
ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ವದಂತಿಗಳು ಮತ್ತೆ ಕಾಲಿವುಡ್ನಲ್ಲಿ ಸದ್ದು ಮಾಡುತ್ತಿವೆ. ಈ ಕುರಿತು ಸಂಗೀತ ನಿರ್ದೇಶಕ ಹಾಗೂ ನಟ ಜಿ.ವಿ. ಪ್ರಕಾಶ್ ಕುಮಾರ್ ನೀಡಿದ ಹೇಳಿಕೆ ಬೆನ್ನಲ್ಲೇ ಈ ಚರ್ಚೆ ತೀವ್ರಗೊಂಡಿದೆ. ಧನುಷ್ ರಾಜಕೀಯಕ್ಕೆ ಬಂದರೆ ತಾವು ಬೆಂಬಲಿಸುವುದಾಗಿ ಪ್ರಕಾಶ್ ಹೇಳಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿ.ವಿ. ಪ್ರಕಾಶ್ ಕುಮಾರ್ ಅವರಿಗೆ ಧನುಷ್ ರಾಜಕೀಯ ಪ್ರವೇಶದ ಕುರಿತು ಪ್ರಶ್ನೆ ಎದುರಾಯಿತು. ಧನುಷ್ ತಮ್ಮ ಅತ್ಯಂತ ಆಪ್ತ ಗೆಳೆಯ ಎಂದು ಪ್ರಕಾಶ್ ಹೇಳಿದರು. ಅವರು ರಾಜಕೀಯಕ್ಕೆ ಧುಮುಕುವ ನಿರ್ಧಾರ ತೆಗೆದುಕೊಂಡರೆ ಸ್ನೇಹಿತನಾಗಿ ಖಂಡಿತ ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದರು.
ಈ ಹೇಳಿಕೆಯು ಧನುಷ್ ಶೀಘ್ರದಲ್ಲೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಲಿದ್ದಾರೆಯೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ. ಈ ಹಿಂದೆ ಧನುಷ್ ಕೂಡ ಅಭಿಮಾನಿಗಳ ಸಭೆಯಲ್ಲಿ ನೀಡಿರುವ ಹೇಳಿಕೆಯೊಂದು ಈ ವದಂತಿಗಳಿಗೆ ಮತ್ತಷ್ಟು ಬಲ ತುಂಬಿದೆ.
ಅಭಿಮಾನಿಗಳ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಧನುಷ್, ಸಮಾಜ ಸೇವೆ ಮತ್ತು ಒಗ್ಗಟ್ಟಿನ ಶಕ್ತಿಯ ಬಗ್ಗೆ ಪ್ರಸ್ತಾಪಿಸಿದ್ದರು. ಕೇವಲ ಸಿನಿಮಾ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಸಮಾಜಕ್ಕೆ ಸಹಾಯ ಮಾಡುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದರು. ನಿಮ್ಮ ಸುತ್ತಮುತ್ತಲಿನ ಜನರ ಅಗತ್ಯಗಳನ್ನು ಅರ್ಥೈಸಿಕೊಂಡು ಸಹಾಯ ಮಾಡಿ ಎಂದು ಅವರು ಕಿವಿಮಾತು ಹೇಳಿದ್ದರು.
ಧನುಷ್ ಅವರ ಈ ಮಾತುಗಳು ಅವರು ರಾಜಕೀಯಕ್ಕೆ ಬರುವ ಮುನ್ಸೂಚನೆ ಎಂದು ನೆಟ್ಟಿಗರು ವಿಶ್ಲೇಷಿಸುತ್ತಿದ್ದಾರೆ. ಆದರೆ ಧನುಷ್ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ವೇದಿಕೆ ಮೇಲೆ ಮಾಸ್ ಡೈಲಾಗ್ ಹೊಡೆದು ಮಗನಿಗೆ ಎಚ್ಚರಿಕೆ ಕೊಟ್ಟ ಧನುಷ್
ಇನ್ನೊಂದೆಡೆ ಧನುಷ್ ತಮ್ಮ ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದಾರೆ. ಅವರು ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ನಾಯಕಿಯಾಗಿ ನಟಿಸುವ ಸಾಧ್ಯತೆಯಿದೆ. ಸಿನಿಮಾ ಹೊರತಾಗಿ ಅವರ ರಾಜಕೀಯ ನಡೆ ಎಲ್ಲರ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.