
ತಮಿಳುನಾಡಿನಲ್ಲಿ ಸ್ಟಾರ್ ನಟ ವಿಜಯ್ (Vijay) ಚುನಾವಣೆ ಗೆದ್ದು ಸಿಎಂ ಆದ ಬೆನ್ನಲ್ಲೆ, ನೆರೆಯ ಆಂಧ್ರ ಪ್ರದೇಶದಲ್ಲಿ ರಾಜಕೀಯ ಚರ್ಚೆಗಳು ಗರಿ ಗೆದರಿವೆ. ಅದರಲ್ಲೂ ನಟ ಜೂ ಎನ್ಟಿಆರ್ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿ ಬರುತ್ತಿದ್ದು, ವಿಜಯ್ ರೀತಿಯೇ ಜೂ ಎನ್ಟಿಆರ್ ಸಹ ಸಿಎಂ ಆಗಲಿದ್ದಾರೆ ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ನಡುವೆ ಶಾಸಕರೊಬ್ಬರು ಜೂ ಎನ್ಟಿಆರ್ ಬಗ್ಗೆ ಮಾತನಾಡಿ, ಜೂ ಎನ್ಟಿಆರ್ ಭವಿಷ್ಯದ ಆಂಧ್ರ ಪ್ರದೇಶದ ಸಿಎಂ ಎಂದಿದ್ದಾರೆ.
ವೈಎಸ್ರಾ ಪಕ್ಷದ ಮುಖಂಡ ಮತ್ತು ಎಂಎಲ್ಸಿ ದುವ್ವಾಡ ಶ್ರೀನಿವಾಸ್ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಜೂ ಎನ್ಟಿಆರ್ ಬಗ್ಗೆ ಮಾತನಾಡಿದ್ದು, ಜೂ ಎನ್ಟಿಆರ್ ಅವರು ಭವಿಷ್ಯದಲ್ಲಿ ಆಂಧ್ರ ಪ್ರದೇಶದ ಸಿಎಂ ಆಗಲಿದ್ದಾರೆ ಎಂದಿದ್ದಾರೆ. ‘ಜೂ ಎನ್ಟಿಆರ್ಗೆ ಅಪಾರ ಜನಬೆಂಬಲ ಇದೆ. ಅವರ ಮಾತನಾಡುವ ಶೈಲಿ, ಯೋಚನಾ ಲಹರಿ, ಜನರೊಟ್ಟಿಗೆ ಬೆರೆಯುವ ರೀತಿ ಹಾಗೂ ಕುಟುಂಬ ಹಿನ್ನೆಲೆ ಗಮನಿಸಿದರೆ ಅವರು ರಾಜಕೀಯಕ್ಕೆ ಬರುವುದು ಖಾತ್ರಿ. ತೆಲುಗು ಜನರಲ್ಲಿ ಎನ್ಟಿಆರ್ ಮೇಲೆ ವಿಶೇಷ ಪ್ರೀತಿ ಇದೆ. ಭವಿಷ್ಯದಲ್ಲಿ ಅವರು ರಾಜಕೀಯಕ್ಕೆ ಬಂದರೆ ಸಿಎಂ ಆಗುತ್ತಾರೆ’ ಎಂದಿದ್ದಾರೆ.
ಜೂ ಎನ್ಟಿಆರ್ ಅವರಿಗೆ ರಾಜಕೀಯ ಹೊಸದಲ್ಲ. ಈ ಹಿಂದೆ ಅವರು ಆಂಧ್ರದ ಪ್ರಸ್ತುತ ಆಡಳಿತ ಪಕ್ಷ ಟಿಡಿಪಿಯ ರಾಜ್ಯ ಯುವ ಮುಖಂಡರಾಗಿ ಜವಬ್ದಾರಿ ನಿರ್ವಹಿಸಿದ್ದಾರೆ. ಅವಿಭಜಿತ ಆಂಧ್ರದ ಪರ್ಯಟನೆ ನಡೆಸಿ ರಾಜಕೀಯ ಪ್ರಚಾರ ಸಹ ಮಾಡಿದ್ದಾರೆ. ಆದರೆ ಕಳೆದೆರಡು ಚುನಾವಣೆಗಳಲ್ಲಿ ಅವರನ್ನು ಪಕ್ಷವು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಿದೆ. ಪ್ರಸ್ತುತ ಅವರು ಮತ್ತು ಅವರ ಸಹೋದರ ಕಲ್ಯಾಣ್ ರಾಮ್, ಟಿಡಿಪಿ ಪಕ್ಷದಿಂದ ದೂರವೇ ಉಳಿದಿದ್ದಾರೆ.
ಇದನ್ನೂ ಓದಿ:‘ಪೆದ್ದಿ’ಯ ಪ್ರೀ ರಿಲೀಸ್ ಇವೆಂಟ್ ಸಿನಿಮಾದಷ್ಟೆ ಅದ್ಧೂರಿ, 150 ಕೋಟಿ ಮೌಲ್ಯದ ಸೆಟಪ್
ನಾಳೆ (ಮೇ 20) ಜೂ ಎನ್ಟಿಆರ್ ಹುಟ್ಟುಹಬ್ಬವಿದ್ದು, ಹಲವು ಸಾಮಾಜಿಕ ಕಾರ್ಯಗಳನ್ನು ಅವರು ತಮ್ಮ ಅಭಿಮಾನಿ ಸಂಘದ ನೆರವಿನಿಂದ ಮಾಡಲಿದ್ದು, ಆ ಮೂಲಕ ಜನರಿಗೆ ಹತ್ತಿರವಾಗುವ ಕಾರ್ಯ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ವಿಜಯ್ ರೀತಿಯೇ ಸ್ವಂತ ಪಕ್ಷ ಕಟ್ಟಿ ಜೂ ಎನ್ಟಿಆರ್ ಸಹ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಈಗಿನಿಂದಲೇ ಕೇಳಿ ಬರುತ್ತಿವೆ.
ಜೂ ಎನ್ಟಿಆರ್ ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಯಶ್ ರಾಜ್ ಫಿಲಮ್ಸ್ ನಿರ್ಮಾಣದ ಹಿಂದಿ ಸಿನಿಮಾ ಒಂದರಲ್ಲಿ ಸಹ ಜೂ ಎನ್ಟಿಆರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ