‘ಗೇಮ್ ಚೇಂಜರ್’ ಸಿನಿಮಾಕ್ಕೆ ಆಂಧ್ರ ಸರ್ಕಾರದ ಅನುಮತಿ, ತೆಲಂಗಾಣದಲ್ಲಿ?

Game Changer: ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಟಿಕೆಟ್ ದರ ಹೆಚ್ಚಳ ಮಾಡಿಕೊಳ್ಳಲು ಹಾಗೂ ಸಿನಿಮಾದ ಶೋಗಳ ಸಂಖ್ಯೆ ಹೆಚ್ಚು ಮಾಡಿಕೊಳ್ಳಲು ಆಂಧ್ರ ಪ್ರದೇಶ ಸರ್ಕಾರದಿಂದ ಅನುಮತಿ ಪಡೆದುಕೊಂಡಿದೆ. ಆದರೆ ತೆಲಂಗಾಣ ರಾಜ್ಯದಲ್ಲಿ ಅನುಮತಿ ದೊರೆತಿದೆಯೇ?

‘ಗೇಮ್ ಚೇಂಜರ್’ ಸಿನಿಮಾಕ್ಕೆ ಆಂಧ್ರ ಸರ್ಕಾರದ ಅನುಮತಿ, ತೆಲಂಗಾಣದಲ್ಲಿ?
Game Changer

Updated on: Jan 05, 2025 | 7:40 AM

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯ ಬಲು ಜೋರಾಗಿ ನಡೆಯುತ್ತಿದೆ. ತೆಲುಗಿನ ಯಾವುದೇ ದೊಡ್ಡ ಬಜೆಟ್ ಸಿನಿಮಾ ಬಿಡುಗಡೆ ಆದಾಗಲೂ ಸಹ ಆಂಧ್ರ ಹಾಗೂ ತೆಲಂಗಾಣ ಸರ್ಕಾರಗಳಿಂದ ಅನುಮತಿ ಪಡೆದು, ಟಿಕೆಟ್ ದರ ಹೆಚ್ಚಳ ಮತ್ತು ಚಿತ್ರಮಂದಿರಗಳಲ್ಲಿ ಹೆಚ್ಚುವರಿ ಶೋಗಳನ್ನು ಹಾಕಲಾಗುತ್ತದೆ. ಅಂತೆಯೇ ‘ಗೇಮ್ ಚೇಂಜರ್’ ಸಿನಿಮಾಕ್ಕೆ ಹೆಚ್ಚುವರಿ ಶೋ ಹಾಕಲು ಹಾಗೂ ಟಿಕೆಟ್ ದರ ಹೆಚ್ಚಿಸಿಕೊಳ್ಳಲು ಆಂಧ್ರ ಸರ್ಕಾರದ ಅನುಮತಿ ದೊರೆತಿದೆ.

ಆಂಧ್ರ ಸರ್ಕಾರದ ಅನುಮತಿಯ ಬೆನ್ನಲ್ಲೆ ‘ಗೇಮ್ ಚೇಂಜರ್’ ಸಿನಿಮಾದ ಟಿಕೆಟ್ ದರವನ್ನು 50% ಹೆಚ್ಚಿಸಲು ಸಿನಿಮಾದ ನಿರ್ಮಾಪಕರು ರೆಡಿಯಾಗಿದ್ದಾರೆ. ಅಲ್ಲದೆ ದಿನಕ್ಕೆ ಏಳು ಅಥವಾ ಎಂಟು ಶೋ ಪ್ರದರ್ಶಿಸಲು ರೆಡಿಯಾಗಿದ್ದಾರೆ. ನಿನ್ನೆಯಷ್ಟೆ ‘ಗೇಮ್ ಚೇಂಜರ್’ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಬಲು ಅದ್ಧೂರಿಯಾಗಿ ರಾಜಮಂಡ್ರಿಯಲ್ಲಿ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರು ಅತಿಥಿಯಾಗಿ ಆಗಮಿಸಿದ್ದರು.

ಆಂಧ್ರದಲ್ಲಿ ಸರ್ಕಾರದ ಅನುಮತಿ ಸಿಕ್ಕಿದೆ ಆದರೆ ತೆಲಂಗಾಣದಲ್ಲಿ ‘ಗೇಮ್ ಚೇಂಜರ್’ ಸಿನಿಮಾಕ್ಕೆ ಯಾವುದೇ ವಿಶೇಷ ಅನುಮತಿ ನೀಡಲಾಗಿಲ್ಲ. ಇತ್ತೀಚೆಗಷ್ಟೆ ನಡೆದ ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆ ಬಳಿಕ ತೆಲುಗು ಚಿತ್ರರಂಗದ ಮೇಲೆ ಅಸಮಾಧಾನ ವ್ಯಕ್ತಪಡಿಸಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಇನ್ನು ಮುಂದೆ ಯಾವುದೇ ಬೆನಿಫಿಟ್ ಶೋ, ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡುವುದಿಲ್ಲ ಎಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ‘ಗೇಮ್ ಚೇಂಜರ್’ ಸಿನಿಮಾದ ನಿರ್ಮಾಪಕ ದಿಲ್ ರಾಜು, ತೆಲಂಗಾಣ ಸರ್ಕಾರದ ನಿಗಮವೊಂದರ ಅಧ್ಯಕ್ಷರಾಗಿದ್ದು, ಸಿಎಂ ಅವರನ್ನು ಟಿಕೆಟ್ ದರ ಹೆಚ್ಚಳದ ವಿಷಯದಲ್ಲಿ ಒಪ್ಪಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:‘ಗೇಮ್ ಚೇಂಜರ್’ ಪ್ರೀರಿಲೀಸ್ ಇವೆಂಟ್​ಗೆ ಆಗಮಿಸಲಿರುವ ರಿಯಲ್ ಗೇಮ್ ಚೇಂಜರ್

‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್ ಜೊತೆಗೆ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಸಿನಿಮಾದಲ್ಲಿ ಎಸ್​ಜೆ ಸೂರ್ಯ ವಿಲನ್, ಸುನಿಲ್ ಸಹ ಇದ್ದಾರೆ. ಸಿನಿಮಾ ಅನ್ನು ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನ ಮಾಡಿದ್ದಾರೆ. ದಿಲ್ ರಾಜು ಬಂಡವಾಳ ಹೂಡಿದ್ದಾರೆ. ಜಿಲ್ಲಾಧಿಕಾರಿಯೊಬ್ಬ ಸಿಎಂ ಎದುರು ಹೋರಾಡುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಶಂಕರ್ ಅವರ ಹಲವು ಸಿನಿಮಾಗಳಂತೆ ಈ ಸಿನಿಮಾ ಸಹ ಭ್ರಷ್ಟಾಚಾರದ ವಿರುದ್ಧ ಕತೆಯನ್ನು ಒಳಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us