
ದೇಶಾದ್ಯಂತ ಭಾರಿ ಕುತೂಹಲ ಮೂಡಿಸಿರುವ ನಿತೇಶ್ ತಿವಾರಿ ನಿರ್ದೇಶನದ ಬಹುಕೋಟಿ ವೆಚ್ಚದ ‘ರಾಮಾಯಣ’ (Ramayana: Part 1) ಚಿತ್ರದ ಪ್ರಚಾರ ಕಾರ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಶನಿವಾರ (ಜುಲೈ 18) ದೆಹಲಿಯಲ್ಲಿ ನಡೆದ ‘ಪ್ರಥಮ ಸಂಕಲ್ಪ’ (Pratham Sankalp) ಕಾರ್ಯಕ್ರಮದಲ್ಲಿ ಚಿತ್ರದ ತಾರಾಗಣ ಹಾಗೂ ತಾಂತ್ರಿಕ ತಂಡದೊಂದಿಗೆ ಸಿನಿಮಾ ಮತ್ತು ಆಧ್ಯಾತ್ಮಿಕ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಈ ವೇಳೆ ನಟಿ ಸಾಯಿ ಪಲ್ಲವಿ (Sai Pallavi) ಅವರು ತಾವು ಮಾಡಿರುವ ಸೀತಾ ಮಾತೆಯ ಪಾತ್ರದ ಬಗ್ಗೆ ಮಾತನಾಡಿದರು.
ಚಿತ್ರದಲ್ಲಿ ಸೀತೆಯ ಪಾತ್ರ ನಿರ್ವಹಿಸಿದ ಅನುಭವದ ಬಗ್ಗೆ ಮಾತನಾಡಿದ ಸಾಯಿ ಪಲ್ಲವಿ, ‘ನಟರಿಗೆ ಇಂತಹ ಪಾತ್ರಗಳು ಸಿಗುವುದು ಸುಲಭವಲ್ಲ. ಯಾಕೆಂದರೆ ದೇವತೆಯ ಪಾತ್ರವನ್ನು ಮಾಡುವುದು ಅಷ್ಟು ಸುಲಭದ ಮಾತಲ್ಲ. ಇದರ ಹಿಂದೆ ಇಡೀ ತಂಡದ ಶ್ರಮ ಮತ್ತು ಆತ್ಮ ಅಡಗಿರುತ್ತದೆ. ನಾನು ಸೀತಾ ಮಾತೆಯ ಪಾತ್ರವನ್ನು ನಾನಾಗಿಯೇ ಆರಿಸಿಕೊಂಡೆ ಎಂದು ನಾನು ಭಾವಿಸುವುದಿಲ್ಲ. ಈ ಪಾತ್ರವನ್ನು ಮಾಡಲು ನನಗೆ ಆಶೀರ್ವಾದ ಸಿಕ್ಕಿದೆ ಅಷ್ಟೇ. ಇದು ನಾವು ಹುಡುಕಿಕೊಂಡು ಹೋಗುವ ಅಥವಾ ಹೀಗೆಯೇ ನಟಿಸಬೇಕು ಎಂದು ಮೊದಲೇ ಬರೆದಿಡುವ ಪಾತ್ರವಲ್ಲ’ ಎಂದಿದ್ದಾರೆ.
‘ನಾನು ಶೂಟಿಂಗ್ ಸಮಯದಲ್ಲಿ ಧ್ಯಾನದಲ್ಲಿ ಕುಳಿತು, ‘ಸೀತಾ ಮಾತೆ, ನೀನೇ ನನ್ನ ಮೂಲಕ ನಟಿಸು. ನನ್ನಿಂದ ಏನನ್ನು ನಿರೀಕ್ಷಿಸುತ್ತೀಯೋ ಅದು ಈ ಚಿತ್ರಕ್ಕೆ ಸಿಗಲಿ’ ಎಂದು ಪ್ರಾರ್ಥಿಸುತ್ತಿದ್ದೆ. ಈ ಪಾತ್ರಕ್ಕಾಗಿ ನನ್ನ ಆಲೋಚನೆಗಳಲ್ಲಿ, ನನ್ನನ್ನು ನಾನು ಅತ್ಯಂತ ಶುದ್ಧವಾಗಿಟ್ಟುಕೊಳ್ಳಲು ಪ್ರಯತ್ನಿಸಿದ್ದೇನೆ. ನನ್ನ ಅತ್ಯುತ್ತಮ ಆವೃತ್ತಿಯನ್ನು ಸೀತೆಯಾಗಿ ಪರದೆಯ ಮೇಲೆ ತರಲು ಶ್ರಮಿಸಿದ್ದೇನೆ’ ಎಂದು ಭಾವುಕರಾಗಿ ನುಡಿದರು.
#SaiPallavi speech at #Ramayana event… pic.twitter.com/WOmushOMXp
— Saran (@rskcinemabuff) July 18, 2026
ನಿರ್ದೇಶಕ ನಿತೇಶ್ ತಿವಾರಿ ಅವರು ಮುಖ್ಯ ಭೂಮಿಕೆಯ ನಟರನ್ನು ಶ್ಲಾಘಿಸುತ್ತಾ, ‘ನಟರ ಕಣ್ಣುಗಳು ಯಾವಾಗಲೂ ಸತ್ಯವನ್ನು ಹೇಳುತ್ತವೆ. ನಾನು ರಣಬೀರ್ ಕಪೂರ್ ಕಣ್ಣುಗಳಲ್ಲಿ ಶ್ರೀರಾಮನನ್ನು ಮತ್ತು ಸಾಯಿ ಪಲ್ಲವಿ ಕಣ್ಣುಗಳಲ್ಲಿ ಸೀತಾ ಮಾತೆಯನ್ನು ಕಂಡೆ. ನಾನು ಪಾತ್ರಕ್ಕಾಗಿ ಹುಡುಕುತ್ತಿದ್ದ ಪ್ರಾಮಾಣಿಕತೆ ಈ ಇಬ್ಬರಲ್ಲಿ ನನಗೆ ಸಿಕ್ಕಿತು. ಸಿನಿಮಾದಲ್ಲಿ ನನಗೆ ರಣಬೀರ್ ಮತ್ತು ಸಾಯಿ ಪಲ್ಲವಿ ಕಾಣಿಸುವುದಿಲ್ಲ, ಕೇವಲ ರಾಮ ಮತ್ತು ಸೀತೆ ಮಾತ್ರ ಕಾಣಿಸುತ್ತಾರೆ’ ಎಂದು ಪ್ರಶಂಸಿಸಿದರು.
ಇದನ್ನೂ ಓದಿ: ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಧ್ವನಿ ಇಲ್ಲ? ‘ಏಕ್ ದಿನ್’ ಸೋಲಿನ ಬಳಿಕ ನಟಿಗೆ ಮತ್ತೊಂದು ಹಿನ್ನಡೆ
ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡುತ್ತಿರುವ ‘ರಾಮಾಯಣ’ ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದರೆ, ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಇವರೊಂದಿಗೆ ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್ ಅಭಿನಯಿಸಿದ್ದಾರೆ. ಕಾಜಲ್ ಅಗರ್ವಾಲ್, ವಿವೇಕ್ ಒಬೆರಾಯ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದ ಮೊದಲ ಭಾಗವು 2026ರ ದೀಪಾವಳಿ ಹಬ್ಬಕ್ಕೆ ತೆರೆಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.