Naseeruddin Shah: ‘ದಿ ಕೇರಳ ಸ್ಟೋರಿ ಹಿಟ್​ ಆಗಿದ್ದು ಅಪಾಯಕಾರಿ ಟ್ರೆಂಡ್​’: ವಿವಾದಿತ ಚಿತ್ರದ ಬಗ್ಗೆ ನಸೀರುದ್ದೀನ್​ ಶಾ ಟೀಕೆ

|

Updated on: Jun 02, 2023 | 6:12 PM

The Kerala Story: ‘ಒಂದು ರೀತಿಯಲ್ಲಿ ಇದು ಅಪಾಯಕಾರಿ ಟ್ರೆಂಡ್​. ಅದರಲ್ಲಿ ಅನುಮಾನವೇ ಇಲ್ಲ. ಹಿಟ್ಲರ್​ ಕಾಲದ ನಾಜಿ ಜರ್ಮನಿ ರೀತಿ ನಾವು ಆಗುತ್ತಿದ್ದೇವೆ’ ಎಂದು ನಸೀರುದ್ದೀನ್​ ಶಾ ಹೇಳಿದ್ದಾರೆ.

Naseeruddin Shah: ‘ದಿ ಕೇರಳ ಸ್ಟೋರಿ ಹಿಟ್​ ಆಗಿದ್ದು ಅಪಾಯಕಾರಿ ಟ್ರೆಂಡ್​’: ವಿವಾದಿತ ಚಿತ್ರದ ಬಗ್ಗೆ ನಸೀರುದ್ದೀನ್​ ಶಾ ಟೀಕೆ
ನಸೀರುದ್ದೀನ್​, ‘ದಿ ಕೇರಳ ಸ್ಟೋರಿ’ ಸಿನಿಮಾ ಪೋಸ್ಟರ್​
Follow us on

ತೀವ್ರ ವಿವಾದಕ್ಕೆ ಕಾರಣವಾದ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಬಗ್ಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾಗಿದೆ. ಕೆಲವರು ಈ ಚಿತ್ರದ ಪರವಾಗಿದ್ದರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಬಾಲಿವುಡ್​ನ ಖ್ಯಾತ ನಟ ನಸೀರುದ್ದೀನ್​ ಶಾ (Naseeruddin Shah) ಅವರು ಈಗ ಟೀಕೆ ಮಾಡಿದ್ದಾರೆ. ‘ಬೀಡ್​, ಅಫ್ವಾ, ಫರಾಝ್​ ಮುಂತಾದ ಸಿನಿಮಾಗಳು ಸೋತಿವೆ. ಅಂಥ ಚಿತ್ರಗಳನ್ನು ನೋಡಲು ಜನರಿಗೆ ಇಷ್ಟ ಇಲ್ಲ. ಆದರೆ ದಿ ಕೇರಳ ಸ್ಟೋರಿ ನೋಡಲು ಜನರು ಮುಗಿಬೀಳುತ್ತಾರೆ. ಆ ಚಿತ್ರ ನೋಡುವ ಉದ್ದೇಶ ನನಗೆ ಇಲ್ಲ. ಯಾಕೆಂದರೆ ಅದರ ಬಗ್ಗೆ ಸಾಕಷ್ಟು ಓದಿದ್ದೇನೆ’ ಎಂದು ನಸೀರುದ್ದೀನ್​ ಶಾ ಅವರು ಹೇಳಿದ್ದಾರೆ. ‘ಇಂಡಿಯಾ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ಒಂದು ರೀತಿಯಲ್ಲಿ ಇದು ಅಪಾಯಕಾರಿ ಟ್ರೆಂಡ್​. ಅದರಲ್ಲಿ ಅನುಮಾನವೇ ಇಲ್ಲ. ಹಿಟ್ಲರ್​ ಕಾಲದ ನಾಜಿ ಜರ್ಮನಿ ರೀತಿ ನಾವು ಆಗುತ್ತಿದ್ದೇವೆ. ಆಗ ಸಿನಿಮಾ ಮಾಡುವವರು ಆಯ್ಕೆ ಮಾಡಿಕೊಳ್ಳಲಾಗಿತ್ತು. ಹಿಟ್ಲರ್​ನ ಹೊಗಳುವ ಮತ್ತು ಯಹೂದಿಗಳನ್ನು ತೆಗಳುವ ರೀತಿಯ ಸಿನಿಮಾಗಳನ್ನು ಮಾಡಿಸಲಾಗಿತ್ತು’ ಎಂದು ನಸೀರುದ್ದೀನ್​ ಶಾ ಹೇಳಿದ್ದಾರೆ. ಅವರ ಈ ಹೇಳಿಕೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಖಂಡ ಮನೋಜ್​ ತಿವಾರಿ ಅವರು ಖಂಡಿಸಿದ್ದಾರೆ. ‘ನಸೀರುದ್ದೀನ್​ ಶಾ ಅವರು ಒಳ್ಳೆಯ ನಟ. ಆದರೆ ಅವರ ಉದ್ದೇಶ ಸರಿಯಿಲ್ಲ. ಇದನ್ನು ನಾನು ತುಂಬ ಬೇಸರದಿಂದ ಹೇಳುತ್ತಿದ್ದೇನೆ’ ಎಂದು ಮನೋಜ್​ ತಿವಾರಿ ಹೇಳಿದ್ದಾರೆ.

ಇದನ್ನೂ ಓದಿ: Naseeruddin Shah: ‘ಮೊಘಲರು ಲೂಟಿ ಮಾಡಲು ಬಂದವರಲ್ಲ, ಭಾರತಕ್ಕೆ ಅವರ ಕೊಡುಗೆಯೂ ಇದೆ’: ನಸೀರುದ್ದೀನ್​ ಷಾ

ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ ‘ಐಫಾ ಅವಾರ್ಡ್ಸ್​’ ಕಾರ್ಯಕ್ರಮದಲ್ಲಿ ಕಮಲ್​ ಹಾಸನ್​ ಅವರು ಭಾಗಿ ಆಗಿದ್ದರು. ಆ ವೇಳೆ ಅವರಿಗೆ ‘ದಿ ಕೇರಳ ಸ್ಟೋರಿ ’ ಸಿನಿಮಾ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಈ ಚಿತ್ರವನ್ನು ತೆಗಳಿದರು. ‘ನಾನು ಆಗಲೇ ಹೇಳಿದ್ದೇನೆ. ಇದು ಪ್ರೊಪೊಗಾಂಡ ಸಿನಿಮಾ. ನಾನು ಅದರ ವಿರುದ್ಧವಾಗಿದ್ದೇನೆ. ಸಿನಿಮಾ ಶೀರ್ಷಿಕೆಯ ಕೆಳಗಡೆ ‘ಸತ್ಯ ಘಟನೆ’ ಅಂತ ಬರೆದರೆ ಸಾಕಾಗುವುದಿಲ್ಲ. ಅದು ನಿಜಕ್ಕೂ ಸತ್ಯ ಘಟನೆಯೇ ಆಗಿರಬೇಕು. ಆದರೆ ಈ ಚಿತ್ರದಲ್ಲಿನ ವಿಷಯ ನಿಜವಲ್ಲ’ ಎಂದು ಕಮಲ್​ ಹಾಸನ್​ ಹೇಳಿದರು.

ಇದನ್ನೂ ಓದಿ: ತಾಲಿಬಾನ್​ ಪರ ಇರುವ ಭಾರತದ ಮುಸ್ಲಿಮರಿಗೆ ನಟ ನಸೀರುದ್ದೀನ್​ ಷಾ ಛೀಮಾರಿ; ವಿಡಿಯೋ ವೈರಲ್​

‘ದಿ ಕೇರಳ ಸ್ಟೋರಿ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿದೆ. ಆದರೆ ಈ ಕಲೆಕ್ಷನ್​ನಿಂದ ನಿರ್ದೇಶಕ ಸುದೀಪ್ತೋ ಸೇನ್​ ಅವರಿಗೆ ಸಮಾಧಾನ ಆಗಿಲ್ಲ. ಅವರ ಉದ್ದೇಶ ಬೇರೆಯೇ ಇದೆ. ‘ನಮ್ಮ ಸಿನಿಮಾವನ್ನು ಇನ್ನಷ್ಟು ಜನರು ನೋಡಬೇಕು. ವಿಶ್ವಾದ್ಯಂತ ಇರುವ ಭಾರತದ ಜನರಲ್ಲಿ ಶೇಕಡ 10ರಷ್ಟು ಜನರಿಗಾದರೂ ನಮ್ಮ ಚಿತ್ರದ ಸಂದೇಶ ತಲುಪಬೇಕು. ಆಗಲೇ ಇದನ್ನು ಸಕ್ಸಸ್​ ಅಂತ ನಾವು ಕರೆಬಹುದು’ ಎಂದು ಸುದೀಪ್ತೋ ಸೇನ್​ ಇತ್ತೀಚೆಗೆ ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.