ಮನೆ ಮೇಲೆ ಗುಂಡಿನ ದಾಳಿ ನಡೆದ ಬಳಿಕ ದುಬೈಗೆ ತೆರಳಿದ ಸಲ್ಮಾನ್​ ಖಾನ್​

ಬಾಲಿವುಡ್ ನಟ ಸಲ್ಮಾನ್​ ಖಾನ್​ ಅವರ ಮನೆ ಎದುರು ಗುಂಡಿನ ದಾಳಿ ನಡೆದ ನಂತರ ಇದೇ ಮೊದಲ ಬಾರಿಗೆ ಅವರು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಬಿಗಿ ಭದ್ರತೆಯೊಂದಿಗೆ ಬುಲೆಟ್​ ಪ್ರೂಫ್​ ಕಾರಿನಲ್ಲಿ ಅವರು ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ನಂತರ ದುಬೈಗೆ ತೆರಳಿದ್ದಾರೆ. ಅಲ್ಲಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಆ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ವೈರಲ್​ ಆಗಿವೆ.

ಮನೆ ಮೇಲೆ ಗುಂಡಿನ ದಾಳಿ ನಡೆದ ಬಳಿಕ ದುಬೈಗೆ ತೆರಳಿದ ಸಲ್ಮಾನ್​ ಖಾನ್​
ಸಲ್ಮಾನ್​ ಖಾನ್​

Updated on: Apr 19, 2024 | 9:55 PM

ನಟ ಸಲ್ಮಾನ್​ ಖಾನ್​ (Salman Khan) ಅವರಿಗೆ ಜೀವ ಬೆದರಿಕೆ ಇದೆ. ಇತ್ತೀಚೆಗಷ್ಟೇ ಅವರ ಮನೆಯ ಮೇಲೆ ಕಿಡಿಗೇಡಿಗಳು ಗುಂಡಿನ ದಾಳಿ ಮಾಡಿದ್ದಾರೆ. ಆ ಘಟನೆ ನಂತರ ಸಲ್ಮಾನ್ ಖಾನ್​ ಅವರ ಆಪ್ತರು ಹಾಗೂ ಅಭಿಮಾನಿಗಳ ಮನದಲ್ಲಿ ಆತಂಕ ಸೃಷ್ಟಿ ಆಗಿದೆ. ಕೊಲೆ ಬೆದರಿಕೆಯ ಹಿನ್ನೆಲೆಯಲ್ಲಿ ಸಲ್ಮಾನ್​ ಖಾನ್​ ಅವರು ಭದ್ರತೆ ಹೆಚ್ಚಿಸಿಕೊಂಡಿದ್ದಾರೆ. ಬಹುಬೇಡಿಕೆಯ ನಟನಾದ ಅವರು ಮನೆಯಲ್ಲೇ ಕುಳಿತಿರಲು ಸಾಧ್ಯವಿಲ್ಲ. ಸಿನಿಮಾ, ಜಾಹೀರಾತು ಮುಂತಾದ ಕೆಲಸಗಳ ಸಲುವಾಗಿ ಅವರು ಹೊರಗೆ ಬರಲೇ ಬೇಕು. ಈಗ ಅವರು ದುಬೈಗೆ (Dubai) ತೆರಳಿದ್ದಾರೆ.

ಮನೆಯ ಮೇಲೆ ಗುಂಡಿನ ದಾಳಿ ನಡೆದ ಬಳಿಕ ಇದೇ ಮೊದಲ ಬಾರಿಗೆ ಸಲ್ಮಾನ್​ ಖಾನ್​ ಅವರು ವಿದೇಶಕ್ಕೆ ಪ್ರಯಾಣ ಮಾಡಿದ್ದಾರೆ. ಖಾಸಗಿ ಕೆಲಸದ ಸಲುವಾಗಿ ಅವರು ದುಬೈಗೆ ಹೋಗಿದ್ದಾರೆ ಎನ್ನಲಾಗಿದೆ. ಅಲ್ಲಿಯೂ ಅವರಿಗೆ ಅಪಾರ ಸಂಖ್ಯೆಯ ಅಭಿಮಾಗಳು ಇದ್ದಾರೆ. ದುಬೈನಲ್ಲಿ ಕಾಣಿಸಿಕೊಂಡ ಸಲ್ಮಾನ್ ಖಾನ್​ ಅವರ ಫೋಟೋ ಕ್ಲಿಕ್ಕಿಸಲು ಪಾಪರಾಜಿಗಳು ಮುಗಿಬಿದ್ದಿದ್ದಾರೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ ವಿರೋಧಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ

ಸಲ್ಮಾನ್​ ಖಾನ್​ ಅವರಿಗೆ ಭಾರತದಲ್ಲಿ ವೈ ಪ್ಲಸ್​ ಭದ್ರತೆ ನೀಡಲಾಗಿದೆ. ಬುಲೆಟ್​ ಪ್ರೂಫ್​ ಕಾರಿನಲ್ಲಿ ಅವರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ವರದಿಗಳ ಪ್ರಕಾರ, ಸಲ್ಮಾನ್​ ಖಾನ್​ ಅವರು ದುಬೈನಲ್ಲಿ ನಡೆಯುವ ಒಂದು ಕಾರ್ಯಕ್ರಮಕ್ಕೆ ಹಾಜರಿ ಹಾಕಲಿದ್ದಾರೆ. ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಎದುರು ಗುಂಡು ಹಾರಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ ಅವರು ಸಲ್ಮಾನ್​ ಖಾನ್​ ಅವರ ನಿವಾಸಕ್ಕೆ ಬಂದು ಹೋಗಿದ್ದಾರೆ. ಸಲ್ಮಾನ್​ ಖಾನ್​ ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಇಡಿ ದಾಳಿ ಬಳಿಕ ಸಲ್ಮಾನ್​ ಖಾನ್​ ಮನೆಗೆ ಓಡೋಡಿ ಬಂದ ಶಿಲ್ಪಾ ಶೆಟ್ಟಿ

ಸಿನಿಮಾ ವಿಚಾರಕ್ಕೆ ಬರುವುದಾದರೆ, ಈ ವರ್ಷ ಈದ್​ ಪ್ರಯುಕ್ತ ಸಲ್ಮಾನ್​ ಖಾನ್​ ಅವರ ಹೊಸ ಸಿನಿಮಾ ಅನೌನ್ಸ್​ ಆಗಿದೆ. ಅದಕ್ಕೆ ‘ಸಿಕಂದರ್​’ ಎಂದು ಶೀರ್ಷಿಕೆ ಇಡಲಾಗಿದೆ. ಆ ಚಿತ್ರಕ್ಕೆ ಎ.ಆರ್​. ಮುರುಗದಾಸ್​ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಮೂಲಕ ಮುರುಗದಾಸ್​ ಅವರು 8 ವರ್ಷಗಳ ದೀರ್ಘ ಗ್ಯಾಪ್​ ಬಳಿಕ ಹಿಂದಿ ಚಿತ್ರರಂಗಕ್ಕೆ ಕಮ್​ಬ್ಯಾಕ್​ ಮಾಡುತ್ತಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾದ ಶೂಟಿಂಗ್​ ಆರಂಭ ಆಗಲಿದೆ. 2025ರ ಈದ್​ ಸಮಯದಲ್ಲಿ ‘ಸಿಕಂದರ್​’ ಸಿನಿಮಾ ರಿಲೀಸ್​ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.