ಕೊಲೆ ಬೆದರಿಕೆಗಳ ಹಿನ್ನೆಲೆಯಲ್ಲಿ ದೂರು ದಾಖಲಿಸಿದ ಕಂಗನಾ; ಚುನಾವಣೆ ಗೆಲ್ಲಲು ದ್ವೇಷ ಹರಡಬೇಡಿ ಎಂದ ನಟಿ

Kangana Ranaut: ಬಾಲಿವುಡ್ ನಟಿ ಕಂಗನಾ ರಣಾವತ್ ಈ ಹಿಂದೆ ನೀಡಿದ್ದ ‘‘ಖಲಿಸ್ತಾನಿ ಭಯೋತ್ಪಾದಕರು’’ ಹೇಳಿಕೆಯ ಕುರಿತಂತೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವರು ದೂರು ದಾಖಲಿಸಿದ್ದಾರೆ. ಅಲ್ಲದೇ ಕಂಗನಾ ದೀರ್ಘ ಟಿಪ್ಪಣಿಯೊಂದನ್ನೂ ಹಂಚಿಕೊಂಡಿದ್ದಾರೆ.

ಕೊಲೆ ಬೆದರಿಕೆಗಳ ಹಿನ್ನೆಲೆಯಲ್ಲಿ ದೂರು ದಾಖಲಿಸಿದ ಕಂಗನಾ; ಚುನಾವಣೆ ಗೆಲ್ಲಲು ದ್ವೇಷ ಹರಡಬೇಡಿ ಎಂದ ನಟಿ
ಕಂಗನಾ ರಣಾವತ್
Follow us
| Updated By: shivaprasad.hs

Updated on:Nov 30, 2021 | 3:25 PM

ಬಾಲಿವುಡ್ ನಟಿ (Bollywood Actress) ಕಂಗನಾ ರಣಾವತ್ (Kangana Ranaut) ಇತ್ತೀಚೆಗೆ ರೈತ ಹೋರಾಟಗಾರರನ್ನು ಖಲಿಸ್ತಾನಿ ಭಯೋತ್ಪಾದಕರಿಗೆ ಹೋಲಿಸಿ ಹೇಳಿಕೆ ನೀಡಿದ್ದರು. ಆ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದ್ದು, ಕಂಗನಾಗೆ ಬೆದರಿಕೆ ಕರೆಗಳು ಬರುತ್ತಿವೆ. ಈ ಕುರಿತಂತೆ ನಟಿ ಕೊಲೆ ಬೆದರಿಕೆ ಹಾಕುತ್ತಿರುವವರ ವಿರುದ್ಧ ದೂರು ದಾಖಲಿಸಿದ್ದು, ಎಫ್​ಐಆರ್ ದಾಖಲಿಸಲಾಗಿದೆ. ಅಲ್ಲದೇ ತಮ್ಮ ಜೀವಕ್ಕೆ ಅಪಾಯವಾದರೆ ಕೆಟ್ಟ ರಾಜಕೀಯ ಮಾಡುವವರೇ ಕಾರಣ ಎಂದು ಹೇಳಿದ್ದಾರೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ಈ ಕುರಿತು ದೀರ್ಘ ಟಿಪ್ಪಣಿ ಬರೆದಿದ್ದು, ಅದರೊಂದಿಗೆ ಅಮೃತಸರದ ಗೋಲ್ಡನ್ ಟೆಂಪಲ್‌ (Golden Temple) ಎದುರು ಸಹೋದರಿ ಹಾಗೂ ತಾಯಿಯೊಂದಿಗೆ ನಿಂತಿರುವ ಚಿತ್ರವನ್ನು ಕಂಗನಾ ಹಂಚಿಕೊಂಡಿದ್ದಾರೆ. ತಮ್ಮ ಬರಹದಲ್ಲಿ ಕಂಗನಾ, ಘಟನೆಯ ಕುರಿತು ತಕ್ಷಣ ಕ್ರಮ ಕೈಗೊಳ್ಳಲು ಪಂಜಾಬ್ ಮುಖ್ಯಮಂತ್ರಿಗೆ ಸೂಚಿಸುವಂತೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮನವಿ ಮಾಡಿದ್ದಾರೆ.

ತಮ್ಮ ಹೇಳಿಕೆ ಹಾಗೂ ಅದಕ್ಕೆ ಬೆದರಿಕೆ ಬರುತ್ತಿರುವುದರ ಬಗ್ಗೆ ಬರೆದುಕೊಂಡಿರುವ ಕಂಗನಾ, “ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹುತಾತ್ಮರನ್ನು ನೆನಪಿಸಿಕೊಳ್ಳುತ್ತಾ, ನಾನು ಎಂದಿಗೂ ದೇಶದ್ರೋಹಿಗಳನ್ನು ಕ್ಷಮಿಸಬಾರದು ಅಥವಾ ಮರೆಯಬಾರದು ಎಂದು ಬರೆದಿದ್ದೇನೆ. ಈ ರೀತಿಯ ಘಟನೆಯಲ್ಲಿ ದೇಶದ ಆಂತರಿಕ ದ್ರೋಹಿಗಳ ಕೈವಾಡವಿದೆ. ದೇಶದೊಳಗಿನ ದೇಶದ್ರೋಹಿಗಳು ಪಿತೂರಿ ನಡೆಸುವ ಮೂಲಕ ದೇಶವಿರೋಧಿ ಶಕ್ತಿಗಳಿಗೆ ಸಹಾಯ ಮಾಡುತ್ತಲೇ ಇದ್ದಾರೆ, ಇದು ಇಂತಹ ಘಟನೆಗಳಿಗೆ ಕಾರಣವಾಯಿತು’’ ಎಂದು ಬರೆದುಕೊಂಡಿದ್ದಾರೆ.

ಮುಂದುವರೆದು ಬರೆದಿರುವ ಕಂಗನಾ, “ನನ್ನ ಪೋಸ್ಟ್​ಗೆ ವಿಚ್ಛಿದ್ರಕಾರಿ ಶಕ್ತಿಗಳಿಂದ ನಿರಂತರ ಬೆದರಿಕೆಗಳು ಬರುತ್ತಿವೆ. ಬಟಿಂಡಾದ ಸಹೋದರನೊಬ್ಬ ನನ್ನನ್ನು ಕೊಲ್ಲುವುದಾಗಿ ಬಹಿರಂಗ ಬೆದರಿಕೆ ಹಾಕಿದ್ದಾನೆ. ಈ ರೀತಿಯ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ದೇಶ ಮತ್ತು ಭಯೋತ್ಪಾದಕ ಶಕ್ತಿಗಳ ವಿರುದ್ಧ ಪಿತೂರಿ ಮಾಡುವವರ ವಿರುದ್ಧ ನಾನು ಮಾತನಾಡಿದ್ದೇನೆ ಮತ್ತು ಮುಂದೆಯೂ ಮಾತನಾಡುತ್ತೇನೆ. ಅಮಾಯಕ ಯೋಧರನ್ನು ಕೊಂದ ನಕ್ಸಲೀಯರು, ತುಕ್ಡೆ ತುಕ್ಡೆ ಗ್ಯಾಂಗ್‌ಗಳು ಅಥವಾ ವಿದೇಶದಲ್ಲಿ ಕುಳಿತಿರುವ ಭಯೋತ್ಪಾದಕರು ಎಂಬತ್ತರ ದಶಕದಲ್ಲಿ ಪಂಜಾಬ್‌ನಲ್ಲಿ ಗುರುಗಳ ಪವಿತ್ರ ಭೂಮಿಯನ್ನು ಕತ್ತರಿಸಿ ಖಲಿಸ್ತಾನ ಮಾಡುವ ಕನಸು ಕಂಡಿದ್ದರು’’ ಎಂದು ಬರೆದಿದ್ದಾರೆ.

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಂಗನಾ, “ನಾನು ಯಾವುದೇ ಜಾತಿ, ಧರ್ಮ ಅಥವಾ ಗುಂಪಿನ ಬಗ್ಗೆ ಅವಹೇಳನಕಾರಿ ಅಥವಾ ದ್ವೇಷಪೂರಿತವಾಗಿ ಏನನ್ನೂ ಹೇಳಿಲ್ಲ. ನಾನು ಕಾಂಗ್ರೆಸ್ ಅಧ್ಯಕ್ಷೆ ಅವರಿಗೆ ನೆನಪಿಸಲು ಬಯಸುತ್ತೇನೆ. ಸೋನಿಯಾ ಜೀ ನೀವೂ ಒಬ್ಬ ಮಹಿಳೆ, ನಿಮ್ಮ ಅತ್ತೆ ಇಂದಿರಾಗಾಂಧಿ ಅವರು ಕೊನೆಯ ಕ್ಷಣದವರೆಗೂ ಈ ಭಯೋತ್ಪಾದನೆಯ ವಿರುದ್ಧ ಪ್ರಬಲವಾಗಿ ಹೋರಾಡಿದರು’’ ಎಂದು ಹೇಳಿದ್ದಾರೆ.

ಕಂಗನಾ ಹಂಚಿಕೊಂಡ ಪೋಸ್ಟ್:

ತಮ್ಮ ಹೇಳಿಕೆಯನ್ನು ರಾಜಕೀಯ ಕಾರಣಗಳಿಗಾಗಿ ತಿರುಚಲಾಗುತ್ತಿದೆ ಎಂದು ಕಂಗನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪಂಜಾಬ್‌ನಲ್ಲಿ ಚುನಾವಣೆಗಳು ನಡೆಯಲಿವೆ, ಇದಕ್ಕಾಗಿ ಕೆಲವರು ನನ್ನ ಮಾತುಗಳನ್ನು ಸಂದರ್ಭವಿಲ್ಲದೆ ಬಳಸುತ್ತಿದ್ದಾರೆ. ಭವಿಷ್ಯದಲ್ಲಿ ನನಗೆ ಏನಾದರೂ ಸಂಭವಿಸಿದರೆ, ದ್ವೇಷ ಮತ್ತು ವಾಕ್ಚಾತುರ್ಯದ ರಾಜಕೀಯ ಮಾಡುವವರು ಮಾತ್ರ ಅದಕ್ಕೆ ಸಂಪೂರ್ಣ ಹೊಣೆಗಾರರಾಗುತ್ತಾರೆ’’ ಎಂದು ಕಂಗನಾ ಹೇಳಿದ್ದಾರೆ. ‘‘ಚುನಾವಣೆ ಗೆಲ್ಲುವ ರಾಜಕೀಯ ಮಹತ್ವಾಕಾಂಕ್ಷೆಗಾಗಿ ಯಾರ ಮೇಲೂ ದ್ವೇಷ ಹರಡಬೇಡಿ ಎಂದು ವಿನಮ್ರ ವಿನಂತಿ’’ ಎಂದು ಕಂಗನಾ ಬರೆದಿದ್ದಾರೆ.

ಕಂಗನಾ ಈ ಹಿಂದೆ ತಮ್ಮ ಹೇಳಿಕೆಯಲ್ಲಿ ‘‘ಖಲಿಸ್ತಾನಿ ಭಯೋತ್ಪಾದಕರು ಈಗಿನ ಸರ್ಕಾರದ ತೋಳನ್ನು ತಿರುಚುತ್ತಿರಬಹುದು (ಕೃಷಿ ಕಾಯ್ದೆ ರದ್ಧತಿಯ ಹೋರಾಟದ ಬಗ್ಗೆ). ಆದರೆ ಆಗ ಇಂದಿರಾ ಗಾಂಧಿ ಖಲಿಸ್ತಾನಿ ಉಗ್ರರನ್ನು ತಮ್ಮ ಬೂಟಿನಡಿ ಹೊಸಕಿ ಹಾಕಿದ್ದರು’’ ಎಂದಿದ್ದರು. ಈ ಹೇಳಿಕೆಯ ಕುರಿತಂತೆ ಕಂಗನಾ ವಿರುದ್ಧ ಪ್ರಕರಣವೂ ದಾಖಲಾಗಿದೆ.

ಇದನ್ನೂ ಓದಿ:

ಖಲಿಸ್ತಾನಿಗಳನ್ನು ಮಹಿಳಾ ಪ್ರಧಾನಿ ಸೊಳ್ಳೆಗಳಂತೆ ಹೊಸಕಿ ಹಾಕಿದ್ದರು ಎಂದ ಕಂಗನಾ ವಿರುದ್ಧ ದೂರು; ಜೈಲಿಗೆ ಹಾಕಲು ಆಗ್ರಹ

ಅರೆಸ್ಟ್​ ಮಾಡಲು ಬರುವ ಪೊಲೀಸರನ್ನು ಎದುರಿಸಲು ಈ ಹಾಟ್​ ಅವತಾರದಲ್ಲಿ ಸಜ್ಜಾದ ಕಂಗನಾ

Published On - 1:56 pm, Tue, 30 November 21