‘ಅರ್ಜುನ್ ಚಕ್ರವರ್ತಿ’ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ; ಈ ಚಿತ್ರದಲ್ಲಿದೆ ಕಬಡ್ಡಿ ಆಟಗಾರನ ಕಥೆ

ವಿಕ್ರಾಂತ್ ರುದ್ರ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ ರಾಮರಾಜು ಅವರು ಅರ್ಜುನ್ ಚಕ್ರವರ್ತಿ ಪಾತ್ರವನ್ನು ಮಾಡುತ್ತಿದ್ದಾರೆ. ‘ಜರ್ನಿ ಆಫ್ ಅನ್‌ಸಂಗ್ ಚಾಂಪಿಯನ್’ ಎಂಬ ಟ್ಯಾಗ್​ಲೈನ್​ ಗಮನ ಸೆಳೆಯುತ್ತಿದೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಆಗಿದೆ.

‘ಅರ್ಜುನ್ ಚಕ್ರವರ್ತಿ’ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ; ಈ ಚಿತ್ರದಲ್ಲಿದೆ ಕಬಡ್ಡಿ ಆಟಗಾರನ ಕಥೆ
‘ಅರ್ಜುನ್​ ಚಕ್ರವರ್ತಿ’ ಸಿನಿಮಾ ಫಸ್ಟ್​ ಲುಕ್​ ಪೋಸ್ಟರ್​

Updated on: Oct 30, 2023 | 4:02 PM

ಕ್ರೀಡೆ ಮತ್ತು ಸಿನಿಮಾ ಕ್ಷೇತ್ರದ ನಡುವೆ ಮೊದಲಿನಿಂದಲೂ ನಂಟು ಇದೆ. ಕ್ರೀಡೆಯಲ್ಲಿ ಸಾಧನೆ ಮಾಡಿದ ಅನೇಕರ ಜೀವನವನ್ನು ಆಧರಿಸಿ ಈಗಾಗಲೇ ಸಾಕಷ್ಟು ಸಿನಿಮಾಗಳು (Biopic) ಬಂದಿವೆ. ಆ ಪೈಕಿ ಕೆಲವು ಚಿತ್ರಗಳು ಸೂಪರ್​ ಹಿಟ್​ ಆಗಿವೆ ಕೂಡ. ಇನ್ನೂ ಅಂತಹ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇವೆ. ತೆರೆಗೆ ತರಬಹುದಾದ ಅನೇಕ ಕಥೆಗಳು ಬಾಕಿ ಇವೆ. ಈಗ ಕಬಡ್ಡಿ (Kabaddi) ಆಟಗಾರ ಅರ್ಜುನ್​ ಚಕ್ರವರ್ತಿ ಕುರಿತು ಸಿನಿಮಾ ಸಿದ್ಧವಾಗುತ್ತಿದೆ. ‘ಅರ್ಜುನ್ ಚಕ್ರವರ್ತಿ’ (Arjun Chakravarthy) ಎಂದೇ ಈ ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ಅನಾವರಣ ಮಾಡಲಾಯಿತು.

ಹೇಗಿದೆ ‘ಅರ್ಜುನ್ ಚಕ್ರವರ್ತಿ’ ಫಸ್ಟ್​ ಲುಕ್​?

ಕ್ರೀಡಾಧಾರಿತ ಸಿನಿಮಾ ಆದ್ದರಿಂದ ‘ಅರ್ಜುನ್ ಚಕ್ರವರ್ತಿ’ ಪ್ರಾಜೆಕ್ಟ್​ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ. ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ರಿಲೀಸ್​ ಆಗಿದ್ದು, ಪದಕವನ್ನು ಹಿಡಿದುಕೊಂಡು ಕ್ರೀಡಾಂಗಣದ ಮಧ್ಯಭಾಗದಲ್ಲಿ ನಿಂತು ವಿಜಯದ ಕ್ಷಣವನ್ನು ಅರ್ಜುನ್ ಚಕ್ರವರ್ತಿ ಅವರು ವಿವರಿಸುತ್ತಿರುವಂತಹ ದೃಶ್ಯ ಇದರಲ್ಲಿದೆ. ವಿಕ್ರಾಂತ್ ರುದ್ರ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ ರಾಮರಾಜು ಅವರು ಅರ್ಜುನ್ ಚಕ್ರವರ್ತಿ ಪಾತ್ರವನ್ನು ಮಾಡುತ್ತಿದ್ದಾರೆ. ಸಿಜಾ ರೋಸ್ ಕೂಡ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಲಾಲು ಬಯೋಪಿಕ್​ನಲ್ಲಿ ನಟಿಸೋಕೆ ಪಂಕಜ್ ತ್ರಿಪಾಠಿ ಸೂಕ್ತ; ಶುರುವಾಗಿದೆ ಚರ್ಚೆ 

ಸಿನಿಮಾದ ಬಗ್ಗೆ ವಿವರ:

1980ರ ದಶಕದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕಬಡ್ಡಿ ಆಟಗಾರ ಅರ್ಜುನ್ ಚಕ್ರವರ್ತಿ ಅವರ ಬದುಕಿನ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ಒಬ್ಬ ಕ್ರೀಡಾಪಟುವಿನ ಬದುಕಿನಲ್ಲಿ ಎದುರಾದ ಹೋರಾಟಗಳು ಹಾಗೂ ಸಿಕ್ಕ ಗೆಲುವಿನ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ದಯಾನಂದ ರೆಡ್ಡಿ, ಅಜಯ್, ಅಜಯ್ ಘೋಷ್ ಹಾಗೂ ದುರ್ಗೇಶ್ ಅವರು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಘ್ನೇಶ್ ಭಾಸ್ಕರನ್ ಅವರ ಸಂಗೀತ ನಿರ್ದೇಶನ ಹಾಗೂ ಜಗದೀಶ್ ಚೀಕಾಟಿ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ‘ಗ್ಯಾನೆಟ್ ಸೆಲ್ಯುಲಾಯ್ಡ್’ ಬ್ಯಾನರ್​ ಅಡಿಯಲ್ಲಿ ನಿರ್ಮಾಪಕ ಶ್ರೀನಿ ಗುಬ್ಬಾಳ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ: ರಾಖಿ ಸಾವಂತ್​ ಬಯೋಪಿಕ್​ಗೆ ರಿಷಬ್​ ಶೆಟ್ಟಿ ನಿರ್ದೇಶನ? ಮೈಸೂರಿನಿಂದ ಹೊಸ ನ್ಯೂಸ್​

‘ಅರ್ಜುನ್​ ಚಕ್ರವರ್ತಿ’ ಚಿತ್ರದ ಬಗ್ಗೆ ನಿರ್ಮಾಪಕ ಶ್ರೀನಿ ಗುಬ್ಬಾಳ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಜರ್ನಿ ಆಫ್ ಅನ್‌ಸಂಗ್ ಚಾಂಪಿಯನ್’ ಎಂಬುದು ಈ ಚಿತ್ರದ ಟ್ಯಾಗ್​ ಲೈನ್​. ‘ಇದು ಕೇವಲ ಸಿನಿಮಾ ಅಲ್ಲ. ಸವಾಲುಗಳನ್ನು ಮೀರಿ ಎದ್ದುನಿಲ್ಲುವಂತಹ ಹಾಗೂ ನಮ್ಮೆಲ್ಲರಿಗೂ ಸ್ಫೂರ್ತಿ, ಪ್ರೇರಣೆ ನೀಡುವಂತಹ ವ್ಯಕ್ತಿಗಳ ಅದಮ್ಯ ಮನೋಭಾವಕ್ಕೆ ಸಲ್ಲಿಸುವಂತಹ ಗೌರವ ಇದಾಗಿದೆ. ಈ ಚಿತ್ರದಿಂದ ನಾವು ಇಚ್ಛಾಶಕ್ತಿ ಹಾಗೂ ಆತ್ಮಬಲದ ವಿಜಯವನ್ನು ಪ್ರದರ್ಶಿಸಲು ಬಯಸುತ್ತೇವೆ’ ಎಂದಿದ್ದಾರೆ ಶ್ರೀನಿ ಗುಬ್ಬಾಳ. ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲದಲ್ಲಿ ಶೂಟಿಂಗ್​ ಮಾಡಲಾಗುತ್ತಿದೆ. ಕನ್ನಡ, ಮಲಯಾಳಂ ಮತ್ತು ಹಿಂದಿಗೆ ಡಬ್​ ಮಾಡಲಾಗುವುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us