ಬೆಂಗಳೂರಿನ ಬಗ್ಗೆ ಸುಳ್ಳು ಹೇಳಿದ ತೆಲುಗು ನಾಯಕ ನಟ
ತೆಲುಗು ಸಿನಿಮಾದ ನಾಯಕನೊಬ್ಬ ಬೆಂಗಳೂರಿನ ಸಿನಿಮಾ ಮಂದಿರಗಳ ಮಾಲೀಕರ ಬಗ್ಗೆ ವಿತರಕರ ಬಗ್ಗೆ ಸುಳ್ಳು ಹೇಳಿದ್ದಾರೆ. ಬೆಂಗಳೂರಿನಲ್ಲಿ ಆತನ ಸಿನಿಮಾಕ್ಕೆ ಸಾಕಷ್ಟು ಶೋಗಳನ್ನು ನೀಡಿದ್ದರೂ ಸಹ ಶೋ ನೀಡಿಲ್ಲ ಎಂದು ಸುಳ್ಳು ಹೇಳಿದ್ದಾನೆ.

ಪ್ಯಾನ್ ಇಂಡಿಯಾ ಸಿನಿಮಾ ಕಲ್ಚರ್ ಬಂದ ಬಳಿಕ ಒಂದು ಭಾಷೆಯಲ್ಲಿ ಬಿಡುಗಡೆ ಆದ ಸಿನಿಮಾ ನರೆ-ಹೊರೆಯ ರಾಜ್ಯಗಳಲ್ಲಿ ಡಬ್ ಆಗಿ ಅಥವಾ ನೇರವಾಗಿ ಬಿಡುಗಡೆ ಆಗುತ್ತಿದೆ. ಕರ್ನಾಟಕದಲ್ಲಿ ವರ್ಷಗಳಿಂದಲೂ ಸಹ ಪರಭಾಷೆ ಸಿನಿಮಾಗಳು ಮೂಲ ಭಾಷೆಯಲ್ಲಿಯೇ ಬಿಡುಗಡೆ ಆಗುವುದು ಹೆಚ್ಚು. ಕರ್ನಾಟಕದಲ್ಲಂತೂ ಪರಭಾಷೆ ಸಿನಿಮಾಗಳು ದೊಡ್ಡ ಮಟ್ಟದಲ್ಲಿಯೇ ಬಿಡುಗಡೆ ಆಗುತ್ತವೆ. ಮಲಯಾಳಂ ಚಿತ್ರರಂಗದ ಸಿನಿಮಾಗಳು ಸಹ ಬೆಂಗಳೂರಿನಲ್ಲಿ ಬಿಡುಗಡೆ ಆಗುತ್ತವೆ. ಆದರೆ ಇದೀಗ ತೆಲುಗಿನ ಸಿನಿಮಾ ಹೀರೋ ಒಬ್ಬ ಕರ್ನಾಟಕದಲ್ಲಿ ತಮ್ಮ ಸಿನಿಮಾಕ್ಕೆ ಚಿತ್ರಮಂದಿರಗಳನ್ನು ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ತಮಿಳುನಾಡಿನಲ್ಲೂ ಅವರ ಸಿನಿಮಾಕ್ಕೆ ಶೋ ಕೊಡಲಿಲ್ಲವಂತೆ.
ಇತ್ತೀಚೆಗಷ್ಟೆ ತೆಲುಗಿನ ‘ಕ’ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾ ತೆಲುಗು ರಾಜ್ಯಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿನಿಮಾದ ಹೀರೋ, ಬೆಂಗಳೂರಿನ ಬಗ್ಗೆ ಸುಳ್ಳು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ತೆಲುಗು ನಟ ಕಿರಣ್ ಅಬ್ಬವರಂ, ‘ತಮಿಳುನಾಡಿನಲ್ಲಿರುವ ತೆಲುಗು ಜನ, ನಮಗೆ ಏಕೆ ತೆಲುಗಿನಲ್ಲಿ ಸಿನಿಮಾ ಬಿಡುಗಡೆ ಮಾಡಿಲ್ಲ ಎಂದು ಕೇಳುತ್ತಿದ್ದಾರೆ. ನನಗೆ ತಮಿಳುನಾಡಿನಲ್ಲಿ, ತೆಲುಗು ಆವೃತ್ತಿ ಸಿನಿಮಾ ಬಿಡುಗಡೆ ಮಾಡಲು ಕೇವಲ 10 ಶೋ ಕೊಡಿ ಎಂದರೂ ಕೊಡುತ್ತಿಲ್ಲ, ಐದು ಶೋ ಕೊಡಿ ಎಂದರೂ ಕೊಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಾತು ಮುಂದುವರೆಸಿ, ‘ಬೆಂಗಳೂರಿನಲ್ಲಿ ಸಹ ಸಮಸ್ಯೆ ಎದುರಿಸುತ್ತಿದ್ದು, ನಾವು ಹೋರಾಟ ಮಾಡುತ್ತಿದ್ದೀವಿ, ನಮಗೆ ಹೆಚ್ಚಿನ ಚಿತ್ರಮಂದಿರ ಕೊಡಿ ಎಂದು ಪ್ರತಿದಿನ ಕೇಳುತ್ತಿದ್ದೀವಿ, ಆದರೆ ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ. ಆದರೆ ನಿಜಾಂಶ ಬೇರೆಯದೇ ಇದೆ. ‘ಕ’ ದೊಡ್ಡ ಸ್ಟಾರ್ ಹೀರೋ ಸಿನಿಮಾ ಅಲ್ಲ, ಆ ಸಿನಿಮಾದ ಹೀರೋ ಯಾರೆಂದು ಸಹ ಕನ್ನಡಿಗರಿಗೆ ಗೊತ್ತಿಲ್ಲ, ಹಾಗಿದ್ದರೂ ಸಹ ಬೆಂಗಳೂರಿನಲ್ಲಿ ಈ ಸಿನಿಮಾಕ್ಕೆ 36 ಚಿತ್ರಮಂದಿರಗಳನ್ನು ನೀಡಲಾಗಿದೆ. ನೂರಕ್ಕೂ ಹೆಚ್ಚು ಶೋಗಳು ಪ್ರತಿದಿನ ಪ್ರದರ್ಶನ ಆಗುತ್ತಿವೆ. ಹಾಗಿದ್ದರೂ ಸಹ ‘ಕ’ ಸಿನಿಮಾದ ನಾಯಕ ಕಿರಣ್ ಅಬ್ಬವರಂ ಬೆಂಗಳೂರಿನಲ್ಲಿ ಚಿತ್ರಮಂದಿರಗಳು ನೀಡಿಲ್ಲ, ನಾವು ಹೋರಾಡುತ್ತಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ.
ಇದನ್ನೂ ಓದಿ:ತೆಲುಗು ಸಿನಿಮಾ ಅವಕಾಶ ಬಾಚಿಕೊಂಡ ನಿವೇದಿತಾ ಗೌಡ, ನಾಯಕ ಯಾರು?
ತೆಲುಗು ಸಿನಿಮಾಗಳು ಬೆಂಗಳೂರಿನಲ್ಲಿ ಅದ್ಧೂರಿಯಾಗಿಯೇ ಬಿಡುಗಡೆ ಆಗುತ್ತವೆ, ಆದರೆ ಅದೇ ಹೈದರಾಬಾದ್ನಲ್ಲಿ ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡಲು ಅವಕಾಶ ಕೊಡುವುದಿಲ್ಲ. ಇತ್ತೀಚೆಗಷ್ಟೆ ಬಿಡುಗಡೆ ಆದ ‘ಮಾರ್ಟಿನ್’ ಸಿನಿಮಾಕ್ಕೆ ಕಡಿಮೆ ಸಂಖ್ಯೆಯ ಚಿತ್ರಮಂದಿರ ನೀಡಲಾಗಿತ್ತು, ಇತ್ತೀಚೆಗಷ್ಟೆ ಬಿಡುಗಡೆ ಆದ ಶ್ರೀಮುರಳಿಯ ‘ಬಘೀರ’ ಸಿನಿಮಾಕ್ಕೆ ಸಹ ಹೈದರಾಬಾದ್ನಲ್ಲಿ ಸಿಕ್ಕಿರುವುದು ಕೇವಲ 26 ಶೋ. ‘ಮಾರ್ಟಿನ್’ ಸಿನಿಮಾಕ್ಕೆ ಇಷ್ಟು ಶೋ ಸಹ ಸಿಕ್ಕಿರಲಿಲ್ಲ.
ತೆಲುಗು ಸಿನಿಮಾಗಳನ್ನು ಮೂಲ ಭಾಷೆಯಲ್ಲಿಯೇ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡಲಾಗುತ್ತಿದೆ. ಹಾಗಿದ್ದರೂ ಸಹ ತೆಲುಗು ಸಿನಿಮಾ ರಂಗದ ಕೆಲವರು ಬೆಂಗಳೂರಿನ ಬಗ್ಗೆ ಇಲ್ಲ-ಸಲ್ಲದ ಸುಳ್ಳುಗಳನ್ನು ಹೇಳಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




