
ಅಜಿತ್ ಕುಮಾರ್ ಮತ್ತು ದಳಪತಿ ವಿಜಯ್ ಅವರು ತಮಿಳು ಚಿತ್ರರಂಗದ ಸ್ಟಾರ್ ನಟರು. ಸುಮಾರು ಮೂರು ದಶಕಗಳಿಂದ ಅವರಿಬ್ಬರ ನಡುವೆ ಬಾಕ್ಸ್ ಆಫೀಸ್ ಹಾಗೂ ಅಭಿಮಾನಿಗಳ ಮಟ್ಟದಲ್ಲಿ ತೀವ್ರ ಪೈಪೋಟಿ ನಡೆಯುತ್ತಲೇ ಬಂದಿದೆ. ಆದರೆ, ಈಗ ಕಾಲ ಬದಲಾಗಿದೆ. ವಿಜಯ್ ಪೂರ್ಣಪ್ರಮಾಣದ ರಾಜಕಾರಣಿಯಾಗಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರೆ, ಅಜಿತ್ ಚಿತ್ರರಂಗದ ಜೊತೆಗೆ ತಮ್ಮ ನೆಚ್ಚಿನ ಕಾರ್ ರೇಸಿಂಗ್ ಜಗತ್ತಿನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ, ಇಬ್ಬರ ಅಭಿಮಾನಿಗಳನ್ನು ಅಚ್ಚರಿಯ ಕಡಲಲ್ಲಿ ಮುಳುಗಿಸುವಂತಹ ಅಪರೂಪದ ವಿದ್ಯಮಾನವೊಂದು ನಡೆಯುತ್ತಿದೆ. ಅಂತಾರಾಷ್ಟ್ರೀಯ ರೇಸಿಂಗ್ ಅಖಾಡದಲ್ಲಿ ದಳಪತಿ ವಿಜಯ್ ಮತ್ತು ತಲ ಅಜಿತ್ ಒಂದೇ ವೇದಿಕೆಯಲ್ಲಿ ಭೇಟಿಯಾಗುತ್ತಿದ್ದಾರೆ.
ಯುಕೆಯಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಲೇ ಮ್ಯಾನ್ಸ್ ಕಪ್’ ರೇಸಿಂಗ್ ಪಂದ್ಯಾವಳಿಯಲ್ಲಿ ಅಜಿತ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ. ವಿಶೇಷವೆಂದರೆ, ಸಿಲ್ವರ್ಸ್ಟೋನ್ನಲ್ಲಿ ನಡೆಯಲಿರುವ ಈ ರೇಸ್ಗೆ ಮುಖ್ಯ ಅತಿಥಿಯಾಗಿ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಭಾಗವಹಿಸುತ್ತಿದ್ದು, ರೇಸ್ಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಲಿದ್ದಾರೆ ಎಂಬುದು ಖಚಿತವಾಗಿದೆ
ಈ ಬಗ್ಗೆ ಲೇ ಮ್ಯಾನ್ಸ್ ಕಪ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಸೌತ್ ಇಂಡಿಯನ್ ಸೂಪರ್ ಸ್ಟಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಈ ವಾರಾಂತ್ಯ ಸಿಲ್ವರ್ಸ್ಟೋನ್ನಲ್ಲಿ ನಡೆಯಲಿರುವ ರೇಸ್ಗೆ ಹಸಿರು ನಿಶಾನೆ ತೋರಲಿದ್ದಾರೆ. ಭಾರತೀಯ ಚಾಲಕರನ್ನು ಪ್ರೋತ್ಸಾಹಿಸಲು ಅವರು ಆಗಮಿಸುತ್ತಿದ್ದಾರೆ’ ಎಂದು ತಿಳಿಸಿದೆ.
ಇತ್ತ ಅಜಿತ್ ಕುಮಾರ್ ರೇಸಿಂಗ್ ತಂಡ ಕೂಡ ಸಿಲ್ವರ್ಸ್ಟೋನ್ ಟ್ರ್ಯಾಕ್ನಲ್ಲಿ ರೇಸ್ಗೆ ಸಿದ್ಧತೆ ನಡೆಸುತ್ತಿರುವ ವೀಡಿಯೊವನ್ನು ಹಂಚಿಕೊಂಡು ಪಂದ್ಯದಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಖಚಿತಪಡಿಸಿದೆ. ಒಂದೇ ಕಾರ್ಯಕ್ರಮದಲ್ಲಿ ವಿಜಯ್ ಮತ್ತು ಅಜಿತ್ ಅವರು ಪಾಲ್ಗೊಳ್ಳುತ್ತಿರುವುದರಿಂದ ಅವರ ನಡುವೆ ಯಾವುದೇ ವೈರತ್ವ ಇಲ್ಲ ಎಂಬುದು ಸಾಬೀತಾಗಿದೆ.
ಇದನ್ನೂ ಓದಿ: ಅಪರೂಪದ ಅವಕಾಶ ಮಿಸ್ ಮಾಡಿಕೊಂಡ ದಳಪತಿ ವಿಜಯ್; ಕಾರಣವೇನು?
ದಶಕಗಳಿಂದ ವಿಜಯ್ ಅಭಿಮಾನಿಗಳು ಹಾಗೂ ಅಜಿತ್ ಅಭಿಮಾನಿಗಳು ನಡುವೆ ಆಫ್ಲೈನ್ ಹಾಗೂ ಆನ್ಲೈನ್ನಲ್ಲಿ ದೊಡ್ಡ ಮಟ್ಟದ ಫ್ಯಾನ್ ವಾರ್ ನಡೆಯುತ್ತಿತ್ತು. ಆದರೆ, ನೆಚ್ಚಿನ ನಟರಿಬ್ಬರೂ ಈ ರೀತಿ ಸೌಹಾರ್ದಯುತವಾಗಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಜೊತೆಗೆ ಭಾರೀ ಸಂತಸ ತಂದಿದೆ. ‘ಕಳೆದ 25 ವರ್ಷಗಳಿಂದ ಕಿತ್ತಾಡುತ್ತಿದ್ದ ನಮಗೆ ಇದು ನಂಬಲು ಸಾಧ್ಯವಾಗದ ಕ್ಷಣ’ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ದ್ವೇಷವನ್ನು ಬದಿಗಿಟ್ಟು ಈ ಸುಂದರ ಕ್ಷಣವನ್ನು ಆನಂದಿಸೋಣ’ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.