
ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್-ಕಟ್ ಹೇಳಿರುವ ‘ರಾಮಾಯಣ’ ಚಿತ್ರದ ಟ್ರೇಲರ್ (Ramayana Trailer) ಬಿಡುಗಡೆಯಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಗಡಿ ದಾಟಿ ಪಾಕಿಸ್ತಾನದಲ್ಲೂ ಈ ಟ್ರೇಲರ್ ಭಾರಿ ಸದ್ದು ಮಾಡುತ್ತಿದೆ. ಜುಲೈ 30ರಂದು ಬಿಡುಗಡೆಯಾದ ಈ ಟ್ರೇಲರ್ ವೀಕ್ಷಿಸಿದ ಪಾಕಿಸ್ತಾನದ ಪ್ರಸಿದ್ಧ ಯೂಟ್ಯೂಬರ್ಗಳು ಮತ್ತು ಕಂಟೆಂಟ್ ಕ್ರಿಯೇಟರ್ಗಳು ದೃಶ್ಯ ವೈಭವಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಿಗ್ ಬಜೆಟ್ನಲ್ಲಿ ನಿರ್ಮಾಣ ಆಗಿರುವ ರಾಮಾಯಣ (Ramayana) ಸಿನಿಮಾದಲ್ಲಿ ಯಶ್, ರಣಬೀರ್ ಕಪೂರ್ ಅವರ ಲುಕ್ ಮತ್ತು ನಟನೆಯನ್ನು ಕಂಡು ಪಾಕ್ ಮಂದಿ ಬೆರಗಾಗಿದ್ದಾರೆ.
ಪಾಕಿಸ್ತಾನದ ಪ್ರಸಿದ್ಧ ಯೂಟ್ಯೂಬರ್ ಮಾವಿಯಾ ಉಮರ್ ಫಾರೂಕಿ ಅವರು ‘ರಾಮಾಯಣ’ ಟ್ರೇಲರ್ ವೀಕ್ಷಿಸಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ರಿಯಾಕ್ಷನ್ ವಿಡಿಯೋ ಹಂಚಿಕೊಂಡಿದ್ದಾರೆ. ‘ಪಾಕಿಸ್ತಾನಿ ಪ್ರೇಕ್ಷಕನಾಗಿ ಹೇಳುವುದಾದರೆ, ರಾಮಾಯಣ ಟ್ರೇಲರ್ ಅದ್ಭುತವಾಗಿದೆ. ಭಾರತ ಮತ್ತು ಬಾಲಿವುಡ್ಗೆ ಇಷ್ಟೊಂದು ಹಣ ಎಲ್ಲಿಂದ ಸಿಗುತ್ತದೆ? 1,000 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ನಿರ್ಮಿಸಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಹಾಲಿವುಡ್ ಮಟ್ಟದ VFX ತಂತ್ರಜ್ಞಾನ ಬಳಸಲಾಗಿದೆ. ಇದು ಭಾರತೀಯ ಸಿನಿಮಾ ಹಾಗೂ ಹಿಂದೂ ಧರ್ಮದ ಇತಿಹಾಸ. ಆದರೆ ಒಬ್ಬ ಪಾಕಿಸ್ತಾನಿಯಾಗಿ ನನಗೂ ಈ ಟ್ರೇಲರ್ ನೋಡಿ ರೋಮಾಂಚನವಾಗಿದೆ’ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಈ ಚಿತ್ರದ ಒಟ್ಟು ಬಜೆಟ್ 1,000 ಕೋಟಿ ಅಲ್ಲ, ಬದಲಿಗೆ ಬರೋಬ್ಬರಿ 4,000 ಕೋಟಿ ರೂಪಾಯಿ ಎಂದು ಭಾರತೀಯ ನೆಟ್ಟಿಗರು ಕಮೆಂಟ್ ಬಾಕ್ಸ್ನಲ್ಲಿ ಅವರಿಗೆ ಸರಿಯಾದ ಮಾಹಿತಿಯನ್ನು ನೀಡಿದ್ದಾರೆ. ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಈ ದೃಶ್ಯಕಾವ್ಯದ ಮೊದಲ ಭಾಗವು ಈ ವರ್ಷದ ದೀಪಾವಳಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಟ್ರೇಲರ್ನಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಯಶ್ ಹಾಗೂ ಶ್ರೀರಾಮನ ಪಾತ್ರದಲ್ಲಿರುವ ರಣಬೀರ್ ಕಪೂರ್ ಅವರ ಎಂಟ್ರಿ ಸೀನ್ಗಳನ್ನು ಮಾವಿಯಾ ಉಮರ್ ಮುಕ್ತಕಂಠದಿಂದ ಹೊಗಳಿದ್ದಾರೆ. ರಣಬೀರ್ ಮತ್ತು ಯಶ್ ನಡುವಿನ ನಟನಾ ಜುಗಲ್ಬಂದಿ ನೋಡಲು ಕಾತುರನಾಗಿದ್ದೇನೆ ಎಂದಿದ್ದಾರೆ. ಮತ್ತೊಬ್ಬ ಪಾಕಿಸ್ತಾನಿ ಯೂಟ್ಯೂಬರ್ ಹಸ್ನಾತ್ ಖಾನ್, ‘ರಾವಣನ ಪಾತ್ರದಲ್ಲಿ ಯಶ್ ಲುಕ್ ಕ್ರೇಜಿಯಾಗಿದೆ. ಗ್ರಾಫಿಕ್ಸ್ ಹಾಗೂ ಸಾಹಸ ದೃಶ್ಯಗಳ ವಿನ್ಯಾಸ ಅದ್ಭುತವಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್: ನಟಿ ಲಾರಾ ದತ್ತಾ ಸ್ಟೈಲಿಶ್ ಲುಕ್ ನೋಡಿ ಟ್ರೋಲ್ ಮಾಡಿದ ಜನ
ಕಂಟೆಂಟ್ ಕ್ರಿಯೇಟರ್ ‘ಪಾಕಿಸ್ತಾನಿ ರಿಯಾಕ್ಷನ್ ಬಾಯ್’ ಹಾಗೂ ‘ಇಮಾನ್ ಮೊಅಜ್ಜಮ್ ಎಂಟರ್ಟೇನ್ಮೆಂಟ್’ ಚಾನೆಲ್ನವರು ಸಾಯಿ ಪಲ್ಲವಿ ಅವರ ಸೀತೆಯ ಪಾತ್ರವನ್ನು ಶ್ಲಾಘಿಸಿದ್ದಾರೆ. ‘ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಅತ್ಯಂತ ದೈವಿಕವಾಗಿ ಹಾಗೂ ಸರಳತೆಯಿಂದ ಕಂಗೊಳಿಸುತ್ತಿದ್ದಾರೆ’ ಎಂದು ಹೊಗಳಿದ್ದಾರೆ. ಟ್ರೇಲರ್ನಲ್ಲಿ ಕೈಕೇಯಿ ನೀಡಿದ ಮಾತಿನಂತೆ ಶ್ರೀರಾಮ 14 ವರ್ಷಗಳ ವನವಾಸಕ್ಕೆ ತೆರಳುವುದು, ಸೀತೆ ಹಾಗೂ ಲಕ್ಷ್ಮಣ ಜೊತೆಯಾಗುವುದು ಮತ್ತು ರಾಮ-ರಾವಣರ ನಡುವಿನ ಯುದ್ಧದ ಸನ್ನಿವೇಶಗಳನ್ನು ಭವ್ಯವಾಗಿ ತೋರಿಸಲಾಗಿದೆ. ಆದರೆ, ಇಡೀ ಟ್ರೇಲರ್ನಲ್ಲಿ ಹನುಮಂತನ ಪಾತ್ರದ ಯಾವುದೇ ಸುಳಿವು ನೀಡದಿರುವುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.