ಧರ್ಮೇಂದ್ರ ನಿಧನದ ಬಳಿಕ ಕುಟುಂಬದಲ್ಲಿ ಮೂಡಿತು ಬಿರುಕು; ಎಲ್ಲವೂ ಸ್ಪಷ್ಟ
Dharmendra Family: ಹಿರಿಯ ನಟ ಧರ್ಮೇಂದ್ರ ಅವರ ನಿಧನದ ಬಳಿಕ ಅವರ ಕುಟುಂಬದಲ್ಲಿ ಬಿರುಕು ಮೂಡಿದೆ. ಮೊದಲ ಸಂತಾಪ ಸಭೆಯಲ್ಲಿ ಹೇಮಾ ಮಾಲಿನಿ ಗೈರು ಹಾಜರಾಗಿದ್ದರು. ಈಗ ಅವರು ದೆಹಲಿಯಲ್ಲಿ ಪ್ರತ್ಯೇಕ ಶ್ರದ್ಧಾಂಜಲಿ ಸಭೆ ಆಯೋಜಿಸಿದ್ದಾರೆ. ಇದು ಡಿಯೋಲ್ ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳನ್ನು ಸ್ಪಷ್ಟಪಡಿಸಿದೆ.

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ (Dharmendra) ಅವರು ಇತ್ತೀಚೆಗೆ ತಮ್ಮ 89 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಧರ್ಮೇಂದ್ರ ಅವರು ಮೊದಲು ಪ್ರಕಾಶ್ ಕೌರ್ ಅವರನ್ನು ಮದುವೆ ಆಗಿದ್ದರು. ನಂತರ ಹೇಮಾ ಮಾಲಿನಿಯನ್ನು ವಿವಾಹ ಆದರು. ಧರ್ಮೇಂದ್ರ ಅವರಿಗೆ ಅನಾರೋಗ್ಯ ಉಂಟಾದಾಗ ಎಲ್ಲರೂ ಒಟ್ಟಿಗೆ ಇದ್ದರು. ಆದರೆ, ಅವರು ನಿಧನ ಹೊಂದಿದ ಬಳಿಕ ಕುಟುಂಬ ಬೇರೆಯಾಗಿದೆ. ಧರ್ಮೇಂದ್ರ ಅವರ ಸಂತಾಪ ಸಭೆಯಲ್ಲಿ ಇದು ಕಾಣಿಸಿದೆ.
ಮುಂಬೈನಲ್ಲಿ ಇತ್ತೀಚೆಗೆ ಸಂತಾಪ ಸಭೆ ನಡೆದಿದೆ. ಇದನ್ನು ಮಾಡಿದ್ದು ಡಿಯೋಲ್ ಕುಟುಂಬದವರು. ಆದರೆ, ಈ ಸಭೆಗೆ ಹೇಮಾ ಮಾಲಿನಿ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಬರಲಿಲ್ಲ. ಡಿಯೋಲ್ ಕುಟುಂಬದಲ್ಲಿ ಇನ್ನೂ ಭಿನ್ನಾಭಿಪ್ರಾಯವಿದೆ ಎಂದು ಇದು ತೋರಿಸಿದೆ.
ಈಗ ಹೇಮಾ ಮಾಲಿನಿ ಅವರು ಧರ್ಮೇಂದ್ರ ಅವರ ನಿಧನಕ್ಕೆ ಎರಡನೇ ಸಂತಾಪ ಸೂಚಕ ಸಭೆಯನ್ನು ಆಯೋಜಿಸಿದ್ದಾರೆ. ಹೇಮಾ ಮಾಲಿನಿ ಮಥುರಾದ ಸಂಸದೆ. ಹೀಗಾಗಿ ಈ ಸಂತಾಪ ಸೂಚಕ ಸಭೆಯನ್ನು ದೆಹಲಿಯ ಜನಪಥದಲ್ಲಿರುವ ಡಾ. ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಹೇಮಾ ಮಾಲಿನಿ ಕುಟುಂಬ ಧರ್ಮೇಂದ್ರ ಅವರಿಗೆ ಗೌರವ ಸಲ್ಲಿಸಲಿದೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಈ ಎರಡನೇ ಸಂತಾಪ ಸೂಚಕ ಸಭೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಬಿ ಮತ್ತು ಸನ್ನಿ ಡಿಯೋಲ್ ಈ ಸಂತಾಪ ಸೂಚಕ ಸಭೆಯಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಸಭೆ ಆಯೋಜನೆ ಬಳಿಕ ಡಿಯೋಲ್ ಕುಟುಂಬದಲ್ಲಿ ಬಿರುಕು ಮೂಡಿದೆ ಎಂಬ ಮಾತು ಕೇಳಿಬರುತ್ತಿದೆ.
ಇದನ್ನೂ ಓದಿ:ಧರ್ಮೇಂದ್ರ ಹುಟ್ಟುಹಬ್ಬ; ನಮನ ಸಲ್ಲಿಸಲು ಅಭಿಮಾನಿಗಳಿಗೆ ವಿಶೇಷ ಅವಕಾಶ
ಡಿಸೆಂಬರ್ 11ರಂದು ಮಧ್ಯಾಹ್ನ 3ರಿಂದ ಸಂಜೆ 5 ರವರೆಗೆ ಸಂತಾಪ ಸಭೆಯನ್ನು ಆಯೋಜಿಸಲಾಗಿದೆ. ಅವರ ಆತ್ಮಕ್ಕೆ ಶಾಂತಿ ನೀಡಲು ಮತ್ತು ಅವರಿಗೆ ಗೌರವ ಸಲ್ಲಿಸಲು ಈ ಸಂತಾಪ ಸಭೆಯನ್ನು ಆಯೋಜಿಸಲಾಗಿದೆ. ಈ ಸಂತಾಪ ಸಭೆಯಲ್ಲಿ ಧರ್ಮೇಂದ್ರ ಅವರ ಅಭಿಮಾನಿಗಳು, ಸ್ಥಳೀಯ ಗಣ್ಯರು ಮತ್ತು ಸಂತ ಸಮುದಾಯವು ಧರ್ಮೇಂದ್ರ ಅವರಿಗೆ ಗೌರವ ಸಲ್ಲಿಸಲಿದೆ ಎಂದು ಹೇಮಾ ಮಾಲಿನಿ ಹೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



