ದೀಪಾವಳಿಗೆ ದೊಡ್ಡ ಕ್ಲ್ಯಾಶ್: ‘ಜೈಲರ್ 2’ vs ‘ರಾಮಾಯಣ’, ಸಿಂಬು ಕೂಡ ರೇಸ್ನಲ್ಲಿ ಭಾಗಿ
ರಜನಿಕಾಂತ್ ಅವರ ಬಹುನಿರೀಕ್ಷಿತ 'ಜೈಲರ್ 2' ಚಿತ್ರ ದೀಪಾವಳಿ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದ್ದು, ಬಾಕ್ಸ್ ಆಫೀಸ್ನಲ್ಲಿ ಭಾರೀ ಹಣಾಹಣಿಗೆ ಸಾಕ್ಷಿಯಾಗಲಿದೆ. ಇದೇ ಸಮಯದಲ್ಲಿ ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ 'ರಾಮಾಯಣ' ಹಾಗೂ ಸಿಂಬು ಅವರ 'ಅರಸನ್' ಚಿತ್ರಗಳೂ ತೆರೆಗೆ ಬರಲಿವೆ. ಈ ಮೂರು ದೊಡ್ಡ ಬಜೆಟ್ ಸಿನಿಮಾಗಳ ಸ್ಪರ್ಧೆ ಬಾಕ್ಸ್ ಆಫೀಸ್ ಗಳಿಕೆ ಮೇಲೆ ಪರಿಣಾಮ ಬೀರಲಿದೆ.

ಸೂಪರ್ಸ್ಟಾರ್ ರಜಿನಿಕಾಂತ್ ನಟನೆಯ ಬಹು ನಿರೀಕ್ಷಿತ ಚಿತ್ರ ‘ಜೈಲರ್ 2’ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರದ ರಿಲೀಸ್ ಡೇಟ್ ಅಧಿಕೃತವಾಗಿ ಪ್ರಕಟವಾಗದಿದ್ದರೂ, ಚಿತ್ರತಂಡ ದೀಪಾವಳಿ ಹಬ್ಬದ ಸಮಯದಲ್ಲಿ ಸಿನಿಮಾವನ್ನು ತೆರೆಗೆ ತರಲು ಭರ್ಜರಿ ಪ್ಲಾನ್ ಮಾಡಿದೆ. ಆದರೆ, ಇದೇ ದೀಪಾವಳಿಗೆ ಭಾರತೀಯ ಚಿತ್ರರಂಗದ ಮತ್ತೊಂದು ದೊಡ್ಡ ಸಿನಿಮಾ ‘ರಾಮಾಯಣ’ ಸಿನಿಮಾ ಕೂಡ ಬಿಡುಗಡೆಯಾಗುತ್ತಿರುವುದರಿಂದ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಕ್ಲ್ಯಾಶ್ ನಡೆಯುವುದು ಖಚಿತವಾಗಿದೆ.
ದೀಪಾವಳಿ ರೇಸ್ನಲ್ಲಿ ತಲೈವಾ ವರ್ಸಸ್ ರಾಮಾಯಣ
ಆರಂಭದಲ್ಲಿ ‘ಜೈಲರ್ 2’ ಚಿತ್ರವನ್ನು ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಬಿಡುಗಡೆ ಮಾಡಲು ಯೋಚಿಸಲಾಗಿತ್ತು. ಆದರೆ, ಈಗ ದೀಪಾವಳಿ ಹಬ್ಬದ ಸೀಸನ್ಗೆ ಮುಂದೂಡಲಾಗಿದೆ ಎಂದು ವರದಿಗಳು ತಿಳಿಸಿವೆ. ಒಂದು ಕಡೆ ರಜಿನಿಕಾಂತ್ ಅವರ ‘ಜೈಲರ್ 2’ ಹಾಗೂ ಮತ್ತೊಂದು ಕಡೆ ಭಾರಿ ಬಜೆಟ್ನ ‘ರಾಮಾಯಣ’ ಸಿನಿಮಾ ಒಂದೇ ಸಮಯಕ್ಕೆ ಚಿತ್ರಮಂದಿರಗಳಿಗೆ ಬರಲಿವೆ. ಇದರ ಜೊತೆಗೆ ಸಿಂಬು ನಟನೆಯ, ವೆಟ್ರಿಮಾರನ್ ನಿರ್ದೇಶನದ ‘ಅರಸನ್’ ಚಿತ್ರವೂ ಇದೇ ರೇಸ್ನಲ್ಲಿದೆ. ಈ ಮೂರು ಬಿಗ್ ಬಜೆಟ್ ಸಿನಿಮಾಗಳು ಒಟ್ಟಿಗೆ ಬಂದರೆ ಬಾಕ್ಸ್ ಆಫೀಸ್ ಧೂಳೀಪಟವಾಗುವುದು ಗ್ಯಾರಂಟಿ.
‘ಜೈಲರ್ 2’ ತಾರಾಗಣದಲ್ಲಿ ಯಾರೆಲ್ಲ ಇದ್ದಾರೆ?
ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ‘ಜೈಲರ್’ ಸೀಕ್ವೆಲ್ನಲ್ಲಿ ರಜಿನಿಕಾಂತ್ ಮತ್ತೆ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್.ಜೆ. ಸೂರ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೊದಲ ಭಾಗದಲ್ಲಿದ್ದಂತೆ ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಹಾಗೂ ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಈ ಚಿತ್ರದಲ್ಲೂ ಅತಿಥಿ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ. ಮೊದಲು ಈ ಚಿತ್ರದಲ್ಲಿ ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಅತಿಥಿ ಪಾತ್ರ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ತಮ್ಮ ‘ಕಿಂಗ್’ ಚಿತ್ರದಲ್ಲಿ ಬ್ಯುಸಿ ಇರುವುದರಿಂದ ಈ ಆಫರ್ ನಿರಾಕರಿಸಿದ್ದಾರೆ. ಹೀಗಾಗಿ ಚಿತ್ರತಂಡ ಈಗ ಹೃತಿಕ್ ರೋಶನ್ ಜೊತೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.
ಇನ್ನು’ಅರಸನ್’ ಧನುಷ್ ನಟನೆಯ ‘ವಡಾ ಚೆನ್ನೈ’ ಚಿತ್ರದ ಸ್ಪಿನ್ ಆಫ್ ಆಗಿದ್ದು, ಆ ಸಿನಿಮಾ ಹಿನ್ನೆಲೆಯಲ್ಲೇ ಸಾಗಲಿದೆ. ಚಿತ್ರದಲ್ಲಿ ಸಿಂಬು ಜೊತೆಗೆ ವಿಜಯ ಸೇತುಪತಿ ಪ್ರಮುಖ ಪಾತ್ರದಲ್ಲಿದ್ದಾರೆ. ಕನ್ನಡದ ಚೈತ್ರಾ ಜೆ. ಆಚಾರ್ ಹಾಗೂ ಪ್ರಿಯಾಂಕಾ ಮೋಹನ್ ಕೂಡ ಚಿತ್ರದಲ್ಲಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಚಿತ್ರದ ಬಿಡುಗಡೆ ಮುಂದೂಡಿಕೆ? ವದಂತಿಗಳಿಗೆ ತೆರೆ ಎಳೆದ ಚಿತ್ರತಂಡ!
ಇನ್ನು, ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮೊದಲಾದವರು ನಟಿಸಿದ್ದಾರೆ. ಬಿಗ್ ಬಜೆಟ್ನಲ್ಲಿ ಸಿನಿಮಾ ಮೂಡಿ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




