
ರಣವೀರ್ ಸಿಂಗ್ (Ranveer Singh) ನಾಯಕನಾಗಿ ನಟಿಸಿದ್ದ ‘ಧುರಂಧರ್’ ಕಳೆದ ವರ್ಷ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಗಳನ್ನು ಬರೆದಿದೆ. ‘ಧುರಂಧರ್ 2’ ಇದೇ ವರ್ಷ ಬಿಡುಗಡೆ ಆಗಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಪಾಕಿಸ್ತಾನದಲ್ಲಿ ರಹಸ್ಯ ಕಾರ್ಯಾಚರಣೆ ನಡೆಸುವ ಭಾರತೀಯ ಗೂಢಚಾರನಾಗಿ ನಟಿಸಿದ್ದಾರೆ. ಈ ಚಿತ್ರವು ವಿಶ್ವ ಬಾಕ್ಸ್ ಆಫೀಸ್ನಲ್ಲಿ ₹1300 ಕೋಟಿಗೂ ಅಧಿಕ ಹಣ ಗಳಿಸಿತು. ಸಿನಿಮಾದ ಎರಡೂ ಭಾಗಗಳ ಒಟ್ಟು ಕಲೆಕ್ಷನ್ 3000 ಕೋಟಿ ದಾಟಿದೆ. ‘ಧುರಂಧರ್’ ಚಿತ್ರದ ಸಹ-ನಿರ್ಮಾಪಕಿ ಹಾಗೂ ಜಿಯೋ ಸ್ಟುಡಿಯೋಸ್ ಸಿಇಒ ಜ್ಯೋತಿ ದೇಶಪಾಂಡೆ ಅವರು ‘ಧುರಂಧರ್’ ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡಿದ್ದು ರಣವೀರ್ ಸಿಂಗ್ ಅವರನ್ನು ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಲು ಕಾರಣವೇನು ಎಂಬುದನ್ನು ಹೇಳಿದ್ದಾರೆ.
ಚಿತ್ರವನ್ನು ದೊಡ್ಡ ಬಜೆಟ್ನಲ್ಲಿ ನಿರ್ಮಿಸುವ ಕುರಿತು ಮಾತನಾಡಿದ ಜ್ಯೋತಿ, ‘ಧುರಂಧರ್ ಎನ್ನುವುದು ಬಜೆಟ್ ಮಿತಿಮೀರಿ ಹೋದ ಪ್ರಾಜೆಕ್ಟ್. ನಾನು ಪ್ರತಿ ಬಾರಿಯೂ ಅದಕ್ಕೆ ಅವಕಾಶ ನೀಡಿದೆ ಮತ್ತು ಅದನ್ನು ಹೊಸ ರೂಪಕ್ಕೆ ತರಲು ಯತ್ನಿಸಿದೆ. ಒಂದು ಭಾಗವಿರಬೇಕಾದ ಸಿನಿಮಾ ಎರಡು ಭಾಗವಾಯಿತು. ಆರಂಭದಲ್ಲಿ ಆದಿತ್ಯ ಧರ್, ಹಾಗೆಯೇ ರಣವೀರ್ ಸಿಂಗ್, ಚಿತ್ರೀಕರಣದ ಪೂರ್ತಿ ಅವಧಿಯಲ್ಲಿ ಬೇರೆ ಯಾವುದೇ ಕೆಲಸ ಮಾಡದೆ ಸಂಪೂರ್ಣವಾಗಿ ಈ ಚಿತ್ರಕ್ಕಾಗಿಯೇ ತಮ್ಮನ್ನು ತೊಡಗಿಸಿಕೊಂಡರು. ಛಾಯಾಗ್ರಹಣ, ಸೌಂಡ್ ಡಿಸೈನ್, ಎಡಿಟಿಂಗ್ ಹೀಗೆ ಆ ಚಿತ್ರದ ಭಾಗವಾಗಿದ್ದ ಪ್ರತಿಯೊಬ್ಬ ತಂತ್ರಜ್ಞರೂ ಸಂಪೂರ್ಣವಾಗಿ ಶ್ರಮಿಸಿದರು. ಹಿಂದೆಂದೂ ನೋಡಿರದ, ಹಿಂದೆಂದೂ ಮಾಡಿರದಷ್ಟು ಉದ್ದೇಶಪೂರ್ವಕವಾದ, ಭಾವನಾತ್ಮಕವಾದದ್ದನ್ನು ನಾವು ಮಾಡುತ್ತಿದ್ದೇವೆ ಎಂಬುದು ನಮ್ಮೆಲ್ಲರಿಗೂ ತಿಳಿದಿತ್ತು. ಇದು ಹೇಗಿತ್ತೆಂದರೆ, ನಾವು ಇದನ್ನು ಮಾಡದಿದ್ದರೆ ಬದುಕಿದ್ದೂ ವ್ಯರ್ಥ ಎನ್ನುವಂತಿತ್ತು ಎಂದರು.
ಇದನ್ನೂ ಓದಿ:ರಣವೀರ್ ಸಿಂಗ್ ಎಕ್ಸಿಟ್ ಎಫೆಕ್ಟ್: ಅಧಿಕೃತವಾಗಿ ‘ಡಾನ್ 3’ ಕೈಬಿಟ್ಟ ಫರ್ಹಾನ್ ಅಖ್ತರ್?
ರಣವೀರ್ ಅವರ ಆಯ್ಕೆಯ ಕುರಿತು ಮಾತನಾಡಿದ ಜ್ಯೋತಿ, ‘ಈಗಾಗಲೇ ಚಿತ್ರೀಕರಣಕ್ಕೆ ಹೆಚ್ಚು ಖರ್ಚಾಗುತ್ತಿದ್ದರಿಂದ ನಾವೇನೂ ಸುರಕ್ಷಿತವಾದ ಅಥವಾ ಸುಲಭವಾದ ದಾರಿಯನ್ನು ಆಯ್ಕೆ ಮಾಡಲು ಸಾಧ್ಯವಿರಲಿಲ್ಲ. ಇನ್ನು ಇದಕ್ಕೆ ದುಬಾರಿ ನಟರನ್ನೂ ಸೇರಿಸಿದ್ದರೆ, ಚಿತ್ರವು ಮೊದಲ ದಿನವೇ ಆರ್ಥಿಕವಾಗಿ ವಿಫಲಗೊಳ್ಳುತ್ತಿತ್ತು. ಹಾಗಾಗಿ ನಮಗೆ ಹೆಸರಿಗೆ ಮಾತ್ರ ಇರುವ ಸ್ಟಾರ್ಗಳ ಬದಲಿಗೆ ಉತ್ತಮ ನಟನೆ ನೀಡುವ ಕಲಾವಿದರು ಬೇಕಿದ್ದರು. ರಣವೀರ್ ಈ ಮಟ್ಟಕ್ಕೆ ಬೆಳೆಯುವ ಮುಂಚೆ ನಾನು ಅವರೊಂದಿಗೆ ‘ರಾಮ್-ಲೀಲಾ’ ಮತ್ತು ‘ಬಾಜಿರಾವ್ ಮಸ್ತಾನಿ’ ಚಿತ್ರಗಳಲ್ಲಿ ಕೆಲಸ ಮಾಡಿದ್ದೆ. ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದ ಆರಂಭದ ದಿನಗಳಲ್ಲೇ ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ ಮತ್ತು ರಣವೀರ್ ಅವರ ಆ ಚಿತ್ರಗಳು ಇಂದಿಗೂ ನನ್ನ ಅತ್ಯಂತ ಮೆಚ್ಚಿನ ಚಿತ್ರಗಳಾಗಿವೆ. ಅವರು ತಮ್ಮ ಸರ್ವಸ್ವವನ್ನೂ ಧಾರೆಯೆರೆಯುವ ಅತ್ಯುತ್ತಮ ನಟ ಎಂದು ನನಗೆ ಗೊತ್ತಿತ್ತು. ಅವರು ಸಂಪೂರ್ಣವಾಗಿ ಪಾತ್ರವಾಗಿ ಬದಲಾಗುತ್ತಾರೆ. ಅವರಲ್ಲಿ ನನಗೆ ಅತಿ ಹೆಚ್ಚು ಇಷ್ಟವಾಗುವ ಸಂಗತಿಯೆಂದರೆ, ಆ ಸಿನಿಮಾದಲ್ಲಿ ಅವರು ರಣವೀರ್ ಸಿಂಗ್ ಆಗಿ ಕಾಣುವುದಿಲ್ಲ. ಅವರು ಬಾಜಿರಾವ್ ಆಗಬೇಕಾದಾಗ ಬಾಜಿರಾವ್ ಆಗುತ್ತಾರೆ, ಖಿಲ್ಜಿ ಆಗಬೇಕಾದಾಗ ಖಿಲ್ಜಿ ಆಗುತ್ತಾರೆ, ಗಲ್ಲಿ ಬಾಯ್ ಆಗಬೇಕಾದಾಗ ಗಲ್ಲಿ ಬಾಯ್ ಆಗುತ್ತಾರೆ. ಅವರು ಕೇವಲ ರಣವೀರ್ ಸಿಂಗ್ ಪಾತ್ರವನ್ನು ಅಭಿನಯಿಸುವುದಿಲ್ಲ, ಬದಲಿಗೆ ಪಾತ್ರವಾಗಿಯೇ ಪರಿವರ್ತನೆಗೊಳ್ಳುತ್ತಾರೆ’ ಎಂದರು.
‘ಧುರಂಧರ್’ ಸಿನಿಮಾ 2025ರ ಡಿಸೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ‘ಧುರಂಧರ್ 2’ ಈ ವರ್ಷದ ಮಾರ್ಚ್ 19ರಂದು ಬಿಡುಗಡೆಯಾಯಿತು. ಈ ಎರಡು ಚಿತ್ರಗಳಲ್ಲಿ ರಣವೀರ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್ ಮಾಧವನ್, ಸಾರಾ ಅರ್ಜುನ್, ರಾಕೇಶ್ ಬೇಡಿ, ಗೌರವ್ ಗೆರಾ ಮತ್ತು ದಾನಿಶ್ ಪಂಡೋರ್ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ