
ಬಾಲಿವುಡ್ (Bollywood) ನಟಿ ಮತ್ತು ಸಂಸದೆ ಕಂಗನಾ ರಣಾವತ್ ಅವರು ತಮ್ಮ ನಟನೆಯ ಜೊತೆಗೆ ವಿವಾದಾತ್ಮಕ ಹೇಳಿಕೆಗಳಿಂದಲೂ ಪದೇ ಪದೇ ಸುದ್ದಿ ಆಗುತ್ತಲೇ ಇರುತ್ತಾರೆ. ಇದೀಗ ನಟಿ ಕಂಗನಾ ಹೊಸದೊಂದು ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಬಿಡುಗಡೆ ವೇಳೆ ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವಿವಾದದ ಸ್ವರೂಪ ಪಡೆದುಕೊಂಡಿದೆ. ಕಂಗನಾ ರನೌತ್ ಅವರು ಶುಶ್ರೂಕಿ (ನರ್ಸ್)ಗಳ ಕುರಿತಾದ ‘ಭಾರತ ಭಾಗ್ಯ ವಿದಾತ’ ಸಿನಿಮಾನಲ್ಲಿ ನಟಿಸಿದ್ದು, ಈ ಸಿನಿಮಾದ ಪ್ರಚಾರದ ವೇಳೆ ಅವರು ನರ್ಸ್ಗಳ ವೃತ್ತಿಯ ಬಗ್ಗೆ ಮಾತನಾಡಿದ್ದಾರೆ.
ಭಾರತದಲ್ಲಿ ಶುಶ್ರೂಶಕಿಯ ವೃತ್ತಿಯನ್ನು ತೀವ್ರವಾಗಿ ಸೆಕ್ಷುಲೈಸ್ಡ್ ಮಾಡಲಾಗಿದೆ. ನರ್ಸ್ಗಳಿಗೆ ಸಮಾಜದಲ್ಲಿ ಸೂಕ್ತ ಗೌರವ ಸಿಗುತ್ತಿಲ್ಲ ಎಂದಿದ್ದಾರೆ. ‘ನರ್ಸಿಂಗ್ ಎನ್ನುವುದು ನಮ್ಮ ದೇಶದಲ್ಲಿ ಅತ್ಯಂತ ಹೆಚ್ಚಾಗಿ ಲೈಂಗಿಕೀಕರಿಸಲ್ಪಟ್ಟ ವೃತ್ತಿಯಾಗಿದೆ. ಚಲನಚಿತ್ರಗಳು, ಹಾಸ್ಯ ಪ್ರದರ್ಶನಗಳು (comedy shows) ಮತ್ತು ಪಾಪ್ ಸಂಸ್ಕೃತಿಯಲ್ಲಿ ಅವರನ್ನು ಬಿಂಬಿಸುವ ವಿಧಾನವೇ ಇದಕ್ಕೆ ಪ್ರಮುಖ ಕಾರಣ. ಇದು ಅವರಿಗೆ ಸಿಗಬೇಕಾದ ಗೌರವವನ್ನು ಕಸಿದುಕೊಳ್ಳುತ್ತದೆ’ ಎಂದು ಕಂಗನಾ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ನಟಿ ಕಂಗನಾ, ಬ್ರಿಟಿಷರ ಕಾಲದಿಂದಲೂ ನಡೆದುಕೊಂಡು ಬಂದಿರುವ ಅವರ ಯೂನಿಫಾರ್ಮ್ ಭಾರತೀಯ ಪರಿಸರಕ್ಕೆ ಹೊಂದಿಕೆಯಾಗುತ್ತಿಲ್ಲ ಎಂದಿದ್ದಾರೆ. ‘ಅವರ ಬ್ರಿಟಿಷ್ ಕಾಲದ ಯೂನಿಫಾರ್ಮ್ ಅವರಿಗೆ ಒಂದು ವಿದೇಶಿ ಲುಕ್ ನೀಡುತ್ತದೆ, ಇದು ನಮ್ಮ ಗ್ರಾಮೀಣ ಅಥವಾ ಸಾಂಪ್ರದಾಯಿಕ ಭಾರತೀಯರಿಗೆ ಅವರೊಂದಿಗೆ ಸುಲಭವಾಗಿ ಕನೆಕ್ಟ್ ಆಗಲು ಬಿಡುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ಸ್ಟಾರ್ ನಿರ್ದೇಶಕನ ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್
ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಈ ಮಹಿಳೆಯರಿಗೆ ಸಮಾಜದಲ್ಲಿ ಹೆಚ್ಚಿನ ಘನತೆ ಮತ್ತು ಗೌರವ ಸಿಗಬೇಕು ಎಂದು ಕಂಗನಾ ಒತ್ತಿ ಹೇಳಿದ್ದಾರೆ. ನರ್ಸ್ ಜೀವರಕ್ಷಕಿಯಾಗಿದ್ದು, ಅವರನ್ನು ಕೇವಲ ಒಂದು ಗ್ಲಾಮರ್ ಅಥವಾ ಲೈಂಗಿಕ ವಸ್ತುವಾಗಿ ನೋಡುವುದನ್ನು ನಿಲ್ಲಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಕಂಗನಾ ಅವರ ಈ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ಕೆಲವರು ಅವರ ಮಾತನ್ನು ಬೆಂಬಲಿಸಿ, ಸಿನಿಮಾಗಳಲ್ಲಿ ನರ್ಸ್ ಪಾತ್ರಗಳನ್ನು ತಪ್ಪಾಗಿ ಬಿಂಬಿಸುವುದನ್ನು ನಿಲ್ಲಿಸಬೇಕು ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಯೂನಿಫಾರ್ಮ್ ಮತ್ತು ವಿದೇಶಿ ಲುಕ್ ಬಗ್ಗೆ ಅವರು ಮಾಡಿರುವ ಕಾಮೆಂಟ್ಗಳನ್ನು ಟೀಕಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ