
ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಈ ಚಿತ್ರವನ್ನು ಅನೇಕರು ಹೊಗಳಿದ್ದಾರೆ. ಈಗ ಆ ಸಾಲಿಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಕೂಡ ಸೇರಿದ್ದಾರೆ. ಈ ಚಿತ್ರದ ಬಿಡುಗಡೆಯ ನಂತರ ಭಾರತೀಯ ಚಿತ್ರರಂಗದ ಚಿತ್ರಣವೇ ಬದಲಾಗಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಸೈಫ್, ‘ಧುರಂಧರ್’ ಚಿತ್ರದ ಸಂಗೀತದ ಬಳಕೆಯನ್ನು ಕೊಂಡಾಡಿದ್ದಾರೆ. ಇದು ಚಿತ್ರರಂಗದಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆ ಎಂದು ಅವರು ಬಣ್ಣಿಸಿದ್ದಾರೆ. ಕೆಲವು ಸಿನಿಮಾಗಳು ಒತ್ತಾಯ ಪೂರ್ವಕವಾಗಿ ಹಾಡುಗಳನ್ನು ತುರುಕುತ್ತಾರೆ. ‘ಧುರಂಧರ್’ ಸಿನಿಮಾದಲ್ಲಿ ಆ ರೀತಿ ಆಗಿಲ್ಲ ಎಂಬುದು ಅವರ ಅಭಿಪ್ರಾಯ.
‘ನಾನು ಚಿತ್ರರಂಗವನ್ನು ಧುರಂಧರ್ ಬರುವ ಮುಂಚೆ ಮತ್ತು ಬಂದ ನಂತರ ಎಂದು ನೋಡುತ್ತಿದ್ದೇನೆ. ಈ ಬದಲಾವಣೆಗೆ ತಕ್ಕಂತೆ ನಾವು ಎಚ್ಚೆತ್ತುಕೊಳ್ಳಬೇಕು. ಪ್ರತಿ ಚಿತ್ರಕ್ಕೆ ಹೊಸ ಆಲ್ಬಂ ಮಾಡುವ ಬದಲು, ಪ್ರಪಂಚದಾದ್ಯಂತ ಇರುವ ಅತ್ಯುತ್ತಮ ಸಂಗೀತವನ್ನು ಬಳಸುವುದು ಒಳ್ಳೆಯ ಆಲೋಚನೆ’ ಎಂದು ಸೈಫ್ ಹೇಳಿದ್ದಾರೆ.
‘ಧುರಂಧರ್’ ಚಿತ್ರಕ್ಕೆ ಶಾಶ್ವತ್ ಸಚದೇವ್ ಸಂಗೀತ ನೀಡಿದ್ದಾರೆ. ಅವರು ‘ಶರಾರತ್’ ನಂತಹ ಹೊಸ ಹಾಡುಗಳ ಜೊತೆಗೆ, ಹಳೆಯ ಸೂಪರ್ ಹಿಟ್ ಹಾಡುಗಳನ್ನು ರೀಮಿಕ್ಸ್ ಮಾಡಿ ಬಳಸಿದ್ದಾರೆ. ಈ ಪ್ರಯೋಗಕ್ಕೆ ಸೈಫ್ ಕಡೆಯಿಂದ ಮೆಚ್ಚುಗೆ ಸಿಕ್ಕಿದೆ. ಈ ರೀತಿಯ ಕೆಲಸ ಎಲ್ಲರಿಂದಲೂ ಆಗಬೇಕು ಎಂಬುದು ಅವರ ಆಸೆ.
ಇದನ್ನೂ ಓದಿ: ‘ಡಾನ್ 3’ ವಿವಾದ: ರಣವೀರ್ ಸಿಂಗ್ ದೊಡ್ಡ ನಿರ್ಧಾರ; 18 ತಿಂಗಳು ಯಾರಿಗೂ ಸಿಗಲ್ಲ ನಟ
‘ಧುರಂಧರ್’ ಹಾಗೂ ‘ಧುರಂಧರ್ 2’ ಭಾರಿ ಯಶಸ್ಸು ಕಂಡಿವೆ. ಈ ಸಿನಿಮಾಗಳು ಒಟ್ಟಾರೆಯಾಗಿ 3,100 ಕೋಟಿ ರೂಪಾಯಿಗಳಿಗೂ ಹೆಚ್ಚು ಕಲೆಕ್ಷನ್ ಮಾಡಿವೆ. ‘ಧುರಂಧರ್ 2’ ಭಾರತದ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರಗಳಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್ ಮತ್ತು ಮಾಧವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸೈಫ್ ಅಲಿ ಖಾನ್ ಇತ್ತೀಚೆಗೆ ನೆಟ್ಫ್ಲಿಕ್ಸ್ನ ‘ಕರ್ತವ್ಯ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ನಟನೆಗೆ ಒಳ್ಳೆಯ ಪ್ರಶಂಸೆ ಸಿಕ್ಕಿತ್ತು. ಸದ್ಯ ಅವರು ‘ಹಮ್ ಹಿಂದೂಸ್ತಾನಿ’ ಮತ್ತು ಪ್ರಿಯದರ್ಶನ್ ನಿರ್ದೇಶನದ ‘ಹೈವಾನ್’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಹೈವಾನ್’ ಚಿತ್ರದ ಮೂಲಕ ಅವರು ಸುಮಾರು ಎರಡು ದಶಕಗಳ ನಂತರ ಅಕ್ಷಯ್ ಕುಮಾರ್ ಜೊತೆ ಮತ್ತೆ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.