ಎರಡು ಬಾರಿ ಸೀತೆ ಪಾತ್ರ ಮಾಡಿದ ಈ ನಟಿಗೆ ಅಯೋಧ್ಯೆಯಲ್ಲಿ ರಾಮನ ನೋಡುವ ಕಾತುರ

| Updated By: ರಾಜೇಶ್ ದುಗ್ಗುಮನೆ

Updated on: Jan 10, 2024 | 11:49 AM

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಈ ಮಹೋತ್ಸವಕ್ಕೆ ಭರದ  ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅನೇಕರಿಗೆ ಇದರ ಆಹ್ವಾನ ಕೂಡ ಬಂದಿದೆ. ರಾಮ ಮಂದಿರ ಲೋಕಾರ್ಪಣೆ ಗೊಳ್ಳುತ್ತಿರುವ ಬಗ್ಗೆ ಮದಿರಾಕ್ಷಿ ಸಂತಸ ಹಂಚಿಕೊಂಡಿದ್ದಾರೆ.

ಎರಡು ಬಾರಿ ಸೀತೆ ಪಾತ್ರ ಮಾಡಿದ ಈ ನಟಿಗೆ ಅಯೋಧ್ಯೆಯಲ್ಲಿ ರಾಮನ ನೋಡುವ ಕಾತುರ
ಮದಿರಾಕ್ಷಿ
Follow us on

ಪ್ರಸಿದ್ಧ ಕಿರುತೆರೆ ನಟಿ ಮದಿರಾಕ್ಷಿ ಮುಂಡಲ್ (Madirakshi Mundle) ಅವರು ಪ್ರಸಿದ್ಧ ಧಾರಾವಾಹಿ ‘ಸಿಯಾ ಕೆ ರಾಮ್’ ಮೂಲಕ ನಟನಾ ವೃತ್ತಿ ಪ್ರಾರಂಭಿಸಿದರು. ಈ ಧಾರಾವಾಹಿಯಲ್ಲಿ ಅವರು ಸೀತೆಯ ಪಾತ್ರ ಮಾಡಿದ್ದರು. ವಿಶೇಷ ಎಂದರೆ ನಟನಾ ವೃತ್ತಿಯಲ್ಲಿ ಅವರು ಎರಡು ಬಾರಿ ಸೀತೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ‘ಸಿಯಾ ಕೆ ರಾಮ್’ ಮಾತ್ರವಲ್ಲದೆ ‘ಜೈ ಹನುಮಾನ್’ ಧಾರಾವಾಹಿಯಲ್ಲೂ ಮದಿರಾಕ್ಷಿ ಅವರು ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ರಾಮ ಮಂದಿರಕ್ಕೆ ಭೇಟಿ ನೀಡುವ ಬಗ್ಗೆ ಮಾತನಾಡಿದ್ದಾರೆ.

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಈ ಮಹೋತ್ಸವಕ್ಕೆ ಭರದ  ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅನೇಕರಿಗೆ ಇದರ ಆಹ್ವಾನ ಕೂಡ ಬಂದಿದೆ. ರಾಮ ಮಂದಿರ ಲೋಕಾರ್ಪಣೆ ಗೊಳ್ಳುತ್ತಿರುವ ಬಗ್ಗೆ ಮದಿರಾಕ್ಷಿ ಸಂತಸ ಹಂಚಿಕೊಂಡಿದ್ದಾರೆ. ಜನವರಿ 22ರ ಕಾರ್ಯಕ್ರಮಕ್ಕೆ ಅವರಿಗೆ ಸಮಿತಿಯಿಂದ ಯಾವುದೇ ಆಹ್ವಾನ ಬಂದಿಲ್ಲ. ಆದರೆ ಸೂಕ್ತ ಅವಕಾಶ ಸಿಕ್ಕ ತಕ್ಷಣ ಅಯೋಧ್ಯೆಗೆ ತೆರಳಿ ರಾಮನ ದರ್ಶನ ಪಡೆಯುತ್ತೇನೆ ಎಂದು ಮದಿರಾಕ್ಷಿ ಹೇಳಿದ್ದಾರೆ.

‘ನನಗೆ ತುಂಬಾ ಸಂತೋಷವಾಗಿದೆ. ನನಗೆ ಮಾತ್ರವಲ್ಲ ಕೋಟ್ಯಂತರ ಭಾರತೀಯರಿಗೆ ರಾಮ ಮಂದಿರ ನಂಬಿಕೆಯ ಪ್ರತಿಬಿಂಬವಾಗಿದೆ. ಈ ದೇವಾಲಯವು ನಮ್ಮ ಭಕ್ತಿಯ ಸಂಕೇತವಾಗಿದೆ. ರಾಮಮಂದಿರದ ಉದ್ಘಾಟನೆ ಎಲ್ಲರಿಗೂ ವಿಶೇಷವಾಗಿದೆ. ಈ ದೇವಾಲಯವನ್ನು ನಿರ್ಮಿಸುವ ಕನಸು ಕಂಡ ಮತ್ತು ಈ ಕನಸನ್ನು ನನಸಾಗಿಸಿ ಭವ್ಯವಾದ ದೇವಾಲಯವನ್ನು ನಿರ್ಮಿಸಿದ ಎಲ್ಲರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ’ ಎಂದು ಮದಿರಾಕ್ಷಿ ಹೇಳಿದ್ದಾರೆ.

‘ನಾನು ಯಾವಾಗಲೂ ಅದೃಷ್ಟಶಾಲಿ ಎಂದು ಪರಿಗಣಿಸಿದ್ದೇನೆ. ಸೀತೆ ಮತ್ತು ರಾಮನ ಆಶೀರ್ವಾದ ನನ್ನೊಂದಿಗೆ ಇದೆ. ಹೀಗಾಗಿ ನನ್ನ ವೃತ್ತಿಜೀವನದಲ್ಲಿ ಎರಡು ಬಾರಿ ಸೀತೆಯ ಪಾತ್ರವನ್ನು ನಿರ್ವಹಿಸುವ ಅವಕಾಶ ನನಗೆ ಸಿಕ್ಕಿದೆ. ಈ ಪಾತ್ರದಲ್ಲಿ ಜನರು ನನ್ನನ್ನು ಯಾವಾಗಲೂ ಮೆಚ್ಚಿದ್ದಾರೆ. ಇಂದು ನಾನು ಎಲ್ಲಿಗೆ ಹೋದರೂ ಜನರು ನನ್ನನ್ನು ಗೌರವಿಸುತ್ತಾರೆ. ನನ್ನ ಪಾತ್ರದ ಮೂಲಕ ಮಾತ್ರವಲ್ಲದೆ ನನ್ನ ಆಲೋಚನೆಗಳ ಮೂಲಕವೂ ನಾನು ತಾಯಿ ಸೀತೆಯೊಂದಿಗೆ ಸಂಪರ್ಕ ಹೊಂದಿದ್ದೇನೆ’ ಎಂದು ಸಂತಸ ಹೊರಹಾಕಿದ್ದಾರೆ ಅವರು.

ಇದನ್ನೂ ಓದಿ: ಅಯೋಧ್ಯೆಗೆ ತೆರಳುವ ಕನ್ನಡಿಗರಿಗೆ ಗುಡ್​ ನ್ಯೂಸ್​ ನೀಡಿದ ಸರ್ಕಾರ: ರಾಮನೂರಿನಲ್ಲಿ ತಲೆ ಎತ್ತಲಿದೆ ಕರ್ನಾಟಕ ಯಾತ್ರಿ ನಿವಾಸ

ಅಯೋಧ್ಯೆಗೆ ಹೋಗುವ ಕುರಿತು ಮಾತನಾಡಿದ ಮದಿರಾಕ್ಷಿ, ‘ಈಗಾಗಲೇ ಜನರು ಅಯೋಧ್ಯೆಯತ್ತ ಸಾಗುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ. ಇಡೀ ಭಾರತವೇ ಅಲ್ಲಿಗೆ ಹೋಗಲು ಬಯಸುತ್ತದೆ. ಸೂಕ್ತ ಅವಕಾಶ ಸಿಕ್ಕ ತಕ್ಷಣ ಅಯೋಧ್ಯೆಗೆ ಹೋಗಿ ಶ್ರೀರಾಮನ ದರ್ಶನ ಪಡೆಯುತ್ತೇನೆ. ಉದ್ಘಾಟನಾ ಸಮಾರಂಭಕ್ಕೆ ನಿಮಗೆ ಆಹ್ವಾನ ಬರುತ್ತದೋ ಇಲ್ಲವೋ ಎಂಬುದು ಮುಖ್ಯವಲ್ಲ. ನಾವೆಲ್ಲರೂ ಈ ಕ್ಷಣವನ್ನು ಆಚರಿಸಬೇಕು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ