ಖಲಿಸ್ತಾನಿಗಳನ್ನು ಮಹಿಳಾ ಪ್ರಧಾನಿ ಸೊಳ್ಳೆಗಳಂತೆ ಹೊಸಕಿ ಹಾಕಿದ್ದರು ಎಂದ ಕಂಗನಾ ವಿರುದ್ಧ ದೂರು; ಜೈಲಿಗೆ ಹಾಕಲು ಆಗ್ರಹ
ಅಕಾಲಿ ದಳ ನಾಯಕ, ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ , ನಟಿ ಕಂಗನಾ ರಣಾವತ್ ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬಾಲಿವುಡ್ ನಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಂಗನಾ ರಣಾವತ್ ಇತ್ತೀಚೆಗೆ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತ ಹಲವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ನಿನ್ನೆ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಇಂದಿರಾಗಾಂಧಿಯವರ ಹೆಸರನ್ನು ಉಲ್ಲೇಖಿಸದೆ ಒಂದು ಬರಹ ಹಾಕಿದ್ದರು. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಬೆನ್ನಲ್ಲೇ ಸ್ಟೋರಿ ಹಾಕಿದ್ದ ಅವರು, ‘ಇಂದು ಬಹುಶಃ ಖಲಿಸ್ತಾನಿ ಭಯೋತ್ಪಾದಕರು ಸರ್ಕಾರ ತೋಳನ್ನು ತಿರುಚಿತ್ತರಬಹುದು. ಆದರೆ ಈ ಸಂದರ್ಭದಲ್ಲಿ ನಾವು ಒಬ್ಬ ಮಹಿಳೆಯರನ್ನು ಮರೆಯುವಂತಿಲ್ಲ. ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿದ್ದ ಅವರು ಖಲಿಸ್ತಾನಿ ಉಗ್ರರನ್ನು ಸೊಳ್ಳೆಗಳಂತೆ ತಮ್ಮ ಬೂಟಿನಡಿ ಹಾಕಿ ಹೊಸಕಿದ್ದರು. ಖಲಿಸ್ತಾನಿಗಳು ದೇಶವನ್ನು ಒಡೆಯಲು ಬಿಡಲಿಲ್ಲ’ ಎಂದು ಕಂಗನಾ ಹೇಳಿದ್ದರು.
ಆದರೆ ಈ ಇನ್ಸ್ಟಾಗ್ರಾಂ ಸ್ಟೋರಿ ದೊಡ್ಡ ವಿವಾದ ಸೃಷ್ಟಿಸಿದೆ. ಇಲ್ಲಿ ಇಡೀ ಸಿಖ್ ಸಮುದಾಯವನ್ನು ಅವರು ಖಲಿಸ್ತಾನಿ ಭಯೋತ್ಪಾದಕರು ಎಂದು ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿ, ಅಕಾಲಿ ದಳ ನಾಯಕ, ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಂಗನಾ ರಣಾವತ್ ಹೇಳಿಕೆ ಸರಿಯಾಗಿಲ್ಲ. ಇವರು ಉದ್ದೇಶಪೂರ್ವಕವಾಗಿಯೇ ರೈತರ ಪ್ರತಿಭಟನೆಯನ್ನು ಖಲಿಸ್ತಾನಿ ಚಳವಳಿ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಂಗನಾ ರಣಾವತ್ ಅವರದ್ದು ಅತ್ಯಂತ ಕೀಳುಮಟ್ಟದ ಮನಸ್ಥಿತಿ. ಖಲಿಸ್ತಾನಿ ಭಯೋತ್ಪಾದಕರಿಂದಾಗಿ ಇಂದು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕಾಯಿತು ಎಂದು ಆಕೆ ಹೇಳಿದ್ದು ಇಡೀ ಸಿಖ್ ಸಮುದಾಯಕ್ಕೆ ಮಾಡಿದ ಅವಮಾನ. ಆಕೆ ದ್ವೇಷದ ಕಾರ್ಖಾನೆ. ಕಂಗನಾ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಆಕೆಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿ ಮತ್ತು ಭದ್ರತೆಯನ್ನು ವಾಪಸ್ ಪಡೆಯಬೇಕು. ನಟಿಯನ್ನು ಒಂದೋ ಜೈಲಿನಲ್ಲಿಡಿ ಅಥವಾ ಮಾನಸಿಕ ರೋಗದ ಆಸ್ಪತ್ರೆಯಲ್ಲಿ ಬಿಡಿ ಎಂದು ಸಿರ್ಸಾ ಆಗ್ರಹಿಸಿದ್ದಾರೆ.
Filed a Police Complaint agnst #KanganaRanaut for her disrespectful, contemptuous & insulting post on Instagram for calling whole Sikh Community as Khalistani terrorists & by saying that PM Indira Gandhi had crushed them as mosquitoes @CPDelhi @CPMumbaiPolice @ANI @thetribunechd pic.twitter.com/fZ50gxGcjS
— Manjinder Singh Sirsa (@mssirsa) November 20, 2021
ಕಂಗನಾ ರಣಾವತ್ ವಿವಾದಾತ್ಮಕವಾಗಿ ಮಾತನಾಡುತ್ತಿರುವುದು ಇದೇ ಮೊದಲೇನೂ ಅಲ್ಲ. ಮಹಾತ್ಮ ಗಾಂಧಿ ಸ್ವಾತಂತ್ರ್ಯ ಹೋರಾಟದ ಬಗ್ಗೆಯೂ ಪ್ರಶ್ನೆ ಮಾಡಿದ್ದರು. ಒಂದು ಕೆನ್ನೆಗೆ ಹೊಡೆದಾಕ್ಷಣ ಇನ್ನೊಂದು ಕೆನ್ನೆ ತೋರಿಸಿದ್ದಕ್ಕೆ ಸಿಕ್ಕಿದ್ದಲ್ಲ ಸ್ವಾತಂತ್ರ್ಯ. 1947ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂದು ಹೇಳಿದ್ದ ಕಂಗನಾ ರಣಾವತ್, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ರಂತಹ ಕ್ರಾಂತಿಕಾರಿಗಳಿಗೆ ಮಹಾತ್ಮ ಗಾಂಧಿ ಬೆಂಬಲ ಸಿಕ್ಕಿರಲಿಲ್ಲ. ಸುಭಾಷ್ ಚಂದ್ರ ಬೋಸ್ರನ್ನು ಬ್ರಿಟಿಷರಿಗೆ ಒಪ್ಪಿಸಲು ಗಾಂಧಿ, ನೆಹರು ಸಿದ್ಧರಾಗಿದ್ದರು ಎಂದೂ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಳಿಕೊಂಡಿದ್ದರು. ಒಟ್ಟಾರೆ ಇತ್ತೀಚೆಗೆ ಒಂದಲ್ಲ ಒಂದು ಹೇಳಿಕೆ ಮೂಲಕ ನಟಿ ಸುದ್ದಿಯಾಗುತ್ತಲೇ ಇದ್ದಾರೆ.
ಇದನ್ನೂ ಓದಿ: ಧಾನ್ಯ ಲಕ್ಷ್ಮಿಯನ್ನು ಭತ್ತದ ಗದ್ದೆಯಿಂದ ಮನೆಗೆ ತರುವ ಹುತ್ತರಿ ಹಬ್ಬದ ಆಚರಣೆ; ಕೊಡಗಿನ ಸಂಸ್ಕೃತಿ ಅನಾವರಣ