ಸ್ಟಾರ್ ನಟನ ಸಿನಿಮಾದಿಂದ ಬೇಸರ, ಚಿತ್ರರಂಗವನ್ನೇ ತೊರೆದ ಸ್ಟಾರ್ ನಟಿ
Kamalini Mukherjee: ಸಿನಿಮಾಗಳಲ್ಲಿ ಪಾತ್ರಗಳು ಕೆಲವೊಮ್ಮೆ ಅಂದುಕೊಂಡಂತೆ ಮೂಡಿ ಬರುತ್ತವೆ ಕೆಲವೊಮ್ಮೆ ನಿರಾಸೆ ಮೂಡಿಸುತ್ತವೆ. ಸಣ್ಣ ಪಾತ್ರಗಳು ಸಹ ಭಾರಿ ದೊಡ್ಡ ಹಿಟ್ ಆದ ಉದಾಹರಣೆ ಸಾಕಷ್ಟಿದೆ. ಸ್ಟಾರ್ ನಟಿಯೊಬ್ಬರು, ಸಿನಿಮಾನಲ್ಲಿ ತಮ್ಮ ಪಾತ್ರ ಸರಿಯಾಗಿ ಮೂಡಿಬರಲಿಲ್ಲವೆಂಬ ಕಾರಣಕ್ಕೆ ಚಿತ್ರರಂಗವನ್ನೇ ತೊರೆದಿದ್ದಾರೆ. ಯಾರು ಆ ನಟಿ? ಯಾವುದು ಆ ಸಿನಿಮಾ?

ಎಲ್ಲ ಸಿನಿಮಾಗಳಲ್ಲಿಯೂ ಎಲ್ಲ ನಟರ ಪಾತ್ರಗಳು ಚೆನ್ನಾಗಿಯೇ ಮೂಡಿಬರಬೇಕೆಂದೇನೂ ಇಲ್ಲ. ಸಿನಿಮಾ ಎಂದಮೇಲೆ ಒಳ್ಳೆಯ ಪಾತ್ರಗಳು ವಿಲನ್ ಗುಣಗಳುಳ್ಳ ಪಾತ್ರಗಳು ಎಲ್ಲವೂ ಇರುತ್ತವೆ. ಆದರೆ ಸ್ಟಾರ್ ನಟಿಯೊಬ್ಬರು, ಸಿನಿಮಾ ಒಂದರಲ್ಲಿ ತಮ್ಮ ಪಾತ್ರ ಸರಿಯಾಗಿ ಮೂಡಿಬರಲಿಲ್ಲವೆಂಬ ಕಾರಣಕ್ಕೆ ಬೇಸರ ಮಾಡಿಕೊಂಡು ಚಿತ್ರರಂಗವನ್ನೇ ತೊರೆದು ಬಿಟ್ಟಿದ್ದಾರೆ. ಹೀಗೆ ಚಿತ್ರರಂಗವನ್ನು ತೊರೆದ ನಟಿ ಸಾಮಾನ್ಯ ನಟಿಯಲ್ಲ, ತಮ್ಮ ಅತ್ಯುತ್ತಮ ನಟನೆ ಮತ್ತು ಸೌಂದರ್ಯದಿಂದ ಪ್ರೇಕ್ಷಕರನ್ನು ಸೂಜಿಗಲ್ಲಿನಿಂದ ಸೆಳೆದಿದ್ದ ನಟಿ ಕಮಲಿನಿ.
‘ಗೋಧಾವರಿ’, ‘ಆನಂದ್’, ‘ಪಯಣಂ’, ‘ಸ್ಟೈಲ್’, ‘ಹ್ಯಾಪಿ ಡೇಸ್’, ತಮಿಳಿನ ‘ವೇಟ್ಟೆಯಾಡು ವಿಲೆಯಾಡು’ ಕನ್ನಡದ ‘ಸವಾರಿ’ ಇನ್ನೂ ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿರುವ ಕಮಿಲಿನಿ ಮುಖರ್ಜಿ ಕಳೆದ ಒಂಬತ್ತು ವರ್ಷಗಳಿಂದಲೂ ಯಾವುದೇ ಸಿನಿಮಾನಲ್ಲಿ ನಟಿಸಿಲ್ಲ. ಅದರಲ್ಲೂ ತೆಲುಗಿನ ಸ್ಟಾರ್ ನಟರೊಬ್ಬರ ಸಿನಿಮಾನಲ್ಲಿ ನಟಿಸಿದ ಬಳಿಕ ಬೇಸರ ಮಾಡಿಕೊಂಡು ಆ ಚಿತ್ರರಂಗವನ್ನೇ ತ್ಯಜಿಸಿ ಬಿಟ್ಟರಂತೆ. ಈ ಬಗ್ಗೆ ಸ್ವತಃ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಕಮಿಲಿನಿ ಮುಖರ್ಜಿ ಇತ್ತೀಚೆಗೆ ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡಿದ್ದು, ತಮಗೆ ರಾಮ್ ಚರಣ್ ನಟನೆಯ ‘ಗೋವಿಂದುಡು ಅಂದರಿವಾಡೇಲೆ’ ಸಿನಿಮಾನಲ್ಲಿ ನಟಿಸಿದ್ದು ಸ್ವಲ್ಪವೂ ಇಷ್ಟವಾಗಲಿಲ್ಲ ಎಂದಿದ್ದಾರೆ. ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರೂ ನನ್ನೊಟ್ಟಿಗೆ ಚೆನ್ನಾಗಿದ್ದರು, ಚೆನ್ನಾಗಿ ನೋಡಿಕೊಂಡರು. ಆದರೆ ಸಿನಿಮಾದ ಪಾತ್ರ ಬದಲಾದ ರೀತಿ ನನಗೆ ತುಸುವೂ ಇಷ್ಟವಾಗಲಿಲ್ಲ. ಅದೇ ಕಾರಣಕ್ಕೆ ಆ ಸಿನಿಮಾದ ಬಳಿಕ ನಾನು ತೆಲುಗು ಸಿನಿಮಾಗಳಲ್ಲಿ ನಟಿಸುವುದನ್ನೇ ಬಿಟ್ಟುಬಿಟ್ಟೆ’ ಎಂದಿದ್ದಾರೆ.
ಇದನ್ನೂ ಓದಿ:ಮೈಸೂರಿನಲ್ಲಿ ರಾಮ್ ಚರಣ್: ಗೌರಿ ಗಣೇಶ ಹಬ್ಬದ ನಡುವೆಯೂ ‘ಪೆದ್ದಿ’ ಚಿತ್ರೀಕರಣ
‘ಗೋವಿಂದುಡು ಅಂದರಿವಾಡೇಲೆ’ ಸಿನಿಮಾನಲ್ಲಿ ರಾಮ್ ಚರಣ್ ನಾಯಕ, ಕಾಜಲ್ ಅಗರ್ವಾಲ್ ನಾಯಕಿ. ಸಿನಿಮಾನಲ್ಲಿ ನಟ ಶ್ರೀಕಾಂತ್ ಪತ್ನಿ ಚಿತ್ರ ಪಾತ್ರದಲ್ಲಿ ಕಮಿಲಿನಿ ಮುಖರ್ಜಿ ನಟಿಸಿದ್ದರು. ಕತೆಯಲ್ಲಿ ಅವರ ಪಾತ್ರಕ್ಕೆ ಬಹಳ ಕಡಿಮೆ ಪ್ರಾಧಾನ್ಯತೆ ಇತ್ತು. ಆದರೆ ಕಮಿಲಿನಿಗೆ ಹೇಳಿದ್ದ ಪಾತ್ರಕ್ಕೂ ನಿರ್ದೇಶಕರು ಆ ನಂತರ ಬದಲಾಯಿಸಿದ್ದಕ್ಕೂ ಸಂಬಂಧವೇ ಇಲ್ಲದಂತಾಯ್ತಂತೆ. ಇದು ಕಮಿಲಿನಿಯವರ ಬೇಸರಕ್ಕೆ ಕಾರಣವಾಗಿದೆ.
ಕಮಿಲಿನಿ ಹೇಳಿರುವಂತೆ, ‘ಕೆಲವೊಮ್ಮೆ ನೀವು ಇದು ನಿಮ್ಮ ದೃಶ್ಯ ಅದರಲ್ಲಿ ನೀವೇ ಪ್ರಧಾನ ಎಂದು ಭಾವಿಸುತ್ತೀರಿ, ಅದಕ್ಕಾಗಿ ಒಳ್ಳೆಯ ಪ್ರದರ್ಶನ ನೀಡಿರುತ್ತೀರಿ, ನಂತರ, ನಿರ್ದೇಶಕರು ಅಂದುಕೊಂಡ ರೀತಿಯಲ್ಲಿ ಅದು ಬರಲಿಲ್ಲ ದೃಶ್ಯ ಪರಿಣಾಮ ಬೀರುತ್ತಿಲ್ಲ ಎಂದು ಅದನ್ನು ತೆಗೆದುಬಿಡುತ್ತಾರೆ. ಆ ಸಂದರ್ಭದಲ್ಲಿ ನಿರ್ದೇಶಕರು ನಮಗೆ ಆ ವಿಷಯವನ್ನು ಹೇಳುವುದಿಲ್ಲ. ಆದರೆ ನನಗೆ ಬಹಳ ವೈಯಕ್ತಿಕವಾಗಿತ್ತು ಮತ್ತು ಬಹಳ ನೋವುಂಟು ಮಾಡಿತು. ನಾನು ತೆಲುಗು ಚಿತ್ರಗಳಿಂದ ಹಿಂದೆ ಸರಿಯಬೇಕು ಬೇರೆ ಭಾಷೆಗಳ ಸಿನಿಮಾಗಳಲ್ಲಿ ನಟಿಸಬೇಕು ಎಂದು ಆಗ ನಿರ್ಧರಿಸಿದೆ’ ಎಂದಿದ್ದಾರೆ.
‘ಗೋವಿಂದುಡು ಅಂದರಿವಾಡೆಲೆ’ ಸಿನಿಮಾ 2014 ರಲ್ಲಿ ಬಿಡುಗಡೆ ಆಯ್ತು. ಆ ಸಿನಿಮಾದ ಬಳಿಕ ಬೇರಾವ ತೆಲುಗು ಸಿನಿಮಾಗಳಲ್ಲಿಯೂ ಕಮಿಲಿನಿ ನಟಿಸಿಲ್ಲ. ಆದರೆ ಅದಾದ ಬಳಿಕ ಕೇವಲ ಎರಡು ಸಿನಿಮಾಗಳಲ್ಲಿ ಮಾತ್ರವೇ ಕಮಿಲಿನಿ ನಟಿಸಿದರು. 2016ರ ಬಳಿಕ ಕಮಿಲಿನಿ ಯಾವುದೇ ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




