‘ರಂಗನಾಯಕ ಚಿತ್ರಕ್ಕೂ ನನಗೂ ಸಂಬಂಧವಿಲ್ಲ, ಅದು ನನ್ನ ಚಿತ್ರವಲ್ಲ’: ಜಗ್ಗೇಶ್

|

Updated on: Mar 18, 2024 | 8:58 AM

ಮಾರ್ಚ್ 17ರಂದು ಜಗ್ಗೇಶ್ ಬರ್ತ್​ಡೇ. ಈ ಹಿನ್ನೆಲೆಯಲ್ಲಿ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ರಾಘವೇಂದ್ರ ಸ್ವಾಮಿಗಳನ್ನು ಅವರು ಆರಾಧಿಸಿದ್ದಾರೆ. ಆಗ ಫೇಸ್​ಬುಕ್ ಲೈವ್ ಬಂದು ಅವರು ‘ರಂಗನಾಯಕ’ ಸಿನಿಮಾ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.

‘ರಂಗನಾಯಕ ಚಿತ್ರಕ್ಕೂ ನನಗೂ ಸಂಬಂಧವಿಲ್ಲ, ಅದು ನನ್ನ ಚಿತ್ರವಲ್ಲ’: ಜಗ್ಗೇಶ್
ಜಗ್ಗೇಶ್-ಗುರುಪ್ರಸಾದ್
Follow us on

ನಟ ಜಗ್ಗೇಶ್ ಹಾಗೂ ನಿರ್ದೇಶಕ ಗುರುಪ್ರಸಾದ್ (Guru Prasad) ಅವರದ್ದು ಹಿಟ್ ಕಾಂಬಿನೇಷನ್. ಇವರು ಒಟ್ಟಾಗಿ ಕೆಲಸ ಮಾಡಿದ ‘ಮಠ’ ಹಾಗೂ ‘ಎದ್ದೇಳು ಮಂಜುನಾಥ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈಗ ಇವರಿಬ್ಬರೂ ‘ರಂಗನಾಯಕ’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಆದರೆ, ಈ ಚಿತ್ರ ಅಂದುಕೊಂಡಷ್ಟು ದೊಡ್ಡ ಗೆಲುವು ಪಡೆದಿಲ್ಲ. ಸಿನಿಮಾದಲ್ಲಿ ಅಶ್ಲೀಲ ಜೋಕ್​ಗಳು, ದ್ವಂದ್ವಾರ್ಥದ ಸಂಭಾಷಣೆಗಳು ಹೇರಳವಾಗಿದೆ ಎಂದು ಅನೇಕರು ಟೀಕೆ ಮಾಡಿದ್ದರು. ‘ಜಗ್ಗೇಶ್ ಈ ರೀತಿಯ ಸಿನಿಮಾ ಮಾಡಬಾರದಿತ್ತು’ ಎಂದು ಕೆಲವರು ಅಭಿಪ್ರಾಯ ಹೊರ ಹಾಕಿದ್ದೂ ಇದೆ. ಈ ಬಗ್ಗೆ ಜಗ್ಗೇಶ್ ಅವರು ಮಾತನಾಡಿದ್ದಾರೆ.

ಮಾರ್ಚ್ 17ರಂದು ಜಗ್ಗೇಶ್ ಬರ್ತ್​ಡೇ. ಈ ಹಿನ್ನೆಲೆಯಲ್ಲಿ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ರಾಘವೇಂದ್ರ ಸ್ವಾಮಿಗಳನ್ನು ಅವರು ಆರಾಧಿಸಿದ್ದಾರೆ. ಆಗ ಫೇಸ್​ಬುಕ್ ಲೈವ್ ಬಂದು ಅವರು ‘ರಂಗನಾಯಕ’ ಸಿನಿಮಾ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ. ಇದೆಲ್ಲ ನಿರ್ದೇಶಕರ ತಪ್ಪು ಎಂದು ಪರೋಕ್ಷವಾಗಿ ಹೇಳಿದ್ದಾರೆ.

‘ಮೊನ್ನೆ ಒಂದು ಸಿನಿಮಾ ಮಾಡಿದೆ. ಅದರಿಂದ ನಿಮಗೆಲ್ಲ ಬೇಸರ ಆಗಿದೆ. ನಂಬಿಕೆ ಜಾಸ್ತಿ’ ಎಂದು ಮತ್ತೇನೋ ಹೇಳಲು ಹೋದರು ಜಗ್ಗೇಶ್. ಆದರೆ, ಸಿಗ್ನಲ್ ಸರಿಯಾಗಿ ಇಲ್ಲದಿದ್ದರಿಂದ ಸರಿಯಾಗಿ ಏನೂ ಕೇಳಿಲ್ಲ. ಮುಂದುವರಿದು, ‘ಆ ಸಿನಿಮಾ (ರಂಗನಾಯಕ) ನನ್ನದಲ್ಲ. ಒಬ್ಬ ನಿರ್ದೇಶಕನ ನಂಬಿ ನಿರ್ದೇಶಕನಿಗೆ ಕೆಲಸ ಕೊಟ್ಟೆ. ಆತನಿಗೆ ಒಂದು ಆಸೆ ಇತ್ತು ಅನಿಸುತ್ತದೆ. ಆ ಆಸೆ ಪ್ರಕಾರ ಸಿನಿಮಾ ಮಾಡಿದ್ದಾನೆ. ನನಗೂ ಅದಕ್ಕೂ ಸಂಬಂಧ ಇಲ್ಲ. ನನ್ನಿಂದ ಬೇಸರ ಆಗಿದ್ದರೆ ಕ್ಷಮೆ ಇರಲಿ’ ಎಂದು ಕೇಳಿದ್ದಾರೆ ಜಗ್ಗೇಶ್.

ಇದನ್ನೂ ಓದಿ: ಹುಟ್ಟುಹಬ್ಬದ ದಿನ ರಾಯರ ಸಾನಿಧ್ಯದಲ್ಲಿ ನಿಂತು ಜನರ ಬಳಿ ಕ್ಷಮೆ ಕೇಳಿದ ಜಗ್ಗೇಶ್

‘ನಾನು ಪ್ರೀಮಿಯರ್ ಪದ್ಮಿನಿ, ಕಾಳಿದಾಸ ಕನ್ನಡ ಮೇಷ್ಟ್ರು ಅಂಥ ಸಿನಿಮಾಗಳನ್ನು ಮಾಡಿದ್ದೇನೆ. ಯಾರದ್ದೋ ಅಪರಾಧಕ್ಕೆ ನನ್ನ ಮೇಲೆ ಬೇಸರ ಬೇಡ. ದೊಡ್ಡ ಮಹನೀಯರ ನೀತಿ ಪಾಠ ಕೇಳಿ ಬೆಳೆದವನು ನಾನು. ತಪ್ಪಿಗೆ ಕ್ಷಮೆ ಇರಲಿ’ ಎಂದು ಕೇಳಿದ್ದಾರೆ. ಈ ಮೂಲಕ ‘ರಂಗನಾಯಕ’ ಸೋಲಿನ ಸಂಪೂರ್ಣ ಜವಾಬ್ದಾರಿ ಗುರು ಪ್ರಸಾದ್ ಅವರದ್ದೇ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ