ಆಸ್ತಿ ಕಬ್ಜ, ನಿರ್ಮಾಪಕ ಬಂಡ್ಲ ಗಣೇಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ತೆಲುಗು ಚಿತ್ರರಂಗದ ಜನಪ್ರಿಯ ನಿರ್ಮಾಪಕ, ನಟ ಬಂಡ್ಲ ಗಣೇಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಅಕ್ರಮವಾಗಿ ಆಸ್ತಿಯೊಂದರ ಮೇಲೆ ಕಬ್ಜ ಮಾಡಿದ್ದಲ್ಲದೆ ಇದನ್ನು ಪ್ರಶ್ನೆ ಮಾಡಿದ ಸಂಸ್ಥೆಯೊಂದರ ಸಿಇಓಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಬಂಡ್ಲ ಮೇಲಿದೆ.

ಆಸ್ತಿ ಕಬ್ಜ, ನಿರ್ಮಾಪಕ ಬಂಡ್ಲ ಗಣೇಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ಬಂಡ್ಲ ಗಣೇಶ್

Updated on: May 07, 2024 | 10:18 AM

ತೆಲುಗು ಚಿತ್ರರಂಗದ (Tollywood) ಜನಪ್ರಿಯ ನಟ, ನಿರ್ಮಾಪಕ ಅಲ್ಲದೆ ಪವನ್ ಕಲ್ಯಾಣ್​ರ (Pawan Kalyan) ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಂಡ್ಲ ಗಣೇಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಸುಮಾರು 75 ಕೋಟಿ ಮೌಲ್ಯದ ಮನೆಯೊಂದನ್ನು ಅಕ್ರಮವಾಗಿ ಕಬ್ಜ ಮಾಡಿರುವುದಾಗಿ ಆರೋಪಿಸಿ ಸಂಸ್ಥೆಯೊಂದು ಬಂಡ್ಲ ಗಣೇಶ್ ವಿರುದ್ಧ ದೂರು ನೀಡಿದ್ದು, ಎಫ್​ಐಆರ್ ದಾಖಲಾಗಿದೆ. ಹೀರಾ ಗ್ರೂಫ್​ನ ಸಿಇಓ ನೌಹೀರಾ ಶೇಖ್, ಬಂಡ್ಲ ಗಣೇಶ್ ವಿರುದ್ಧ ದೂರು ನೀಡಿದ್ದು, ತಮಗೆ ಬಂಡ್ಲ ಗಣೇಶ್ ಬೆದರಿಕೆ ಸಹ ಹಾಕಿದ್ದಾರೆಂದು ನೌಹೀರಾ ಶೇಖ್ ಆರೋಪಿಸಿದ್ದಾರೆ.

ಹೈದರಾಬಾದ್​ನ ಫಿಲಂ ನಗರ್ ಪೊಲೀಸ್ ಠಾಣೆಯಲ್ಲಿ ನೌಹೀರಾ ಶೇಖ್ ದೂರು ದಾಖಲಿಸಿದ್ದು, ತಮಗೆ ಸೇರಿದ 75 ಕೋಟಿ ಆಸ್ತಿಯನ್ನು ಬಂಡ್ಲ ಗಣೇಶ್ ಅಕ್ರಮವಾಗಿ ಆಕ್ರಮಿಸಿದ್ದಾರೆಂದು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ತಮಗೆ ಬದರಿಕೆ ಸಹ ಹಾಕಿದ್ದಾರೆಂದು ನೌಹೀರಾ ಶೇಖ್ ಆರೋಪಿಸಿದ್ದಾರೆ.

ಘಟನೆ ವಿವರ

ಹೀರಾ ಗ್ರೂಫ್ ನ ಪ್ರಾಪರ್ಟಿಯೊಂದನ್ನು ಬಂಡ್ಲ ಗಣೇಶ್ ಬಾಡಿಗೆಗೆ ಪಡೆದಿದ್ದರು ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳಿಗೆ ಹೀರಾ ಗ್ರೂಫ್ ಹಾಗೂ ಬಂಡ್ಲ ಗಣೇಶ್ ಸಹಿ ಮಾಡಿದ್ದರು. ಬಾಡಿಗೆಗೆ ಒಪ್ಪಂದಕ್ಕಾಗಿ 3 ಕೋಟಿ ರೂಪಾಯಿ ಹಣವನ್ನು ಬಂಡ್ಲ ಗಣೇಶ್ ಪಾವತಿ ಮಾಡಿದ್ದರು. ಆದರೆ ಪ್ರಾಪರ್ಟಿ ವಿಷಯವಾಗಿ ಕಳೆದ ಕೆಲ ತಿಂಗಳುಗಳಿಂದ ಬಂಡ್ಲ ಗಣೇಶ್ ಹಾಗೂ ಹೀರಾ ಗ್ರೂಫ್ ನಡುವೆ ವೈಮನಸ್ಯ ಉಂಟಾಗಿದೆ. ಇದೀಗ ಬಂಡ್ಲ ಗಣೇಶ್ ತಮಗೆ ‘ನ್ಯಾಯ’ ದೊರಕುವವರೆಗೆ ಆಸ್ತಿ ತೊರೆಯುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

ಇದನ್ನೂ ಓದಿ:ಟಾಲಿವುಡ್ ಸ್ಟಾರ್ ನಟನಿಗೆ ನಾಯಕಿಯಾದ ಊರ್ವಶಿ ರೌಟೆಲ್ಲಾ

ಕೆಲವು ದಿನಗಳ ಹಿಂದಷ್ಟೆ ಬಂಡ್ಲ ಗಣೇಶ್ ಹೀರಾ ಗ್ರೂಫ್​ ವಿರುದ್ಧ ದೂರು ದಾಖಲಿಸಿದ್ದರು. ಹೀರಾ ಗ್ರೂಫ್​ನವರು ಆಸ್ತಿಯೊಂದಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ದಾಳಿ ಮಾಡಿದ್ದರು. ಹಲ್ಲೆಗೆ ಯತ್ನಿಸಿದರು ಎಂದು ದೂರು ದಾಖಲಿಸಿದ್ದರು. ಅದಾಗಿ ಕೆಲ ದಿನಗಳ ನಂತರ ಹೀರಾ ಗ್ರೂಫ್​ನ ಸಿಇಓ ನೌಹೀರಾ ಶೇಖ್ ಮಾನವ ಹಕ್ಕು ಸಂಸ್ಥೆಗೆ ದೂರು ದಾಖಲಿಸಿದ್ದರು. ಡಿಜಿಪಿಯನ್ನು ಸಹ ಭೇಟಿ ಮಾಡಿ ಮೌಖಿಕ ದೂರು ನೀಡಿದ್ದರು. ಈಗ ಫಿಲಂ ನಗರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಿರ್ಮಾಪಕ, ನಟ ಬಂಡ್ಲ ಗಣೇಶ್ ರಿಯಲ್ ಎಸ್ಟೇಟ್ ಉದ್ಯಮದಲ್ಲಿಯೂ ತೊಡಗಿಕೊಂಡಿದ್ದಾರೆ. ಸಿನಿಮಾ ರಂಗದ ಹಲವರಿಗೆ ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿ ನೆರವಾಗಿದ್ದಾರೆ. ಬಂಡ್ಲ ಗಣೇಶ್​ಗೆ ದೂರುಗಳು ಸಹ ಹೊಸದಲ್ಲ. ಈ ಹಿಂದೆಯೂ ಸಹ ಕೆಲವು ವಂಚನೆ ಪ್ರಕರಣಗಳು ಬಂಡ್ಲ ವಿರುದ್ಧ ದಾಖಲಾಗಿವೆ.

ಬಂಡ್ಲ ಗಣೇಶ್ ತೆಲುಗು ಚಿತ್ರರಂಗದ ಕೆಲವು ಸ್ಟಾರ್ ನಟರ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ರವಿತೇಜಹ ನಟನೆಯ ‘ಆಂಜನೇಯಲು’, ಜೂ ಎನ್​ಟಿಆರ್ ನಟನೆಯ ‘ಬಾದ್​ಶಾ’, ‘ಟೆಂಪರ್’ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಪವನ್ ಕಲ್ಯಾಣ್ ನಟನೆಯ ‘ತೀನ್ ಮಾರ್’, ‘ಗಬ್ಬರ್ ಸಿಂಗ್’, ಅಲ್ಲು ಅರ್ಜುನ್ ನಟನೆಯ ‘ಇದ್ದರಮ್ಮಾಯಿಲತೋ’, ರಾಮ್ ಚರಣ್ ನಟನೆಯ ‘ಗೋವಿಂದುಡು ಅಂದರಿವಾಡೇಲೆ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us