ಭಾರತದ ಆಹಾರ ಕಲಬೆರಕೆ ದಂಧೆ ಬಿಚ್ಚಿಡಲಿದೆ ‘ದಿ ಇಂಡಿಯಾ ಸ್ಟೋರಿ’; ಗಮನ ಸೆಳೆದ ಟೀಸರ್

ಭಾರತದಲ್ಲಿ ಆಹಾರ ಕಲಬೆರಕೆಯ ಜಾಲ ದೊಡ್ಡದಾಗಿದೆ. ಅದರ ಬಗ್ಗೆ ‘ದಿ ಇಂಡಿಯಾ ಸ್ಟೋರಿ’ ಸಿನಿಮಾದಲ್ಲಿ ತೋರಿಸಲಾಗುವುದು. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಶ್ರೇಯಸ್ ತಲ್ಪಾಡೆ ಮತ್ತು ಕಾಜಲ್ ಅಗರ್ವಾಲ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ..

ಭಾರತದ ಆಹಾರ ಕಲಬೆರಕೆ ದಂಧೆ ಬಿಚ್ಚಿಡಲಿದೆ ‘ದಿ ಇಂಡಿಯಾ ಸ್ಟೋರಿ’; ಗಮನ ಸೆಳೆದ ಟೀಸರ್
Food Adulteration
Image Credit source: Zee Studios

Updated on: Jun 08, 2026 | 5:04 PM

ಭಾರತೀಯ ಚಿತ್ರರಂಗದಲ್ಲಿ ಸಮಾಜದ ಕಣ್ಣು ತೆರೆಸುವಂತಹ ಸಾಮಾಜಿಕ ಕಳಕಳಿಯ ಸಿನಿಮಾಗಳು ಆಗಾಗ ಬರುತ್ತಲೇ ಇರುತ್ತವೆ. ಭ್ರಷ್ಟಾಚಾರ, ಬಡತನ, ಗ್ರಾಮೀಣ ಭಾಗದ ಸಮಸ್ಯೆಗಳು, ಲಿಂಗ ತಾರತಮ್ಯ, ಮಹಿಳಾ ಸಬಲೀಕರಣ ಮುಂತಾದ ವಿಷಯಗಳ ಕುರಿತು ಈಗಾಗಲೇ ಹಲವು ಭಾಷೆಗಳಲ್ಲಿ ನೂರಾರು ಸಿನಿಮಾಗಳು ಮೂಡಿಬಂದು ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ದೇಶವನ್ನು ತೀವ್ರವಾಗಿ ಕಾಡುತ್ತಿರುವ, ಸರ್ಕಾರಗಳು ಹಾಗೂ ಚಿತ್ರರಂಗವೂ ಅಷ್ಟಾಗಿ ಗಮನಹರಿಸದ ಆಹಾರ ಕಲಬೆರಕೆ ಕುರಿತು ಈಗೊಂದು ಸಿನಿಮಾ ಸಿದ್ಧವಾಗಿದೆ. ಈ ಚಿತ್ರಕ್ಕೆ ‘ದಿ ಇಂಡಿಯಾ ಸ್ಟೋರಿ’ (The India Story) ಎಂದು ಶೀರ್ಷಿಕೆ ಇಡಲಾಗಿದೆ. ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಮತ್ತು ಬಹುಭಾಷಾ ನಟಿ ಕಾಜಲ್ ಅಗರ್ವಾಲ್ (Kajal Aggarwal) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಆಹಾರ ಕಲಬೆರಕೆ ದಂಧೆಯನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಬೆಳ್ಳಿತೆರೆಯ ಮೇಲೆ ಬಿಚ್ಚಿಡಲು ಈ ಸಾಮಾಜಿಕ ಕಳಕಳಿಯ ಸಿನಿಮಾ ಸಜ್ಜಾಗಿದೆ. ಸದ್ಯ ಈ ಚಿತ್ರದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಿದ್ದು, ಭಾರಿ ಕುತೂಹಲ ಮೂಡಿಸಿದೆ. ದೇಶದ ಆಹಾರ ಸುರಕ್ಷತೆಯ ಆತಂಕಕಾರಿ ವಾಸ್ತವವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುತ್ತದೆ ಈ ಟೀಸರ್.

‘ದಿ ಇಂಡಿಯಾ ಸ್ಟೋರಿ’ ಚಿತ್ರದ ಟೀಸರ್:

The India Story | Official Teaser | Kajal A Kitchlu |Shreyas Talpade |Chettan DK | In Cinemas 24July

ಆಘಾತಕಾರಿ ಅಂಕಿಅಂಶಗಳನ್ನು ಈ ಟೀಸರ್ ತೆರೆದಿಟ್ಟಿದೆ. ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುತ್ತಿರುವ ಜ್ವಲಂತ ಸಮಸ್ಯೆಯ ಸುತ್ತ ಈ ಸಿನಿಮಾದ ಕಥೆ ಇರಲಿದೆ. ನಾವು ಪ್ರತಿದಿನ ಸೇವಿಸುವ ಆಹಾರದ ಹಿಂದಿರುವ ಕರಾಳ ಸತ್ಯಗಳು, ಕಾರ್ಪೊರೇಟ್ ಭ್ರಷ್ಟಾಚಾರ ಮತ್ತು ಜನರ ಆರೋಗ್ಯದ ಮೇಲಾಗುತ್ತಿರುವ ಗಂಭೀರ ಅಪಾಯಗಳನ್ನು ಈ ಸಿನಿಮಾ ಚರ್ಚಿಸಲಿದೆ.

‘ದಿ ಇಂಡಿಯಾ ಸ್ಟೋರಿ’ ಚಿತ್ರವು ಜನರಿಗೆ ಮನರಂಜನೆಯ ಜೊತೆಗೆ ಸಮಾಜಕ್ಕೆ ಒಂದು ಮಹತ್ವದ ಸಂದೇಶವನ್ನು ನೀಡಲು ಹೊರಟಿದೆ ಎಂಬುದು ಟೀಸರ್ ನೋಡಿದರೆ ತಿಳಿಯುತ್ತದೆ. ಚೇತನ್ ಡಿ.ಕೆ. ನಿರ್ದೇಶನದ ಈ ಚಿತ್ರವನ್ನು ಸಾಗರ್ ಬಿ. ಶಿಂದೆ ನಿರ್ಮಿಸಿದ್ದಾರೆ. ಬಹುನಿರೀಕ್ಷಿತ ಈ ಸಿನಿಮಾ ಜುಲೈ 24ರಂದು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಸ್ಟಾರ್ ಹೀರೋ ನೀಡಿದ ಆ ಒಂದು ಸಲಹೆಯನ್ನು ಇಂದಿಗೂ ಪಾಲಿಸುತ್ತಿದ್ದಾರೆ ಕಾಜಲ್ ಅಗರ್ವಾಲ್

ಆಹಾರದಲ್ಲಿ ಬಳಸಲಾಗುವ ರಾಸಾಯನಿಕ ಇಂಜೆಕ್ಷನ್‌ಗಳು, ಕೀಟನಾಶಕಗಳ ಅತಿಯಾದ ಬಳಕೆ ಮತ್ತು ವ್ಯವಸ್ಥೆಯ ನಿರ್ಲಕ್ಷ್ಯವನ್ನು ಚಿತ್ರತಂಡ ಯಾವುದೇ ಮುಲಾಜಿಲ್ಲದೆ ನೇರವಾಗಿ ತೋರಿಸಿದೆ ಎನ್ನಲಾಗಿದೆ. ಒಂದು ವೇಳೆ ಸಿನಿಮಾದಲ್ಲಿ ಯಾವುದೇ ಕಟ್ಟುಕಥೆಗಳಿಲ್ಲದೆ ನೈಜವಾದ ಗ್ರೌಂಡ್ ರಿಯಾಲಿಟಿಯನ್ನು ತೋರಿಸಿದರೆ, ಇದು ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆ ಹಾಗೂ ವಿವಾದವನ್ನು ಸೃಷ್ಟಿಸುವುದರಲ್ಲಿ ಸಂಶಯವಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us