
ಕರಣ್ ಜೋಹರ್ (Karan Johar) ಹಾಗೂ ಕಾರ್ತಿಕ್ ಆರ್ಯನ್ ಮಧ್ಯೆ ಸಾಕಷ್ಟು ಮನಸ್ತಾಪಗಳು ಇದ್ದವು. ಕಾರ್ತಿಕ್ ಆರ್ಯನ್ ಅವರನ್ನು ಸಿನಿಮಾ ಒಂದರಿಂದ ಕರಣ್ ಜೋಹರ್ ಹೊರಕ್ಕೆ ಇಟ್ಟಿದ್ದರು. ಕಾರ್ತಿಕ್ ಆರ್ಯನ್ ಹೊರಗಿನ ವ್ಯಕ್ತಿ ಎಂದು ಯಾವಾಗಲೂ ಅಂದುಕೊಳ್ಳುತ್ತಲೇ ಬರುತ್ತಿದ್ದ ಕರಣ್ ಜೋಹರ್ ಈಗ ಬದಲಾದಂತೆ ಕಾಣುತ್ತಿದ್ದಾರೆ. ಈಗ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದುಕೊಂಡಿದ್ದಾರೆ. ಈ ಸಂದರ್ಭ ಸಂಭಾಷಣೆಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.
‘ನಾನು ನಿಮಗೆ ರಾಜಮನೆತನದವರನ್ನು ಪರಿಚಯಿಸುತ್ತೇನೆ. ಇಲ್ಲಿ ಖಾನ್ ಹಾಗೂ ಕಪೂರ್ಗಳೇ ಒರಿಜಿನಲ್ ಗ್ಯಾಂಗ್ಸ್ಟರ್ಗಳು. ಈಗಿನ ಕಾಲದ ಹೀರೋಗಳು ಫ್ರಾಂಚೈಸಿಗಳನ್ನು ಕದಿಯುತ್ತಾರೆ’ ಎಂದು ಕರಣ್ ಜೋಹರ್ ಹೇಳಿದ್ದಾರೆ. ಇದು ಅವರು ಕಾರ್ತಿಕ್ ಆರ್ಯನ್ಗೆ ಹೇಳಿದ ಮಾತು. ಅಲ್ಲದೆ ತಮ್ಮನ್ನು ತಾವು ಅವರು ಕಿಂಗ್ಮೇಕರ್ ಎಂದು ಕರೆದುಕೊಂಡಿದ್ದಾರೆ.
‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ಮೊದಲು ಅಕ್ಷಯ್ ಕುಮಾರ್ ಅವರು ನಟಿಸಿದ್ದರು. ಆ ಬಳಿಕ ಈ ಚಿತ್ರಕ್ಕೆ ಕಾರ್ತಿಕ್ ಆರ್ಯನ್ ಎಂಟ್ರಿ ಆಯಿತು. ಎರಡನೇ ಪಾರ್ಟ್ಗೆ ಅವರೇ ಹೀರೋ ಆದರು. ಈ ಸಿನಿಮಾ ಹಿಟ್ ಆದ ಬಳಿಕ ಅವರನ್ನೇ ಸಿನಿಮಾದಲ್ಲಿ ಮುಂದುವರಿಸಲಾಗಿದೆ. ಈ ವಿಚಾರ ಇಟ್ಟುಕೊಂಡೇ ಕರಣ್ ಜೋಹರ್ ಅವರು ಕಾರ್ತಿಕ್ ಆರ್ಯನ್ನ ಕಾಲೆಳೆದಿದ್ದಾರೆ.
ಕಾರ್ತಿಕ್ ಆರ್ಯನ್ ಅವರನ್ನು ಹೊರಗಿನವರು ಎಂದೇ ಎಲ್ಲರೂ ಗುರುತಿಸುತ್ತಾ ಬಂದರು. ಆದರೆ, ಅವರಿಗೆ ಆ ಬಗ್ಗೆ ಬೇಸರ ಇಲ್ಲ. ಇದನ್ನು ಮೆಟ್ಟಿ ಅವರು ನಿಂತಿದ್ದಾರೆ. ಈಗ ಸಾಲುಸಾಲು ಸಿನಿಮಾಗಳು ಹಿಟ್ ಆದ ಬೆನ್ನಲ್ಲೇ ಅವರನ್ನು ಬಾಲಿವುಡ್ನ ಸ್ಟಾರ್ ಎಂದು ಪರಿಗಣಿಸಲಾಗುತ್ತಿದೆ. ಅವರ ನಟನೆಯ ‘ಭೂಲ್ ಭುಲಯ್ಯ 3’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿದೆ.
ಇದನ್ನೂ ಓದಿ: ಕರಣ್ ಜೋಹರ್ಗೆ ಇರೋದು ರೋಗವೇ? ವಿಪರೀತ ತೂಕ ಇಳಿದಿದ್ದಕ್ಕೆ ಕಾರಣ ನೀಡಿದ ನಿರ್ಮಾಪಕ
‘ಭೂಲ್ ಭುಲಯ್ಯ 2’ ಚಿತ್ರಕ್ಕೆ ಕಾರ್ತಿಕ್ ಆರ್ಯನ್ ಅವರನ್ನು ಆಯ್ಕೆ ಮಾಡಿದಾಗ ಅನೇಕರು ಈ ಬಗ್ಗೆ ಪ್ರಶ್ನೆ ಮಾಡಿದ್ದರಂತೆ. ಅವರಿಗೆ ಗೆಲುವು ಸಿಗುತ್ತದೆಯೋ ಅಥವಾ ಇಲ್ಲವೋ ಎಂದು ಅನುಮಾನಿಸಿದ್ದರಂತೆ. ಕೊನೆಗೂ ಆ ಅನುಮಾನ ಬದಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.