ಅಲ್ಲು ಅರ್ಜುನ್ ಅಭಿಮಾನಿಗಳಿಂದ ಚಿತ್ರಮಂದಿರದಲ್ಲಿ ದಾಂಧಲೆ, ಪೊಲೀಸರ ಮಧ್ಯಪ್ರವೇಶ

ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ದೇಸಮುದುರು ಸಿನಿಮಾ ಮರುಬಿಡುಗಡೆ ಆಗಿದ್ದು, ಸಿನಿಮಾ ವೀಕ್ಷಿಸುವ ವೇಳೆ ಅಲ್ಲು ಅರ್ಜುನ್ ಅಭಿಮಾನಿಗಳು ದಾಂಧಲೆ ನಡೆಸಿದ್ದಾರೆ. ಅಲ್ಲು ಅಭಿಮಾನಿಗಳಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅಲ್ಲು ಅರ್ಜುನ್ ಅಭಿಮಾನಿಗಳಿಂದ ಚಿತ್ರಮಂದಿರದಲ್ಲಿ ದಾಂಧಲೆ, ಪೊಲೀಸರ ಮಧ್ಯಪ್ರವೇಶ
ಅಲ್ಲು ಅರ್ಜುನ್
Follow us
|

Updated on: Apr 07, 2023 | 7:53 PM

ಆಂಧ್ರ-ತೆಲಂಗಾಣ ರಾಜ್ಯದ ಸಿನಿಮಾ ಅಭಿಮಾನಿಗಳ (Fans) ಅಭಿಮಾನ ತುಸು ಅತಿರೇಕದ್ದು, ಇದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. ಮೆಚ್ಚಿನ ನಟರಿಗಾಗಿ ಕೈಕೊಯ್ದುಕೊಳ್ಳುವುದು, ಸಾವಿರಾರು ಕಿ.ಮೀ ಸೈಕಲ್ ತುಳಿಯುವುದು, ಸಿನಿಮಾ ಬಿಡುಗಡೆ ದಿನ ಚಿತ್ರಮಂದಿರಗಳಲ್ಲಿ ದಾಂಧಲೆ ನಡೆಸಿ ಚಿತ್ರಮಂದಿರಗಳನ್ನು ಹಾಳು ಮಾಡುವುದು. ಇನ್ನೊಬ್ಬ ನಟರ ಅಭಿಮಾನಿಗಳೊಟ್ಟಿಗೆ ಕೈ-ಕೈ ಮಿಲಾಯಿಸುವುದು, ಜೀವ ತೆಗೆದ ಉದಾಹರಣೆಗಳೂ ಇವೆ. ಇದೀಗ ಅಲ್ಲು ಅರ್ಜುನ್ (Allu Arjun) ಅಭಿಮಾನಿಗಳು ಹೀಗೆಯೇ ದಾಂಧಲೆ ನಡೆಸಿ ಪೊಲೀಸರ ಎಚ್ಚರಿಕೆಗೆ ಗುರಿಯಾಗಿದ್ದಾರೆ.

ನಾಳೆ (ಏಪ್ರಿಲ್ 08) ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬ. ಇದೇ ಕಾರಣಕ್ಕೆ ಅಲ್ಲು ಅರ್ಜುನ್ ನಟನೆಯ ಹಳೆಯ ಸಿನಿಮಾ ದೇಸಮುದುರು ಮರುಬಿಡುಗಡೆ ಆಗಿದೆ. ಅಲ್ಲು ಅಭಿಮಾನಿಗಳು, ತಮ್ಮ ಮೆಚ್ಚಿನ ನಟನ ಹಳೆಯ ಸಿನಿಮಾ ನೋಡಲು ಮತ್ತೆ ಚಿತ್ರಮಂದಿರಕ್ಕೆ ನುಗ್ಗಿದ್ದು, ಚಿತ್ರಮಂದಿರದಲ್ಲಿ ದಾಂಧಲೆ ನಡೆಸಿದ್ದಾರೆ. ಕೊನೆಗೆ ಚಿತ್ರಮಂದಿರದವರು ಪೊಲೀಸರನ್ನು ಕರೆಸಿದ್ದು, ಅಲ್ಲು ಅಭಿಮಾನಿಗಳಿಗೆ ಪೊಲೀಸರು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಆಗಿದ್ದಿಷ್ಟು, ಹೈದರಾಬಾದ್​ನ ಸಂಧ್ಯಾ ಚಿತ್ರಮಂದಿರದಲ್ಲಿ ದೇಸಮುದುರು ಸಿನಿಮಾದ ಪ್ರದರ್ಶನ ನಡೆದಿತ್ತು. ಭಾರಿ ಸಂಖ್ಯೆಯಲ್ಲಿ ಸಿನಿಮಾ ನೋಡಲು ಬಂದಿದ್ದ ಅಲ್ಲು ಅರ್ಜುನ್ ಅಭಿಮಾನಿಗಳು ಚಿತ್ರಮಂದಿರದ ಒಳಗೆ ಸ್ಕ್ರೀನ್ ಮುಂದೆಯೇ ಪಟಾಕಿಗಳನ್ನು ಹಚ್ಚಿದರು. ಚಿತ್ರಮಂದಿರದ ಪರದೆಗೆ ಹಾನಿಯಾಗುವ ಭಯದಿಂದ ಸಿನಿಮಾ ನಿಲ್ಲಿಸಿದ ಚಿತ್ರಮಂದಿರದ ಸಿಬ್ಬಂದಿ ಮೇಲೆ ಅಭಿಮಾನಿಗಳು ಏರಿ ಹೋದರು. ಆಗ ಮಧ್ಯ ಪ್ರವೇಶಿಸಿದ ಪೊಲೀಸರು ಸಾವಧಾನವಾಗಿ ವರ್ತಿಸುವಂತೆ ಅಲ್ಲು ಅಭಿಮಾನಿಗಳಿಗೆ ಸೂಚಿಸಿದ್ದಲ್ಲದೆ, ದಾಂಧಲೆ ನಡೆಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಶಾಂತಯುತವಾಗಿ ಸಿನಿಮಾ ಪ್ರದರ್ಶನ ನಡೆಯಿತು.

ಚಿತ್ರಮಂದಿರಕ್ಕೆ ಪೊಲೀಸರು ಆಗಮಿಸಿರುವ ಚಿತ್ರಗಳನ್ನು ಹಂಚಿಕೊಂಡಿರುವ ನಿರ್ಮಾಪಕ ಶ್ರೀನಿವಾಸ ಕುಮಾರ್, ಸಂಧ್ಯಾ 70 ಎಂಎಂ ಚಿತ್ರಮಂದಿರದ ಒಳಗಡೆ ಪಟಾಕಿಗಳನ್ನು ಹೊಡೆದ ಕಾರಣ ಪೊಲೀಸರು ಬಂದು ಪ್ರದರ್ಶನ ನಿಲ್ಲಿಸಿದರು. ದಯವಿಟ್ಟು ಚಿತ್ರಮಂದಿರದ ಒಳಗೆ ಪಟಾಕಿ ಹೊಡೆಯಬೇಡಿ ಹಾಗೂ ಸೀಟುಗಳಿಗೆ ಹಾನಿ ಮಾಡಬೇಡಿ ಎಂದು ಮನವಿ ಮಾಡುತ್ತೇನೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಆನಂದವನ್ನು ಅನುಭವಿಸಿ ಆದರೆ ಚಿತ್ರಮಂದಿರಗಳನ್ನು ಹಾಳು ಮಾಡಬೇಡಿ ಅದು ನಮ್ಮ ದೇವಾಲಯಗಳಿದ್ದಂತೆ ಎಂದಿದ್ದಾರೆ.

ಇದನ್ನೂ ಓದಿ: Pushpa 2: ಪುಷ್ಪನ ಶವಕ್ಕಾಗಿ ಹುಡುಕಾಟ, ಪುಷ್ಪ ಎಲ್ಲಿ?

ಅಲ್ಲು ಅರ್ಜುನ್ ಅಭಿಮಾನಿಗಳು ದೇಶಮುದುರು ಸಿನಿಮಾದ ಮರು ಬಿಡುಗಡೆಯನ್ನು ಅತ್ಯುತ್ಸಾಹದಿಂದ ಸ್ವಾಗತಿಸಿದ್ದು, ಕೆಲವೆಡೆ ಅಲ್ಲು ಅರ್ಜುನ್ ಪೋಸ್ಟರ್​ಗಳಿಗೆ ರಕ್ತದ ಬೊಟ್ಟುಗಳನ್ನಿಟ್ಟಿದ್ದಾರೆ. ಹಾಲಿನಭಿಷೇಕ ಸಹ ಮಾಡಿದ್ದಾರೆ. ಚಿತ್ರಮಂದಿರದ ಒಳಗೆ ಕುಣಿದು ಸಂಭ್ರಮಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 2007 ರಲ್ಲಿ ಬಿಡುಗಡೆ ಆಗಿದ್ದ ದೇಶಮುದುರು ಸಿನಿಮಾ ಅಲ್ಲು ಅರ್ಜುನ್​ರ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಹನ್ಸಿಕಾ ಮೊಟ್ವಾನಿ ನಾಯಕಿಯಾಗಿ ನಟಿಸಿದ್ದ ಈ ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದರು. ನಿರ್ಮಾಣ ಮಾಡಿದ್ದು ಆರ್​ಆರ್​ಆರ್ ಸಿನಿಮಾದ ನಿರ್ಮಾಪಕ ಡಿವಿವಿ ದಾನಯ್ಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ