‘ಮುಸ್ಲಿಮರನ್ನು ಯಾಕೆ ಕೆಟ್ಟದಾಗಿ ತೋರಿಸಿದ್ದೀರಿ?’: ಪತ್ರಕರ್ತೆ ಪ್ರಶ್ನೆಗೆ ‘ಸೂರ್ಯವಂಶಿ’ ನಿರ್ದೇಶಕನ ಖಡಕ್​ ತಿರುಗೇಟು

| Updated By: ಮದನ್​ ಕುಮಾರ್​

Updated on: Nov 15, 2021 | 1:21 PM

Sooryavanshi | Rohit Shetty: ಪತ್ರಕರ್ತೆ ಕೇಳಿದ ಪ್ರಶ್ನೆಯಿಂದಾಗಿ ರೋಹಿತ್​ ಶೆಟ್ಟಿಗೆ ಕೋಪ ಬಂದಂತೆ ಕಂಡಿತು. ತಮ್ಮ ಈ ಹಿಂದಿನ ಸಿನಿಮಾಗಳಲ್ಲಿ ವಿಲನ್​ ಪಾತ್ರಗಳು ಹಿಂದು ಧರ್ಮಕ್ಕೆ ಸೇರಿದ್ದವಾಗಿದ್ದವು. ಆಗ ಯಾಕೆ ಅದೊಂದು ಸಮಸ್ಯೆ ಎನಿಸಲಿಲ್ಲ ಎಂದು ಅವರು ಮರುಪ್ರಶ್ನೆ ಎಸೆದರು.

‘ಮುಸ್ಲಿಮರನ್ನು ಯಾಕೆ ಕೆಟ್ಟದಾಗಿ ತೋರಿಸಿದ್ದೀರಿ?’: ಪತ್ರಕರ್ತೆ ಪ್ರಶ್ನೆಗೆ ‘ಸೂರ್ಯವಂಶಿ’ ನಿರ್ದೇಶಕನ ಖಡಕ್​ ತಿರುಗೇಟು
ರೋಹಿತ್ ಶೆಟ್ಟಿ
Follow us on

ಅಕ್ಷಯ್​ ಕುಮಾರ್​ (Akshay Kumar) ಮತ್ತು ಕತ್ರಿನಾ ಕೈಫ್​ (Katrina Kaif) ಜೋಡಿಯ ‘ಸೂರ್ಯವಂಶಿ’ (Sooryavanshi) ಸಿನಿಮಾ ಸೂಪರ್​ ಹಿಟ್​ ಆಗಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ರೋಹಿತ್​ ಶೆಟ್ಟಿ ಆ್ಯಕ್ಷನ್​-ಕಟ್​ ಹೇಳಿದ್ದಾರೆ. 9ನೇ ದಿನಕ್ಕೆ ಈ ಚಿತ್ರ ವಿಶ್ವಾದ್ಯಂತ 209 ಕೋಟಿ ರೂ. ಗಳಿಕೆ ಮಾಡಿದೆ. ಸಿನಿಮಾದ ಯಶಸ್ಸಿನ ನಂತರ ಹಲವು ಮಾಧ್ಯಮಗಳಿಗೆ ರೋಹಿತ್​ ಶೆಟ್ಟಿ (Rohit Shetty) ಅವರು ಸಂದರ್ಶನ ನೀಡಿದ್ದಾರೆ. ಈ ವೇಳೆ ಪತ್ರಕರ್ತೆಯೊಬ್ಬರು ರೋಹಿತ್​ ಶೆಟ್ಟಿಗೆ ಕಿರಿಕಿರಿ ಆಗುವಂತಹ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ರೋಹಿತ್​ ಶೆಟ್ಟಿ ಕಡೆಯಿಂದ ಖಡಕ್​ ಉತ್ತರ ಬಂದಿದೆ. ‘ನಿಮ್ಮ ಸಿನಿಮಾದಲ್ಲಿ ಮುಸ್ಲಿಂ (Muslims) ಪಾತ್ರಗಳನ್ನು ಕೆಟ್ಟದಾಗಿ ಯಾಕೆ ತೋರಿಸಲಾಗಿದೆ’ ಎಂಬ ಪ್ರಶ್ನೆಗೆ ರೋಹಿತ್​ ನೀಡಿದ ಉತ್ತರವೇನು? ಮುಂದೆ ಓದಿ.. 

ಅಂಥ ಪ್ರಶ್ನೆಯಿಂದಾಗಿ ರೋಹಿತ್​ ಶೆಟ್ಟಿಗೆ ಸ್ವಲ್ಪ ಕೋಪ ಬಂದಂತೆ ಕಂಡಿತು. ತಮ್ಮ ಈ ಹಿಂದಿನ ಸಿನಿಮಾಗಳಲ್ಲಿ ವಿಲನ್​ ಪಾತ್ರಗಳು ಹಿಂದು ಧರ್ಮಕ್ಕೆ ಸೇರಿದ್ದವಾಗಿದ್ದವು. ಆಗ ಯಾಕೆ ಅದೊಂದು ಸಮಸ್ಯೆ ಎನಿಸಲಿಲ್ಲ ಎಂದು ಅವರು ಮರುಪ್ರಶ್ನೆ ಎಸೆದರು. ‘ನಿಮಗೊಂದು ಪ್ರಶ್ನೆ ಕೇಳುತ್ತೇನೆ. ‘ಸಿಂಘಂ’ ಸಿನಿಮಾದಲ್ಲಿ ವಿಲನ್​ ಜೈಕಾಂತ್​ ಶಿಕ್ರೆ ಪಾತ್ರ ಹಿಂದೂ ಮರಾಠಿ ಆಗಿತ್ತು. ಇನ್ನೊಂದು ಸಿನಿಮಾದಲ್ಲಿ ಹಿಂದೂ ಧಾರ್ಮಿಕ ವ್ಯಕ್ತಿ ವಿಲನ್​ ಆಗಿದ್ದ. ‘ಸಿಂಬಾ’ ಸಿನಿಮಾದಲ್ಲಿ ವಿಲನ್​ ಆಗಿದ್ದ ಧ್ರುವ ರಾನಡೆ ಎಂಬ ಪಾತ್ರ ಹಿಂದೂ ಆಗಿತ್ತು. ಆಗ ಯಾಕೆ ಈ ಸಮಸ್ಯೆ ಉದ್ಭವ ಆಗಲಿಲ್ಲ?’ ಎಂದು ರೋಹಿತ್​ ಶೆಟ್ಟಿ ಕೇಳಿದರು.

ರೋಹಿತ್​ ಶೆಟ್ಟಿ ಹೇಳಿದ ಮಾತನ್ನು ಒಪ್ಪಿಕೊಳ್ಳದ ಆ ಪತ್ರಕರ್ತೆಯು ತಮ್ಮ ಪ್ರಶ್ನೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಅದಕ್ಕೂ ರೋಹಿತ್​ ಕಡೆಯಿಂದ ಖಡಕ್​ ಪ್ರತಿಕ್ರಿಯೆ ಬಂತು. ‘ಸಿನಿಮಾದ ಕಥೆಯಲ್ಲಿ ಪಾಕಿಸ್ತಾನದ ಒಬ್ಬ ಭಯೋತ್ಪಾದಕ ಇದ್ದರೆ ಅವನ ಜಾತಿ ಯಾವುದಾಗಿರುತ್ತದೆ? ಇಂಥ ವಿವಾದಗಳಿಂದ ಕೆಲವು ಪತ್ರಕರ್ತರ ಬಗ್ಗೆ ನನಗೆ ಇದ್ದ ಭಾವನೆಯೇ ಬದಲಾಗಿದೆ’ ಎಂದು ರೋಹಿತ್​ ಶೆಟ್ಟಿ ಹೇಳಿದ್ದಾರೆ.

ಸದ್ಯ ಈ ಸಂದರ್ಶನದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಕೆಲವರು ರೋಹಿತ್​ ಶೆಟ್ಟಿ ಪರವಾಗಿ ಕಮೆಂಟ್​ ಮಾಡುತ್ತಿದ್ದಾರೆ. ಮತ್ತೆ ಕೆಲವರು ರೋಹಿತ್​ ಅವರ ಮಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದೇನೇ ಇರಲಿ, ‘ಸೂರ್ಯವಂಶಿ’ ಚಿತ್ರದ ಗೆಲುವಿನಿಂದ ಅಕ್ಷಯ್​ ಕುಮಾರ್​ ಫ್ಯಾನ್ಸ್​ ಖುಸಿ ಆಗಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ನ.5ರಂದು ಬಿಡುಗಡೆಯಾದ ಈ ಚಿತ್ರ ಇಂದಿಗೂ ಅನೇಕ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಆ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ತನ್ನ ನಾಗಾಲೋಟ ಮುಂದುವರಿಸಿದೆ.

ಇದನ್ನೂ ಓದಿ:

ಯಾವ ಖಾನ್​ಗೂ ಕಮ್ಮಿ ಇಲ್ಲ ಅಕ್ಷಯ್​ ಕುಮಾರ್; ವಿಶ್ವಾದ್ಯಂತ 200 ಕೋಟಿ ಬಾಚಿದ ‘ಸೂರ್ಯವಂಶಿ’

ಬಾಕ್ಸಾಫೀಸ್ ಲೂಟಿ‌ ಮಾಡುತ್ತಿರುವ ಸೂರ್ಯವಂಶಿ ಚಿತ್ರಕ್ಕೆ ಅಕ್ಷಯ್, ಕತ್ರಿನಾ ಪಡೆದ ಸಂಭಾವನೆ ಇಷ್ಟೊಂದಾ?