RSS ಬಗ್ಗೆ ಅವಹೇಳನಕಾರಿ ಹೇಳಿಕೆ: ಜಾವೇದ್​ ಅಖ್ತರ್​ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ

| Updated By: ಮದನ್​ ಕುಮಾರ್​

Updated on: Sep 23, 2021 | 1:22 PM

ಸುದ್ದಿ ವಾಹಿನಿಯೊಂದರ ಚರ್ಚೆಯಲ್ಲಿ ಭಾಗವಹಿಸಿದ್ದ ಜಾವೇದ್​ ಅಖ್ತರ್​ ಅವರು ಆರ್​ಎಸ್​ಎಸ್ (RSS)​ ಬಗ್ಗೆ ಮಾತನಾಡಿದ್ದರು. ಅವರ ಮಾತುಗಳನ್ನು ಸಂಘದ​ ಕಾರ್ಯಕರ್ತರು ಖಂಡಿಸಿದ್ದಾರೆ.

RSS ಬಗ್ಗೆ ಅವಹೇಳನಕಾರಿ ಹೇಳಿಕೆ: ಜಾವೇದ್​ ಅಖ್ತರ್​ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ
ಜಾವೇದ್ ಅಖ್ತರ್
Follow us on

ಬಾಲಿವುಡ್​ನ ಖ್ಯಾತ ಗೀತರಚನಾಕಾರ, ಕವಿ ಜಾವೇದ್​ ಅಖ್ತರ್​ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS​) ಬಗ್ಗೆ ಅವರು ನೀಡಿದ ಹೇಳಿಕೆಗಳು ಅವಹೇಳನಕಾರಿಯಾಗಿವೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಬರೋಬ್ಬರಿ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಎರಡು ಪ್ರತ್ಯೇಕ ಕೇಸ್​ಗಳು ಅವರ ಮೇಲೆ ದಾಖಲಾಗಿದೆ. ಈ ಸಂಬಂಧ ಅವರಿಗೆ ಲೀಗಲ್​ ನೋಟೀಸ್​ ಕಳಿಸಲಾಗಿದೆ.

ಸುದ್ದಿ ವಾಹಿನಿಯೊಂದರ ಚರ್ಚೆಯಲ್ಲಿ ಭಾಗವಹಿಸಿದ್ದ ಜಾವೇದ್​ ಅಖ್ತರ್​ ಅವರು ಆರ್​ಎಸ್​ಎಸ್​ ಬಗ್ಗೆ ಮಾತನಾಡಿದ್ದರು. ಅವರ ಮಾತುಗಳನ್ನು ಆರ್​ಎಸ್​ಎಸ್​ ಕಾರ್ಯಕರ್ತರು ಖಂಡಿಸಿದ್ದಾರೆ. ಲಾಯರ್​ ಸಂತೋಷ್​ ದುಬೆ ಎಂಬುವವರು ಜಾವೇದ್​ ಅಖ್ತರ್​ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಲೀಗಲ್​ ನೋಟೀಸ್​ ಸ್ವೀಕರಿಸಿದ ಏಳು ದಿನಗಳ ಒಳಗಾಗಿ ಸಾರ್ವಜನಿಕವಾಗಿ ಜಾವೇದ್​ ಅಖ್ತರ್​ ಕ್ಷಮೆ ಕೇಳಬೇಕು ಮತ್ತು ತಮ್ಮ ಎಲ್ಲ ಹೇಳಿಕೆಗಳನ್ನು ವಾಪಸ್​ ಪಡೆಯಬೇಕು ಎಂದು ಸಂತೋಷ್​ ದುಬೆ ಪಟ್ಟು ಹಿಡಿದಿದ್ದಾರೆ.

ವಕೀಲರೂ ಆಗಿರುವ ಮತ್ತೋರ್ವ ಆರ್​ಎಸ್​ಎಸ್​ ಕಾರ್ಯಕರ್ತ ದೃಷ್ಟಿಮಾನ್​ ಜೋಶಿ ಅವರು ಕ್ರಿಮಿನಲ್​ ದೂರು ನೀಡಿದ್ದಾರೆ. ‘ಸೆ.4ರಂದು ಜಾವೇದ್​ ಅಖ್ತರ್​ ಅವರು ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಹಿಂದೂ ಸಂಘಟನೆಗಳನ್ನು ತಾಲಿಬಾನ್​ಗೆ ಹೋಲಿಸಿದ್ದನ್ನು ನಾನು ಗಮನಿಸಿದ್ದೇನೆ. ಹಿಂದೂ ಧರ್ಮಕ್ಕಾಗಿ ಕೆಲಸ ಮಾಡುತ್ತಿರುವ ಸಂಘಟನೆಗಳ ಮಾನಹಾನಿ ಮಾಡುವ ಉದ್ದೇಶದಿಂದಲೇ ಜಾವೇದ್​ ಅಖ್ತರ್​ ಈ ರೀತಿ ಹೇಳಿಕೆಗಳನ್ನು ನೀಡಿದ್ದಾರೆ. ಆರ್​ಎಸ್​ಎಸ್ ಈ ಸಮಾಜದಲ್ಲಿ ಕ್ಯಾನ್ಸರ್​ ಇದ್ದಂತೆ ​ಅಂತ ಅವರು ಹೇಳಿದ್ದಾರೆ. ಇದು ಪೂರ್ವನಿಯೋಜಿತ ಕೆಲಸ. ಆರ್​ಎಸ್ಎಸ್​ಗೆ ಸೇರುವವರನ್ನು ದಾರಿ ತಪ್ಪಿಸಲು ಇಂಥ ಹೇಳಿಕೆ ನೀಡಲಾಗಿದೆ’ ಎಂದು ದೂರಿನಲ್ಲಿ ಜೋಶಿ ಆರೋಪಿಸಿದ್ದಾರೆ.

‘ಯಾವುದೇ ಸಾಕ್ಷಿಗಳು ಇಲ್ಲದೇ ಆರ್​ಎಸ್​ಎಸ್​ ಬಗ್ಗೆ ಜಾವೇದ್​ ಅಖ್ತರ್​ ಅವರು ಇಂಥ ಮಾತುಗಳನ್ನು ಆಡಿದ್ದಾರೆ. ಪ್ರಧಾನಮಂತ್ರಿ, ರಾಷ್ಟ್ರಪತಿ ಮತ್ತು ಕೇಂದ್ರದ ಅನೇಕ ಮಂತ್ರಿಗಳು ಆರ್​ಎಸ್​ಎಸ್​ ಬೆಂಬಲಿಗರಾಗಿದ್ದಾರೆ. ಅಂಥ ಸಂಘಟನೆ ಬಗ್ಗೆ ಜಾವೇದ್​ ಅಖ್ತರ್​ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ’ ಎಂದು ದೃಷ್ಟಿಮಾನ್​ ಜೋಶಿ ಹೇಳಿದ್ದಾರೆ. ಅ.30ರಂದು ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ:

‘ಕತ್ತೆಕಿರುಬಗಳನ್ನು ಎದುರಿಸುತ್ತಿರುವ ಒಂಟಿ ಸಿಂಹ’; ಕೋರ್ಟ್​​ ಮೆಟ್ಟಿಲು ಹತ್ತಿಬಂದರೂ ಕಂಗನಾ ಸಿನಿಮೀಯ ಡೈಲಾಗ್​

ಮದುವೆ ಕಾರ್ಡ್​ ಪ್ರಿಂಟ್​ ಆದ್ಮೇಲೆ ಪ್ರೇಯಸಿ ಕೈಯಲ್ಲಿ ಸಿಕ್ಕಿಬಿದ್ದಿದ್ದ ಸಲ್ಮಾನ್ ಖಾನ್​​; ಮುರಿದು ಬಿದ್ದಿತ್ತು ಶಾದಿ