ ಆಗಿದೆ.
ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್, ಟಬು, ರಣವೀರ್ ಸಿಂಗ್, ಆಮಿರ್ ಖಾನ್, ವಿಕ್ಕಿ ಕೌಶಲ್ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಜಾಕಿ ಶ್ರಾಫ್ ಅವರನ್ನು ಕಂಡು ಪಾಪರಾಜಿಗಳು ಮುಗಿಬಿದ್ದರು. ಆಶಾ ಭೋಸ್ಲೆ ಅವರ ನಿಧನದ ಬಗ್ಗೆ ‘ನಿಮಗೆ ಹೇಗನ್ನಿಸುತ್ತಿದೆ’ ಎಂಬ ಸಾಮಾನ್ಯ ಹಾಗೂ ವಿವೇಚನಾರಹಿತ ಪ್ರಶ್ನೆಯನ್ನು ಅವರು ನಟನಿಗೆ ಕೇಳಿದರು.
ಪಾಪರಾಜಿಗಳ ಈ ಪ್ರಶ್ನೆಯಿಂದ ತೀವ್ರ ಅಸಮಾಧಾನಗೊಂಡ ಜಾಕಿ ಶ್ರಾಫ್, ಅಲ್ಲೇ ನಿಂತು ಅವರಿಗೆ ಪಾಠ ಮಾಡಿದರು. ಪಾಪರಾಜಿಗಳಿಗೆ ಅವರು ಮರುಪ್ರಶ್ನೆ ಕೇಳಿದರು. ‘ಯಾರದ್ದಾದರೂ ತಾಯಿ ತೀರಿಕೊಂಡಾಗ ಹೇಗನ್ನಿಸುತ್ತದೆ? ನಮ್ಮ ತಾಯಿ ನಿಧನರಾಗಿದ್ದಾರೆ. ಯಾರಾದರೂ ತಮ್ಮ ತಾಯಿಯನ್ನು ಕಳೆದುಕೊಂಡಾಗ ಹೇಗನ್ನಿಸುತ್ತದೆ ಎಂದು ಕೇಳುವುದರಲ್ಲಿ ಅರ್ಥವಿದೆಯೇ? ನೀವು ಈ ಪರಿಸ್ಥಿತಿಯಲ್ಲಿ ಇದ್ದಿದ್ದರೆ ಹೇಗನಿಸುತ್ತದೆ’ ಎಂದು ಅವರು ಕೇಳಿದರು.
ಜಾಕಿ ಶ್ರಾಫ್ ಅವರ ಪ್ರಶ್ನೆಗೆ ಉತ್ತರಿಸಿದ ಪಾಪರಾಜಿಗಳು ‘ಬಹಳ ಬೇಸರವಾಗುತ್ತದೆ’ ಎಂದು ಉತ್ತರಿಸಿದರು. ತಕ್ಷಣ ಪ್ರತಿಕ್ರಿಯಿಸಿದ ಜಾಕಿ, ‘ಅಷ್ಟೇ, ಅಲ್ಲಿಗೆ ವಿಷಯ ಮುಗಿಯಿತು. ಇಂತಹ ಸಮಯದಲ್ಲಿ ಈ ರೀತಿಯ ಮಾತುಗಳು ಸರಿಯಲ್ಲ. ಬಿಟ್ಟುಬಿಡಿ ಸಹೋದರರೇ, ಮನೆಗೆ ಹೋಗಿ’ ಎಂದು ಹೇಳಿ ಅಲ್ಲಿಂದ ಹೊರನಡೆದರು. ಜಾಕಿ ಶ್ರಾಫ್ ಅವರು ಕ್ಲಾಸ್ ತೆಗೆದುಕೊಂಡ ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಆಶಾ ಭೋಸ್ಲೆ ಬದಲು ಬೇರೆ ಫೋಟೋ ಹಂಚಿಕೊಂಡು ಸಂತಾಪ ಸೂಚಿಸಿದ ಅಥಿಯಾ ಶೆಟ್ಟಿ; ಸಖತ್ ಟ್ರೋಲ್
ಅಂತಿಮ ಸಂಸ್ಕಾರದಂತಹ ಗಂಭೀರ ಮತ್ತು ದುಃಖದ ಸಂದರ್ಭಗಳಲ್ಲಿ ಸೆಲೆಬ್ರಿಟಿಗಳ ಬಳಿ ಇಂತಹ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಜಾಕಿ ಶ್ರಾಫ್ ಅವರ ಸಮಯೋಚಿತ ಪ್ರತಿಕ್ರಿಯೆ ಮತ್ತು ಆಶಾ ಭೋಸ್ಲೆ ಅವರ ಮೇಲೆ ಅವರಿಗಿದ್ದ ಗೌರವವನ್ನು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ. ಆಶಾ ಭೋಸ್ಲೆ ಅವರು ಭಾರತೀಯ ಸಂಗೀತಕ್ಕೆ ನೀಡಿದ ಕೊಡುಗೆ ಅಪಾರ. ಅವರ ಅಗಲಿಕೆಗೆ ಚಿತ್ರರಂಗದ ಪ್ರತಿಯೊಬ್ಬರೂ ಕಂಬನಿ ಮಿಡಿಯುತ್ತಿದ್ದು, ಜಾಕಿ ಶ್ರಾಫ್ ಅವರ ಈ ಆಕ್ರೋಶವು ಪರೋಕ್ಷವಾಗಿ ಇಡೀ ಚಿತ್ರರಂಗದ ನೋವನ್ನು ಪ್ರತಿಬಿಂಬಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.