
ವಿಮಲ್ ಪಾನ್ ಮಸಾಲ ಜಾಹೀರಾತಿಗೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ಗೆ ಮಹಾರಾಷ್ಟ್ರ ಎಫ್ಡಿಎ ನೀಡಿದ್ದ ಶೋಕಾಸ್ ನೋಟಿಸ್ ರದ್ದುಗೊಳಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ನಟರ ಪರವಾಗಿ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಈ ಮೂಲಕ ಬಾಲಿವುಡ್ ದಿಗ್ಗಜ ನಟರಿಗೆ ಆರಂಭಿಕವಾಗಿ ಯಾವುದೇ ರೀತಿಯ ತಾತ್ಕಾಲಿಕ ಉಪಶಮನ ಸಿಗದಂತಾಗಿದೆ.
ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಈ ಪ್ರಕರಣವು ದೆಹಲಿ ಹೈಕೋರ್ಟ್ನ ಪ್ರಾಂತೀಯ ನ್ಯಾಯಾಂಗ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ವಿಷಯದಲ್ಲಿ ಯಾವುದೇ ಆಕ್ಷೇಪಣೆಗಳು ಅಥವಾ ಮೇಲ್ಮನವಿಗಳಿದ್ದರೆ ಅದನ್ನು ಮಹಾರಾಷ್ಟ್ರದ ಸೂಕ್ತ ನ್ಯಾಯಾಲಯದಲ್ಲೇ ಪ್ರಶ್ನಿಸಬೇಕು ಎಂದು ಸೂಚಿಸಿದೆ.
ತಮ್ಮ ಕಂಪನಿಯ ಮುಖ್ಯ ಕಚೇರಿ ದೆಹಲಿಯಲ್ಲಿದೆ ಎಂದು ಅರ್ಜಿದಾರ ಕಂಪನಿ ಪಿಬಿ ಅಗ್ರೋ ವಾದಿಸಿತ್ತು. ಜಾಹೀರಾತು ಕಲ್ಪನೆ ಮತ್ತು ನಟರಿಗೆ ನೀಡಿದ ಸಂಭಾವನೆ ಎಲ್ಲವೂ ದೆಹಲಿಯಿಂದಲೇ ನಡೆದಿದೆ ಎಂದು ಕಂಪನಿ ಹೇಳಿತ್ತು. ಆದರೆ ಹೈಕೋರ್ಟ್ ಈ ಎಲ್ಲಾ ವಾದಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಪ್ರಕರಣದ ಪ್ರಮುಖ ಘಟನೆಗಳು ದೆಹಲಿಯಲ್ಲಿ ನಡೆದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಮಹಾರಾಷ್ಟ್ರ ಎಫ್ಡಿಎ ಈ ಶೋಕಾಸ್ ನೋಟಿಸ್ಗಳನ್ನು ನಟರಿಗೆ ಮಾತ್ರ ನೀಡಿದೆ. ಪಿಬಿ ಅಗ್ರೋ ಕಂಪನಿಗೆ ಯಾವುದೇ ನೋಟಿಸ್ ನೀಡಲಾಗಿಲ್ಲ. ಕಂಪನಿಯನ್ನು ಯಾವುದೇ ಸ್ಪಷ್ಟನೆ ಕೇಳಿಲ್ಲ ಅಥವಾ ವಿಚಾರಣೆಗೆ ಕರೆದಿಲ್ಲ. ಆದ್ದರಿಂದ ಕಂಪನಿಯು ದೆಹಲಿ ಹೈಕೋರ್ಟ್ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಪೀಠವು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.
ಇದನ್ನೂ ಓದಿ: ಪಾನ್ ಮಸಾಲ ಜಹೀರಾತು ವಿವಾದ: ಶಾರುಖ್, ಅಜಯ್ ದೇವಗನ್ ನೀಡಿದ್ದ ಸಮರ್ಥನೆ ಏನು?
ವಿಮಲ್ ಇಲೈಚಿ ಜಾರೀತಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಎಫ್ಡಿಎ ನಟರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ದೆಹಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿರುವುದರಿಂದ ಈಗ ನಟರು ಬಾಂಬೆ ಹೈಕೋರ್ಟ್ ಮೆಟ್ಟಿಲೇರುವುದು ಅನಿವಾರ್ಯವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.