ಆಪರೇಷನ್ ಸಿಂದೂರ್ ಹೆಸರಿನಲ್ಲಿ ಸಿನಿಮಾ ಘೋಷಣೆ; ನಿರ್ಮಾಪಕರಿಗೆ ಛೀಮಾರಿ
‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ರೀತಿಯೇ ‘ಆಪರೇಷನ್ ಸಿಂದೂರ್’ ಕುರಿತು ಸಿನಿಮಾ ಮಾಡಲು ತಯಾರಿ ನಡೆದಿದೆ. ನಿರ್ಮಾಪಕರು ಹೊಸ ಪೋಸ್ಟರ್ ಕೂಡ ಬಿಡುಗಡೆ ಮಾಡಿ ಭಾರಿ ಉತ್ಸಾಹ ತೋರಿಸುತ್ತಿದ್ದಾರೆ. ಆದರೆ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಕಾರಣ ಏನು ಎಂಬುದಕ್ಕೆ ಇಲ್ಲಿದೆ ಉತ್ತರ..

ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ (India Pakistan War) ಬಗ್ಗೆ ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಈಗ ‘ಆಪರೇಷನ್ ಸಿಂದೂರ್’ ಕುರಿತಾಗಿಯೂ ಸಿನಿಮಾ (Operation Sindoor Movie) ಮಾಡಲು ಕೆಲವು ನಿರ್ಮಾಪಕರು ಮುಂದಾಗುತ್ತಿದ್ದಾರೆ. ಈಗಾಗಲೇ 30ಕ್ಕೂ ಅಧಿಕ ನಿರ್ಮಾಪಕರು ‘ಆಪರೇಷನ್ ಸಿಂದೂರ್’ (Operation Sindoor) ಟೈಟಲ್ ಪಡೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ‘ನಿಕ್ಕಿ ವಿಕ್ಕಿ ಭಗ್ನಾನಿ ಫಿಲ್ಮ್ಸ್’ ಸಂಸ್ಥೆಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದೇ ಶೀರ್ಷಿಕೆಯಲ್ಲಿ ಸಿನಿಮಾ ಘೋಷಣೆ ಮಾಡಿದೆ. ಪೋಸ್ಟರ್ ಕೂಡ ಬಿಡುಗಡೆ ಮಾಡಿದೆ. ನಿರ್ಮಾಪಕರ ಈ ನಿರ್ಧಾರಕ್ಕೆ ಜನರು ಛೀಮಾರಿ ಹಾಕುತ್ತಿದ್ದಾರೆ.
ಸತ್ಯ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವುದು ತಪ್ಪಲ್ಲ. ಆದರೆ ಅದಕ್ಕೆ ಒಂದು ಸೂಕ್ತ ಸಮಯ ಎಂಬುದು ಇರುತ್ತದೆ. ಸದ್ಯಕ್ಕೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿದೆ. ಪರಿಸ್ಥಿತಿ ಇನ್ನೂ ತಿಳಿಕೊಂಡಿಲ್ಲ. ಏನಾಗುತ್ತೋ ಎಂಬ ಆತಂಕ ಎಲ್ಲರಲ್ಲೂ ಇದೆ. ಹೀಗಿರುವಾಗ ಪೂರ್ತಿ ಚಿತ್ರಣ ಸಿಗುವ ಮೊದಲೇ ಸಿನಿಮಾ ಅನೌನ್ಸ್ ಮಾಡಿದ್ದಕ್ಕೆ ನಿರ್ಮಾಪಕರ ವಿರುದ್ಧ ಜನರು ಅಸಮಾಧಾನ ವಕ್ತಪಡಿಸುತ್ತಿದ್ದಾರೆ.
ಸ್ಕ್ರಿಪ್ಟ್ ಸಿದ್ಧವಾಗಿಲ್ಲ, ಕಲಾವಿದರ ಆಯ್ಕೆ ಆಗಿಲ್ಲ, ಘಟನೆ ಬಗ್ಗೆ ಅಧ್ಯಯನ ನಡೆಸಿಲ್ಲ. ಅಷ್ಟರಲ್ಲಾಗಲೇ ‘ಆಪರೇಷನ್ ಸಿಂದೂರ್’ ಎಂದು ಸಿನಿಮಾ ಘೋಷಣೆ ಮಾಡುವ ಅವಶ್ಯಕತೆ ಏನಿತ್ತು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಉತ್ತಮ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ ಎಂದು ಪೋಸ್ಟರ್ ಮೂಲಕ ತಿಳಿಸಲಾಗಿದೆ.
ಪಾಕಿಸ್ತಾನದ ಉಗ್ರರು ಪಹಲ್ಗಾಮ್ನಲ್ಲಿ ದಾಳಿ ನಡೆಸಿ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡರು. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂದೂರ್’ ಹೆಸರಿನಲ್ಲಿ ತಿರುಗೇಟು ನೀಡಿತು. ಉಗ್ರರ ಅಡಗು ತಾಣಗಳನ್ನು ಛಿದ್ರ ಮಾಡಲಾಯಿತು. ಈ ಘಟನೆಯನ್ನು ಆಧರಿಸಿ ಸಿನಿಮಾ ಮಾಡಲು ಅನೇಕ ನಿರ್ಮಾಪಕರು ಆಸಕ್ತಿ ತೋರಿಸುತ್ತಿದ್ದಾರೆ.
ಇದನ್ನೂ ಓದಿ: ‘ಆಪರೇಷನ್ ಸಿಂದೂರ್’ ಖಂಡಿಸಿದ ಪಾಕ್ ನಟ ಫವಾದ್ ಖಾನ್; ಭಾರತದಲ್ಲಿ ಛೀಮಾರಿ
ಯುದ್ಧ ಮುಗಿಯುವುದಕ್ಕೂ ಮುನ್ನವೇ ಇಂಥ ಘಟನೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿ ಹಣ ಗಳಿಸಲು ಉದ್ದೇಶಿಸಿರುವ ನಿರ್ಮಾಪಕರ ಮನಸ್ಥಿತಿಗೆ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಂತಿಮವಾಗಿ ಈ ಟೈಟಲ್ನಲ್ಲಿ ಯಾರು ಸಿನಿಮಾ ಮಾಡಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.