ಇಡಿ ದಾಳಿ ಬಳಿಕ ಸಲ್ಮಾನ್ ಖಾನ್ ಮನೆಗೆ ಓಡೋಡಿ ಬಂದ ಶಿಲ್ಪಾ ಶೆಟ್ಟಿ
ಬಾಲಿವುಡ್ ಸೆಲೆಬ್ರಿಟಿಗಳಾದ ಸಲ್ಮಾನ್ ಖಾನ್ ಮತ್ತು ಶಿಲ್ಪಾ ಶೆಟ್ಟಿ ಅವರಿಗೆ ಈಗ ಕಷ್ಟದ ಕಾಲ. ಒಂದೆಡೆ ಶಿಲ್ಪಾ ಶೆಟ್ಟಿ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನೊಂದೆಡೆ ಸಲ್ಮಾನ್ ಖಾನ್ ಅವರ ಮನೆ ಮೇಲೆ ಕಿಡಿಗೇಡಿಗಳು ಗುಂಡು ಹಾರಿಸಿದ ಘಟನೆಯಿಂದ ಆತಂಕ ಮೂಡಿದೆ. ಸಲ್ಮಾನ್ ಖಾನ್ ನಿವಾಸಕ್ಕೆ ಶಿಲ್ಪಾ ಶೆಟ್ಟಿ ದಿಢೀರ್ ಭೇಟಿ ನೀಡಿದ್ದಾರೆ.
![ಇಡಿ ದಾಳಿ ಬಳಿಕ ಸಲ್ಮಾನ್ ಖಾನ್ ಮನೆಗೆ ಓಡೋಡಿ ಬಂದ ಶಿಲ್ಪಾ ಶೆಟ್ಟಿ](https://images.tv9kannada.com/wp-content/uploads/2024/04/shilpa-shetty-salman-khan.jpg?w=1280)
ಖ್ಯಾತ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಅವರ ಪತಿ ರಾಜ್ ಕುಂದ್ರಾ (Raj Kundra) ಒಡೆತನದ ಪ್ರಾಪರ್ಟಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ವರದಿಗಳ ಪ್ರಕಾರ, ಬರೋಬ್ಬರಿ 97 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಚ್ಚರಿಯ ವಿಷಯ ಏನೆಂದರೆ, ಈ ಘಟನೆಯ ಬೆನ್ನಲ್ಲೇ ಶಿಲ್ಪಾ ಶೆಟ್ಟಿ ಅವರು ನಟ ಸಲ್ಮಾನ್ ಖಾನ್ (Salman Khan) ನಿವಾಸಕ್ಕೆ ಓಡೋಡಿ ಬಂದಿದ್ದಾರೆ. ಅವರ ಜೊತೆ ತಾಯಿ ಸುನಂಧಾ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಬಾಲಿವುಡ್ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಇತ್ತೀಚೆಗಷ್ಟೇ ಗುಂಡಿನ ದಾಳಿ ಮಾಡಲಾಗಿತ್ತು. ಆ ಬಳಿಕ ಅವರ ಆಪ್ತರು ಮತ್ತು ಅಭಿಮಾನಿಗಳಿಗೆ ಆತಂಕ ಹೆಚ್ಚಿದೆ. ಸಲ್ಮಾನ್ ಖಾನ್ ಅವರ ಕುಟುಂಬಕ್ಕೆ ಧೈರ್ಯ ತುಂಬುವ ಸಲುವಾಗಿ ಶಿಲ್ಪಾ ಶೆಟ್ಟಿ ಅವರು ಮುಂಬೈನ ಬಾಂದ್ರಾದಲ್ಲಿ ಇರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ಗೆ ಬಂದಿದ್ದಾರೆ ಎಂದು ಹೇಳಲಾಗಿದೆ.
ಶಿಲ್ಪಾ ಶೆಟ್ಟಿ ಮತ್ತು ಸಲ್ಮಾನ್ ಖಾನ್ ಅವರ ನಡುವೆ ಹಲವು ವರ್ಷಗಳ ಒಡನಾಟ ಇದೆ. ‘ದಸ್’, ‘ಫಿರ್ ಮಿಲೇಂಗೆ’, ‘ಶಾದಿ ಕರ್ಕೆ ಫಸ್ ಗಯಾ ಯಾರ್’, ‘ಗರ್ವ್’ ಮುಂತಾದ ಸಿನಿಮಾಗಳಲ್ಲಿ ಅವರಿಬ್ಬರು ಜೊತೆಯಾಗಿ ನಟಿಸಿದ್ದಾರೆ. ಈಗ ಇಬ್ಬರಿಗೂ ವೈಯಕ್ತಿಕವಾಗಿ ಕಷ್ಟದ ಸಮಯ ಎದುರಾಗಿದೆ. ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವ ಪ್ರಯತ್ನ ನಡೆದಿದೆ. ಇತ್ತ ಶಿಲ್ಪಾ ಶೆಟ್ಟಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಮತ್ತು ಶಿಲ್ಪಾ ಶೆಟ್ಟಿ ಅವರ ಪರಸ್ಪರ ಬೆಂಬಲಕ್ಕೆ ನಿಂತಿದ್ದಾರೆ. ಸದ್ಯದ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡುವ ಸಲುವಾಗಿ ಗ್ಯಾಲಕ್ಸಿ ಅಪಾರ್ಟ್ಮೆಂಟ್ಗೆ ಶಿಲ್ಪಾ ಶೆಟ್ಟಿ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ
ಏಪ್ರಿಲ್ 14ರ ಮುಂಜಾನೆ ಸಲ್ಮಾನ್ ಖಾನ್ ಅವರ ಮನೆ ಎದುರು ಇಬ್ಬರು ಅಪರಿಚಿತರು ಗುಂಡು ಹಾರಿಸಿದರು. ದೇಶಾದ್ಯಂತ ಆ ಸುದ್ದಿಯಿಂದ ಸಂಚಲನ ಸೃಷ್ಟಿ ಆಯಿತು. ಆರೋಪಿಗಳನ್ನು ಬಂಧಿಸಿ ಈಗಾಗಲೇ ವಿಚಾರಣೆ ನಡೆಸಲಾಗುತ್ತಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಲ್ಮಾನ್ ಖಾನ್ ನಿವಾಸಕ್ಕೆ ಬಂದು ಧೈರ್ಯ ತುಂಬಿದ್ದಾರೆ. ಕಿಡಿಗೇಡಿಗಳನ್ನು ಮಟ್ಟ ಹಾಕುವುದಾಗಿ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.