ರಾಮ ಮಂದಿರ ಉದ್ಘಾಟನೆಗಾಗಿ ವಿಶೇಷ ಹಾಡುಗಳನ್ನು ರೆಕಾರ್ಡ್ ಮಾಡಿಟ್ಟಿದ್ದ ಲತಾ ಮಂಗೇಶ್ಕರ್

| Updated By: ಮದನ್​ ಕುಮಾರ್​

Updated on: Oct 06, 2023 | 5:46 PM

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿತು. ಆ ಬಳಿಕ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ ಆಗಿದೆ. 2024ರ ಜನವರಿ ತಿಂಗಳಲ್ಲಿ ರಾಮ ಮಂದಿರ ಉದ್ಘಾಟನೆ ಆಗುವ ಸಾಧ್ಯತೆ ಇದೆ. ಈ ವಿಶೇಷ ಸಂದರ್ಭಕ್ಕಾಗಿ ಲತಾ ಮಂಗೇಶ್ಕರ್ ಅವರು ಭಜನೆಗಳನ್ನು ಸಿದ್ಧಪಡಿಸಿಟ್ಟಿದ್ದರು.

ರಾಮ ಮಂದಿರ ಉದ್ಘಾಟನೆಗಾಗಿ ವಿಶೇಷ ಹಾಡುಗಳನ್ನು ರೆಕಾರ್ಡ್ ಮಾಡಿಟ್ಟಿದ್ದ ಲತಾ ಮಂಗೇಶ್ಕರ್
ಲತಾ ಮಂಗೇಶ್ವರ್​, ರಾಮ ಮಂದಿರ
Follow us on

ಭಾರತ ಕಂಡ ಅದ್ಭುತ ಗಾಯಕಿಯರ ಪೈಕಿ ಲತಾ ಮಂಗೇಶ್ಕರ್​ (Lata Mangeshkar) ಅವರಿಗೆ ಅಗ್ರಸ್ಥಾನವಿದೆ. ಅವರ ಕಂಠದಲ್ಲಿ ಸಾವಿರಾರು ಹಾಡುಗಳು (Lata Mangeshkar Songs) ಮೂಡಿಬಂದಿವೆ. ಸಣ್ಣ ವಯಸ್ಸಿನಲ್ಲೇ ಹಾಡೋಕೆ ಶುರುಮಾಡಿದ ಅವರು ಹಲವು ದಶಕಗಳಕಾಲ ಸಂಗೀತ ಸೇವೆ ಮಾಡಿದರು. ಈಗ ಅವರ ಕುಟುಂಬದ ಆಪ್ತರಿಂದ ಒಂದು ಅಚ್ಚರಿಯ ವಿಚಾರ ಹೊರಬಿದ್ದಿದೆ. ಕೊನೆಯ ದಿನಗಳಲ್ಲಿ ಲತಾ ಮಂಗೇಶ್ಕರ್ ಅವರು ಶ್ರೀರಾಮನ ಭಜನೆ, ಶ್ಲೋಕಗಳನ್ನು ರೆಕಾರ್ಡ್ ಮಾಡಿದ್ದರಂತೆ. ರಾಮ ಮಂದಿರ (Ram Mandir) ಉದ್ಘಾಟನೆ ವೇಳೆ ತಾವು ಹಾಡಿದ ಶ್ಲೋಕಗಳು, ಭಜನೆಗಳು ಪ್ರಸಾರ ಕಾಣಬೇಕು ಎಂಬುದು ಅವರ ಉದ್ದೇಶವಾಗಿತ್ತು. ಲತಾ ಮಂಗೇಶ್ಕರ್ ಮೃತಪಟ್ಟು ಹಲವು ಸಮಯದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.

ಲತಾ ಮಂಗೇಶ್ಕರ್​ ಅವರು ಸಣ್ಣ ವಯಸ್ಸಿಗೆ ಸಂಗೀತ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಅವರಿಗೆ ದೊಡ್ಡ ಬೇಡಿಕೆ ಸೃಷ್ಟಿ ಆಯಿತು. 13ನೇ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡ ಲತಾ ಮಂಗೇಶ್ಕರ್​, ನಂತರ ಕುಟುಂಬದ ಜವಾಬ್ದಾರಿಯನ್ನೂ ಸ್ವೀಕರಿಸಿದರು. ಅವರು 36 ಭಾಷೆಗಳಲ್ಲಿ 25 ಸಾವಿರ ಹಾಡನ್ನು ಹಾಡಿದ್ದಾರೆ. ‘ನೈಟಿಂಗೇಲ್ ಆಫ್ ಇಂಡಿಯಾ’, ‘ಕ್ವೀನ್ ಆಫ್ ದಿ ಮೆಲೋಡಿ’, ‘ವಾಯ್ಸ್ ಆಫ್ ದಿ ಮಿಲೇನಿಯಮ್’, ‘ವಾಯ್ಸ್ ಆಫ್ ದಿ ನೇಷನ್’ ಸೇರಿ ಹಲವು ಬಿರುದುಗಳಿಂದ ಅವರು ಗುರುತಿಸಿಕೊಂಡಿದ್ದರು. ಈಗ ಅವರ ಕುರಿತು ಅಪರೂಪದ ಮಾಹಿತಿ ಹೊರ ಬಿದ್ದಿದೆ.

ಇದನ್ನೂ ಓದಿ: ಸಣ್ಣವರಿದ್ದಾಗಲೇ ಮದುವೆ ಆಗುವ ಕನಸು ಕಂಡಿದ್ದ ಲತಾ ಮಂಗೇಶ್ಕರ್; ಆ ವ್ಯಕ್ತಿ ಯಾರು?

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿತು. ಆ ಬಳಿಕ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ ಆಗಿದೆ. 2024ರ ಜನವರಿ ತಿಂಗಳಲ್ಲಿ ರಾಮ ಮಂದಿರ ಉದ್ಘಾಟನೆ ಆಗುವ ಸಾಧ್ಯತೆ ಇದೆ. ಈ ವಿಶೇಷ ಸಂದರ್ಭಕ್ಕಾಗಿ ಲತಾ ಮಂಗೇಶ್ಕರ್ ಅವರು ಭಜನೆಗಳನ್ನು ಸಿದ್ಧಪಡಿಸಿಟ್ಟಿದ್ದರು.

ಇದನ್ನೂ ಓದಿ: ತಮ್ಮದೇ ಹಾಡನ್ನೂ ಎಂದಿಗೂ ಕೇಳುತ್ತಿರಲಿಲ್ಲ ಲತಾ ಮಂಗೇಶ್ಕರ್; ಇಲ್ಲಿದೆ ಅಪರೂಪದ ವಿಚಾರ

‘ಲತಾ ಅವರು ಕೊನೆಯ ದಿನಗಳಲ್ಲಿ ರಾಮ ಭಜನೆ ರೆಕಾರ್ಡ್ ಮಾಡಿದ್ದರು. ಅವರಿಗೆ ಆ ಸಂದರ್ಭದಲ್ಲಿ ನಿಲ್ಲಲ್ಲೂ ಆಗುತ್ತಿರಲಿಲ್ಲ. ಆಗ ಮ್ಯೂಸಿಕ್ ಕಂಪೋಸರ್ ಮಯೂರೇಶ್ ಪೈಗೆ ಮನೆಗೆ ಬರುವಂತೆ ಹೇಳಿದರು. ಕೆಲವು ರಾಮ ಭಜನೆ, ಶ್ಲೋಕಗಳನ್ನು ಆಯ್ಕೆ ಮಾಡಿ ಅವುಗಳನ್ನು ಹಾಡಿ, ರೆಕಾರ್ಡ್ ಮಾಡಿದರು. ರಾಮ ಮಂದಿರ ಉದ್ಘಾಟನೆ ಸಂದರ್ಭಕ್ಕಾಗಿ ಅವರು ಇದನ್ನು ರೆಕಾರ್ಡ್ ಮಾಡಿದ್ದರು. ರಾಮ ಮಂದಿರ ಉದ್ಘಾಟನೆ ವೇಳೆ ಇದನ್ನು ಪ್ರಸಾರ ಮಾಡಬೇಕು ಎಂಬುದು ಅವರ ಉದ್ದೇಶ ಆಗಿತ್ತು’ ಎಂದು ಲತಾ ಆಪ್ತರು ಹೇಳಿರುವುದಾಗಿ ವರದಿ ಆಗಿದೆ.

ಇದನ್ನೂ ಓದಿ: Lata Mangeshkar Chauraha ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್ ವೃತ್ತ ಉದ್ಘಾಟಿಸಿದ ಪ್ರಧಾನಿ ಮೋದಿ

ಈ ವಿಚಾರವನ್ನು ಮಯೂರೇಶ್ ಪೈ ಕೂಡ ಖಚಿತಪಡಿಸಿದ್ದಾರೆ. ಅವರು ಲತಾ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ‘ಸಾಯುವವರೆಗೂ ಲತಾ ಅವರು ಹಾಡುತ್ತಲೇ ಇದ್ದರು. ರಾಮ ಮಂದಿರದಲ್ಲಿ ತಮ್ಮ ಧ್ವನಿ ಕೇಳಬೇಕು ಎಂಬುದು ಲತಾ ಅವರ ಆಸೆ ಆಗಿತ್ತು. ಈ ಕಾರಣಕ್ಕೆ ಆರೋಗ್ಯ ಕೈ ಕೊಡುತ್ತಿದ್ದ ಸಂದರ್ಭದಲ್ಲೇ ರೆಕಾರ್ಡಿಂಗ್ ಶುರುಮಾಡಿದ್ದರು. ನಾನು ನೋಡಿದ ಧೈರ್ಯವಂತ ಮಹಿಳೆ ಅವರು’ ಎಂದಿದ್ದಾರೆ ಮಯೂರೇಶ್. ರಾಮ ಮಂದಿರ ಉದ್ಘಾಟನೆ ವೇಳೆ ಲತಾ ಮಂಗೇಶ್ಕರ್ ಅವರ ಹಾಡುಗಳು ಪ್ರಸಾರ ಕಾಣುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ. ಕಳೆದ ವರ್ಷ ಫೆಬ್ರವರಿ 6ರಂದು ಲತಾ ಮಂಗೇಶ್ಕರ್ ಅವರು ಮೃತಪಟ್ಟರು. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.