
ನಿರ್ದೇಶಕ ‘ದುನಿಯಾ’ ಸೂರಿ ಸಿನಿಮಾಗಳಲ್ಲಿ ರಾನೆಸ್ ಜೋರಾಗಿಯೇ ಇರುತ್ತವೆ. ಅವರ ನಿರ್ದೇಶನ, ಡೈಲಾಗ್ ಹೀಗೆ ಎಲ್ಲವೂ ಇಷ್ಟ ಆಗುತ್ತವೆ. ಅವರು ಧ್ರುವ ಸರ್ಜಾ (Dhruva Sarja) ಜೊತೆ ಸಿನಿಮಾ ಮಾಡುತ್ತಾರೆ ಎಂದಾಗ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಆದರೆ, ಈಗ ಅಭಿಮಾನಿಗಳಿಗೆ ನಿರಾಸೆ ಆಗೋ ಸುದ್ದಿ ಸಿಕ್ಕಿದೆ. ಈ ಚಿತ್ರದಿಂದ ಸೂರಿ ಅವರು ಸದ್ಯಕ್ಕೆ ಹೊರ ಬಂದಿದ್ದಾರೆ. ಅವರು ಈ ದೃಢನಿರ್ಧಾರ ಮಾಡಲು ಕಾರಣ ವಿವರಿಸಿದ್ದಾರೆ.
ಸೂರಿ ಅವರ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ 2023ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಅವರ ನಿರ್ದೇಶನದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಅವರು ಇಷ್ಟುದಿನ ಧ್ರುವ ಸರ್ಜಾ ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿ ಆಗಿದ್ದರು. ಎಲ್ಲವೂ ರೆಡಿ ಆಗಿತ್ತು. ಈ ಚಿತ್ರವನ್ನು ‘ಕ್ರಿಮಿನಲ್’ ಸಿನಿಮಾಗೆ ಬಂಡವಾಳ ಹೂಡಿರೋ ‘ಗೋಲ್ಡ್ಮೈನ್ಸ್ ಟೆಲಿಫಿಲ್ಮ್ಸ್’ ಅವರೇ ಹಣ ಹಾಕಬೇಕಿತ್ತು. ಶೀಘ್ರದಲ್ಲೇ ತಂಡ ಶೂಟಿಂಗ್ ಮಾಡಲು ಕೂಡ ಪ್ಲ್ಯಾನ್ ಮಾಡಿತ್ತು. ಆದರೆ, ಕೊನೇ ಕ್ಷಣದಲ್ಲಿ ಅವರು ಎಗ್ಸಿಟ್ ಆಗಿದ್ದಾರೆ.
ಈ ಬಗ್ಗೆ ಸೂರಿ ಅವರು ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘ಸತ್ಯ ಹೆಗಡೆ ಅವರು ನನಗೆ ಧ್ರುವ ಅವರನ್ನು ಭೇಟಿ ಮಾಡಿಸಿದರು. ಆ ಬಳಿಕ ನಾವು ಸ್ಕ್ರಿಪ್ಟ್ ಕೆಲಸ ಆರಂಭಿಸಿದೆವು. ಸ್ಕ್ರಿಪ್ಟ್ ರೆಡಿ ಆಗಿತ್ತು, ಸ್ಕೆಚ್ಚಸ್ ರೆಡಿ ಮಾಡಿಕೊಂಡಿದ್ದೆವು. ಯಾವಾಗ ಶೂಟ್ ಮಾಡಬೇಕು, ಬಜೆಟ್ ಎಷ್ಟು ಎಂಬುದೆಲ್ಲ ಲೆಕ್ಕ ಹಾಕಿದ್ದೆವು. ಆದರೆ, ನಾವು ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ’ ಎಂದು ಸೂರಿ ಬೇಸರ ಹೊರಹಾಕಿದ್ದಾರೆ.
‘ಕೆಡಿ ಬಳಿಕ ಧ್ರುವ ಕ್ರಿಮಿನಲ್ ಸಿನಿಮಾದಲ್ಲಿ ಬ್ಯುಸಿ ಆದರು. ಇದು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಮಯ ಕೇಳುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮುಂದಕ್ಕೆ ಹೋಗೋಕೆ ಆಗುತ್ತಿಲ್ಲ. ಹಣ, ಸಮಯ ಎಲ್ಲವೂ ಇಲ್ಲಿ ಹೂಡಿಕೆ ಆಗಿದೆ. ನನ್ನ ತಂಡವನ್ನು ನಾನು ನೋಡಿಕೊಳ್ಳಬೇಕು. ಪ್ರತಿ ಬಾರಿ ಕಾರಣ ನೀಡೋಕೆ ಆಗಲ್ಲ. ಹೀಗಾಗಿ, ಒಂದು ನಿರ್ಧಾರ ತೆಗೆದುಕೊಳ್ಳಬೇಕಿತ್ತು’ ಎಂದು ಸೂರಿ ಹೇಳಿದ್ದಾರೆ.
ಇದನ್ನೂ ಓದಿ: ಜೀ5ನಲ್ಲಿ ಪ್ರಸಾರ ಕಾಣಲಿದೆ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ; ಇಲ್ಲಿದೆ ಮಾಹಿತಿ
‘ಇದು ಧ್ರುವ ಸರ್ಜಾಗಾಗಿಯೇ ಮಾಡಿದ ಕಥೆ. ಅವರ ಜೊತೆ ಈ ಸಿನಿಮಾ ಮಾಡುವ ಆಸೆ ಈಗಲೂ ಇದೆ. ಅವರಿಗೆ ನನ್ನ ಜೊತೆ ಕೆಲಸ ಮಾಡೋ ಹಂಬಲ ಇದೆ. ನಮ್ಮ ಸಿನಿಮಾಗೆ ಮಾತ್ರ ಸಂಪೂರ್ಣ ಸಮಯ ಮೀಸಲಿಡೋ ಅವಕಾಶ ಸಿಕ್ಕರೆ ನಾವು ಈ ಸಿನಿಮಾ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.