ನಟ ಸಲ್ಮಾನ್ ಖಾನ್ (Salman Khan) ಅವರಿಗೆ ನಿರಂತರವಾಗಿ ಜೀವ ಬೆದರಿಕೆ ಬರುತ್ತಲೇ ಇದೆ. ಇದು ಸಲ್ಲು ಅಭಿಮಾನಿಗಳ ಆತಂಕಕ್ಕೆ ಕಾರಣ ಆಗಿದೆ. ಸಲ್ಮಾನ್ ಖಾನ್ ಅವರಿಗೆ ಈಗಾಗಲೇ ಸರ್ಕಾರದ ಕಡೆಯಿಂದ ವೈ ಪ್ಲಸ್ ಕೆಟಗರಿ ಭದ್ರತೆ ನೀಡಲಾಗಿದೆ. ಹೀಗಿರುವಾಗಲೇ ನಟ ಸಲ್ಮಾನ್ ಖಾನ್ ಅವರ ಆಪ್ತ ವ್ಯಕ್ತಿಯ ಮೇಲೆ ರಾಡ್ ಮತ್ತು ಕಲ್ಲುಗಳಿಂದ ಹಲ್ಲೆ ನಡೆದಿದೆ. ಈ ಸುದ್ದಿ ಸಂಚಲನ ಮೂಡಿಸಿದೆ. ಸಾಲದ ವಿಚಾರಕ್ಕೆ ಈ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ. ಇದು ಹಣದ ವಿಚಾರಕ್ಕೆ ನಡೆದ ಗಲಾಟೆ ಎಂದು ತಿಳಿದ ಬಳಿಕ ಸಲ್ಲು ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿ ಸಲ್ಮಾನ್ ಖಾನ್ ಅವರ ಪ್ರೊಡಕ್ಷನ್ ಹೌಸ್ನಲ್ಲಿ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಹೆಸರು ಪಾಲೇಶ್ವರ್ ಚೌಹಾಣ್. ಇವರ ಮೇಲೆ ಕೆಲವರು ರಾಡ್ನಿಂದ ಹೊಡೆದಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪಾಲೇಶ್ವರ್ ಚೌಹಾಣ್ ಬಾರ್ ಮ್ಯಾನೇಜರ್ಗೆ ಸ್ವಲ್ಪ ಹಣವನ್ನು ಸಾಲವಾಗಿ ನೀಡಿದ್ದರು. ಬಾರ್ ಮ್ಯಾನೇಜರ್ ಹೆಸರು ಸತೀಶ್. ಅವರು ಪಾಲೇಶ್ವರ್ಗೆ ಸ್ವಲ್ಪ ಹಣವನ್ನು ಹಿಂದಿರುಗಿಸಿದ್ದರು. ಉಳಿದ ಹಣವನ್ನು ಹಿಂದಿರಿಗಿಸಿ ಎಂದು ಕೇಳಲು ಪಾಲೇಶ್ವರ್ ಬಾರ್ಗೆ ತೆರಳಿದರು. ಆಗ ಸಮಯ ರಾತ್ರಿ 10 ಗಂಟೆ. ಈಗ ಬರುವುದಾಗಿ ಹೇಳಿ ಸತೀಶ್ ಅಲ್ಲಿಂದ ತೆರಳಿದರು. ಬಾರ್ನಲ್ಲಿ 3 ಗಂಟೆಗಳ ಕಾಲ ಪಾಲೇಶ್ವರ್ ಕಾದರು. ಆದರೆ, ಸತೀಶ್ ಬರಲೇ ಇಲ್ಲ.
ಮಧ್ಯರಾತ್ರಿ 1 ಗಂಟೆಗೆ ಸತೀಶ್ ಆಗಮಿಸಿದರು. ‘ಇದು ಬಾರ್ ಮುಚ್ಚುವ ಸಮಯ. ನಾಳೆ ಮಾತನಾಡೋಣ’ ಎಂದು ಹೇಳಿ ಹೊರಟೇ ಬಿಟ್ಟರು ಸತೀಶ್. ಇದು ಪಾಲೇಶ್ವರ್ ಕೋಪಕ್ಕೆ ಕಾರಣವಾಯಿತು. ಅವರು ಬಾರ್ ಹೊರಗೆ ಸತೀಶ್ನ ಪ್ರಶ್ನೆ ಮಾಡಿದರು. ಈ ವೇಳೆ ಪಾಲೇಶ್ವರ್ ಮೇಲೆ ಸತೀಶ್ ಹಾಗೂ ಅವರ ಸಹಚರರು ಹಲ್ಲೆ ಮಾಡಿದ್ದಾರೆ. ಪಾಲೇಶ್ವರ್ ಚೌಹಾಣ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ‘ಸಲ್ಮಾನ್ ಖಾನ್ ನನ್ನ ದ್ವೇಷಕ್ಕೂ ಅರ್ಹನಲ್ಲ’; ಸಿಟ್ಟಾದ ಖ್ಯಾತ ಗಾಯಕ
ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪಾಲೇಶ್ವರ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಾಲೇಶ್ವರ್ ನೀಡಿದ ದೂರಿನ ಮೇರೆಗೆ ಪೊಲೀಸರು ಸತೀಶ್ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಮುಂದೇನು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಇದೆ. ಅವರ ಆಪ್ತ ವರ್ಗದವರ ಮೇಲೆ ಹಲ್ಲೆ ಆದರೆ ಅದು ಸಾಕಷ್ಟು ಚರ್ಚೆ ಆಗುತ್ತದೆ. ಈ ಕಾರಣಕ್ಕೆ ಪಾಲೇಶ್ವರ್ ಮೇಲಿನ ಹಲ್ಲೆ ಇಷ್ಟು ದೊಡ್ಡ ಸುದ್ದಿ ಆಗಿದೆ. ಸಲ್ಲುಗೆ ಲಾರೆನ್ಸ್ ಗ್ಯಾಂಗ್ನಿಂದ ಬೆದರಿಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ