ಗೋವಿಂದ ಹೇಳಿದ ಕಥೆ ನಂಬುತ್ತಿಲ್ಲ ಮುಂಬೈ ಪೊಲೀಸರು; ಗುಂಡೇಟು ಪ್ರಕರಣಕ್ಕೆ ಟ್ವಿಸ್ಟ್​

ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋವಿಂದ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆದರೆ ಗೋವಿಂದ ಹೇಳಿದ್ದನ್ನು ಪೂರ್ತಿಯಾಗಿ ನಂಬಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಇನ್ನೊಮ್ಮೆ ಹೇಳಿಕೆಯನ್ನು ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಗೋವಿಂದ ಹೇಳಿದ ಕಥೆ ನಂಬುತ್ತಿಲ್ಲ ಮುಂಬೈ ಪೊಲೀಸರು; ಗುಂಡೇಟು ಪ್ರಕರಣಕ್ಕೆ ಟ್ವಿಸ್ಟ್​
ಗೋವಿಂದ

Updated on: Oct 02, 2024 | 6:09 PM

ನಟ ಗೋವಿಂದ ಅವರಿಗೆ ಬುಧವಾರ (ಅಕ್ಟೋಬರ್​ 1) ಬೆಳಗ್ಗೆ ಗುಂಡೇಟು ತಗುಲಿತು. ತಮ್ಮದೇ ರಿವೋಲ್ವಾರ್​ನಿಂದ ಆಕಸ್ಮಿಕವಾಗಿ ಬುಲೆಟ್​ ಸಿಡಿಯಿತು ಎಂದು ಗೋವಿಂದ ಹೇಳಿದ್ದಾರೆ. ಅವರ ಕಾಲಿಗೆ ಗಾಯವಾಗಿದೆ. ಆದರೆ ತಾನಾಗಿಯೇ ಬುಲೆಟ್​ ಸಿಡಿಯಿತು ಎಂದು ಗೋವಿಂದ ಹೇಳಿದ್ದನ್ನು ಮುಂಬೈ ಪೊಲೀಸರು ನಂಬುತ್ತಿಲ್ಲ ಎನ್ನಲಾಗಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗೋವಿಂದ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಗುಂಡೇಟಿನ ಹಿಂದಿರುವ ಅಸಲಿ ವಿಷಯ ಏನು ಎಂಬುದು ತನಿಖೆ ಮುಗಿದ ನಂತರ ತಿಳಿಯಲಿದೆ.

ಗೋವಿಂದ ಅವರ ಮನೆಯಲ್ಲೇ ಈ ಘಟನೆ ನಡೆಯಿತು. ರಿವೋಲ್ವಾರ್​ನಿಂದ ಗುಂಡು ಸಿಡಿದಾಗ ಆ ಸ್ಥಳದಲ್ಲಿ ಗೋವಿಂದ ಒಬ್ಬರೇ ಇದ್ದರು. ಆದ್ದರಿಂದ ಬೇರೆ ಯಾರಿಂದಲೋ ಹತ್ಯೆ ಪ್ರಯತ್ನ ನಡೆದಿಲ್ಲ ಎಂಬುದನ್ನು ಪೊಲೀಸರು ನಂಬಿದ್ದಾರೆ. ಆದರೆ ತಂತಾನೇ ಬುಲೆಟ್​ ಸಿಡಿಯಿತು ಎಂದು ಗೋವಿಂದ ಹೇಳಿದ್ದನ್ನು ಪೊಲೀಸರು ಪೂರ್ತಿಯಾಗಿ ಒಪ್ಪಿಕೊಂಡಿಲ್ಲ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ.

ಇದನ್ನೂ ಓದಿ: ಕಾಲಿಗೆ ಗುಂಡೇಟು ಬಿದ್ದ ಪ್ರಕರಣ; ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಗೋವಿಂದ

ಇನ್ಸ್​ಪೆಕ್ಟರ್​ ದಯಾನಾಯಕ್​ ಅವರ ನೇತೃತ್ವದ ತಂಡವು ಈ ಪ್ರಕರಣದ ತನಿಖೆ ಮಾಡುತ್ತಿದೆ. ಗೋವಿಂದ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ, ನಟನಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಬುಧವಾರ ಮುಂಜಾನೆ ಗುಂಡು ಹಾರಿದ್ದು ಹೇಗೆ ಎಂಬುದನ್ನು ಗೋವಿಂದ ವಿವರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮತ್ತೊಮ್ಮೆ ಅವರ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ತಮ್ಮ ಭದ್ರತೆಗಾಗಿ ಗೋವಿಂದ ಅವರು ರಿವೋಲ್ವಾರ್​ ಲೈಸೆನ್ಸ್​ ಹೊಂದಿದ್ದಾರೆ. ಅವರ ರಿವೋಲ್ವಾರ್​ ತುಂಬ ಹಳೆಯದಾಗಿದ್ದು, ಸರಿಯಾಗಿ ಲಾಕ್​ ಆಗಿರದ ಕಾರಣ ಮಿಸ್​ಫೈರ್​ ಆಗಿದೆ ಎಂಬ ಮಾಹಿತಿ ಇದೆ. ಗೋವಿಂದ ಅವರ ಕಾಲಿಗೆ ಗಾಯ ಆಗಿದ್ದು, 8ರಿಂದ 10 ಹೊಲಿಗೆ ಹಾಕಲಾಗಿದೆ. ಸದ್ಯದಲ್ಲೇ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಲಿದ್ದಾರೆ. ಗೋವಿಂದ ಅವರ ಆಪ್ತರು ಮತ್ತು ಕುಟುಂಬದವರು ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us