ತಮಿಳು ಸ್ಟಾರ್ ನಟನಿಗೆ ಸಿನಿಮಾ ಮಾಡಲಿದ್ದಾರೆ ನರ್ತನ್, ಕೆವಿಎನ್ ನಿರ್ಮಾಣ

‘ಮಫ್ತಿ’ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ನರ್ತನ್, ಇದೀಗ ತಮಿಳು ಚಿತ್ರರಂಗದ ಕಡೆ ಹೊರಟಿದ್ದಾರೆ. ತಮಿಳಿನ ಸ್ಟಾರ್ ನಟನೊಬ್ಬನೊಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ ನರ್ತನ್. ಸಿನಿಮಾಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಲಿದ್ದಾರೆ.

ತಮಿಳು ಸ್ಟಾರ್ ನಟನಿಗೆ ಸಿನಿಮಾ ಮಾಡಲಿದ್ದಾರೆ ನರ್ತನ್, ಕೆವಿಎನ್ ನಿರ್ಮಾಣ

Updated on: Jul 20, 2024 | 2:27 PM

‘ಮಫ್ತಿ’ ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದಿರುವ ನಿರ್ದೇಶಕ ನರ್ತನ್, ಅದೇ ಸಿನಿಮಾದ ಪ್ರೀಕ್ವೆಲ್ ‘ಭೈರತಿ ರಣಗಲ್’ ಸಿನಿಮಾದ ನಿರ್ದೇಶನ ಪೂರ್ಣಗೊಳಿಸಿದ್ದು ಸಿನಿಮಾದ ಬಿಡುಗಡೆಗೆ ರೆಡಿಯಾಗಿದ್ದಾರೆ. ಆದರೆ ‘ಭೈರತಿ ರಣಗಲ್’ ಸಿನಿಮಾ ಬಿಡುಗಡೆಗೆ ಮುನ್ನವೇ ನರ್ತನ್​ಗೆ ತಮಿಳಿನಿಂದ ಆಫರ್ ಬಂದಿದ್ದು, ತಮಿಳಿನ ಸ್ಟಾರ್ ನಟರೊಬ್ಬರಿಗೆ ನರ್ತನ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಭಾರಿ ಬಜೆಟ್​ನ ಈ ಸಿನಿಮಾವನ್ನು ದೊಡ್ಡ ಬಜೆಟ್ ಸಿನಿಮಾ ನಿರ್ಮಾಣ ಮಾಡುವ ಕೆವಿಎನ್ ನಿರ್ಮಾಣ ಮಾಡಲಿದೆ.

ನರ್ತನ್, ತೆಲುಗಿನ ಸ್ಟಾರ್ ನಟ ರಾಮ್ ಚರಣ್ ತೇಜ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ನರ್ತನ್ ಹಾಗೂ ರಾಮ್ ಚರಣ್ ಪರಸ್ಪರ ಮಾತುಕತೆ ಮಾಡಿದ್ದಾರೆ ಎಂದು ಸುದ್ದಿಗಳು ಹರಿದಾಡಿತ್ತು. ರಾಮ್ ಚರಣ್ ತೇಜ ತೆಲುಗಿನ ಬುಚ್ಚಿಬಾಬು ಸನಾ ಅವರ ಸಿನಿಮಾಕ್ಕೆ ಓಕೆ ಹೇಳಿದ್ದು, ಆ ಸಿನಿಮಾದ ಚಿತ್ರೀಕರಣದಲ್ಲಿ ಕೆಲವೇ ದಿನಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಆದರೆ ರಾಮ್ ಚರಣ್ ಸಿನಿಮಾ ಕೈಗೂಡದೇ ಇರುವ ಕಾರಣ ತಮಿಳಿಗೆ ಹೋದ ನರ್ತನ್ ಅಲ್ಲಿನ ಸ್ಟಾರ್ ನಟರೊಬ್ಬರ ಹುಡುಕಿ ಕತೆ ಒಪ್ಪಿಸಿದ್ದಾರೆ.

ತಮಿಳಿನ ಸ್ಟಾರ್ ನಟ ಎನಿಸಿಕೊಂಡಿರುವ ಸೂರ್ಯಗೆ ನರ್ತನ್ ಕತೆಯೊಂದನ್ನು ಹೇಳಿದ್ದು ಸೂರ್ಯ ಸಹ ಒಪ್ಪಿಕೊಂಡಿದ್ದಾರಂತೆ. ಹಾಗಾಗಿ ಇಬ್ಬರ ಕಾಂಬಿನೇಷನ್​ನ ಸಿನಿಮಾ ಕೆಲವೇ ತಿಂಗಳುಗಳಲ್ಲಿ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಸೂರ್ಯ ಪ್ರಸ್ತುತ ‘ಕನಗುವ’ ಸಿನಿಮಾದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್​ನಲ್ಲಿ ಬ್ಯುಸಿಯಾಗಲಿದ್ದಾರೆ. ‘ಕನಗುವ’ ಸಿನಿಮಾ ಬಿಡುಗಡೆ ಬಳಿಕ ಸೂರ್ಯ ಜೊತೆಗೆ ನರ್ತನ್ ಸಿನಿಮಾ ಪ್ರಾರಂಭಿಸಲಿದ್ದಾರಂತೆ. ಅಂದಹಾಗೆ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಲಿದೆ.

ಅಸಲಿಗೆ ನರ್ತನ್, ನಟ ಯಶ್​ಗಾಗಿ ಕತೆಯೊಂದನ್ನು ರೆಡಿ ಮಾಡಿದ್ದರು. ಇದಕ್ಕಾಗಿ ಸುಮಾರು ಎರಡು ವರ್ಷ ಸಮಯವನ್ನು ನರ್ತನ್ ವ್ಯರ್ಥ ಮಾಡಿದ್ದರು. ಕೊನೆಗೆ ಯಶ್​ಗೆ ಆ ಕತೆ ಇಷ್ಟವಾಗಲಿಲ್ಲವಂತೆ. ಕೊನೆಗೆ ಅದೇ ಕತೆಯನ್ನು ನರ್ತನ್ ರಾಮ್ ಚರಣ್​ಗೆ ಹೇಳಿದ್ದರು. ಆರಂಭದಲ್ಲಿ ರಾಮ್ ಚರಣ್​ಗೆ ಕತೆ ಇಷ್ಟವಾಯ್ತಾದರೂ ಆ ನಂತರ ರಾಮ್ ಚರಣ್ ರೇಂಜ್ ಬದಲಾಗಿ ಅವರ ರೇಂಜ್​ಗೆ ಈ ಕತೆ ಚಿಕ್ಕದೆನಿಸಿ ಸಿನಿಮಾದಿಂದ ಹೊರಗುಳಿದರು. ಕೊನೆಗೆ ನರ್ತನ್ ತಮಿಳಿನ ಸೂರ್ಯ ಅವರನ್ನು ನಟಿಸಲು ಒಪ್ಪಿಸಿದ್ದಾರೆ.

ಇದನ್ನೂ ಓದಿ:ಯಶ್, ರಾಮ್ ಚರಣ್ ಬಳಿಕ ವಿಜಯ್ ದೇವರಕೊಂಡ ಪಾಲಾದ ನರ್ತನ್ ಕತೆ

ನರ್ತನ್, ಶ್ರೀಮುರಳಿ ಮತ್ತು ಶಿವರಾಜ್ ಕುಮಾರ್ ನಟನೆಯ ‘ಮಫ್ತಿ’ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿತ್ತು. ಆ ಸಿನಿಮಾದಲ್ಲಿ ಶಿವಣ್ಣನ ‘ಭೈರತಿ ರಣಗಲ್’ ಪಾತ್ರ ಸಖತ್ ಹಿಟ್ ಆಗಿತ್ತು. ಇದೀಗ ಅದೇ ಪಾತ್ರವನ್ನು ಪ್ರಧಾನವಾಗಿ ಇರಿಸಿಕೊಂಡು ಸಿನಿಮಾ ಮಾಡಿದ್ದಾರೆ ನರ್ತನ್. ಇದು ಅವರ ಎರಡನೇ ಸಿನಿಮಾ ಅಷ್ಟೆ. ‘ಭೈರತಿ ರಣಗಲ್’ ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us