‘ಕನ್ನಡತಿ’ ತಂಡಕ್ಕೆ ಭಯಾನಕ ಅನುಭವ; ವಿಡಿಯೋ ಸಮೇತ ವಿವರಿಸಿದ ಭುವಿ

Ranjani Raghavan: ಗೊತ್ತಿಲ್ಲದ ದಾರಿಯಲ್ಲಿ, ಗೊತ್ತಿಲ್ಲದವರ ವಾಹನದಲ್ಲಿ, ರಾತ್ರಿ ವೇಳೆ ಪ್ರಯಾಣ ಮಾಡುತ್ತಿದ್ದ ರಂಜನಿ ರಾಘವನ್​ ಅವರಿಗೆ ಸಖತ್​ ಭಯವಾಗಿತ್ತು. ಆ ಕಾರಣಕ್ಕಾಗಿ ಅವರು ಈ ವಿಡಿಯೋ ಮಾಡಿದ್ದಾರೆ.

‘ಕನ್ನಡತಿ’ ತಂಡಕ್ಕೆ ಭಯಾನಕ ಅನುಭವ; ವಿಡಿಯೋ ಸಮೇತ ವಿವರಿಸಿದ ಭುವಿ
ರಂಜನಿ ರಾಘವನ್​
Edited By:

Updated on: Aug 10, 2021 | 11:16 AM

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ಕನ್ನಡತಿ’ ಸೀರಿಯಲ್​ ಶೂಟಿಂಗ್​ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಲಾಕ್​ಡೌನ್​ ಇರುವ ಕಾರಣ ಕರ್ನಾಟಕದಲ್ಲಿ ಚಿತ್ರೀಕರಣಕ್ಕೆ ಅವಕಾಶ ಇಲ್ಲ. ಹಾಗಾಗಿ ಪರರಾಜ್ಯದ ರಾಮೋಜಿ ಫಿಲ್ಮ್​ ಸಿಟಿಗೆ ತೆರಳಿ ನಟಿ ರಂಜನಿ ರಾಘವನ್​, ಕಿರಣ್​ ರಾಜ್​ ಮುಂತಾದವರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ರಾತ್ರಿ ಶೂಟಿಂಗ್​ ಮುಗಿಸಿ ಹೋಟೆಲ್​ಗೆ ವಾಪಸ್​ ಬರುವಾಗ ರಂಜನಿ ಮತ್ತು ಕಿರಣ್​ಗೆ ಭಯಾನಕ ಅನುಭವ ಆಗಿದೆ. ಕೂಡಲೇ ಅವರು ವಿಡಿಯೋ ಚಿತ್ರಿಸಿಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿದ್ದಾರೆ.

ಅಷ್ಟಕ್ಕೂ ಅಲ್ಲಿ ಏನಾಯ್ತು ಎಂಬುದನ್ನು ರಂಜನಿ ರಾಘವನ್​ ಎಳೆಎಳೆಯಾಗಿ ವಿವರಿಸಿದ್ದಾರೆ. ‘ಇದು ನೈಜ ಘಟನೆ ಆಧಾರಿತ ಥ್ರಿಲ್ಲರ್​ ಕಥೆ. ಇದರಲ್ಲಿ ಬರುವ ಎಲ್ಲ ಪಾತ್ರಗಳು ಕಾಲ್ಪನಿಕವಲ್ಲ. ವಿಡಿಯೋ ಸಾಕ್ಷಿಯ ಸಮೇತ ಇದು ನಮ್ಮ ಅನುಭವ’ ಎಂಬ ಕ್ಯಾಪ್ಷನ್​ನೊಂದಿಗೆ ರಂಜನಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಗೊತ್ತಿಲ್ಲದ ದಾರಿಯಲ್ಲಿ, ಗೊತ್ತಿಲ್ಲದವರ ವಾಹನದಲ್ಲಿ, ರಾತ್ರಿ ವೇಳೆ ಪ್ರಯಾಣ ಮಾಡುತ್ತಿದ್ದ ಅವರಿಗೆ ಸಖತ್​ ಭಯವಾಗಿತ್ತು. ಆ ಕಾರಣಕ್ಕಾಗಿ ಅವರು ಈ ವಿಡಿಯೋ ಮಾಡಿದ್ದಾರೆ. ‘ನನಗೆ ಒಳಗಡೆ ತುಂಬ ಭಯ ಆಗುತ್ತಿದೆ. ಆದರೆ ಹೊರಗಿಂದ ನಗುತ್ತಿದ್ದೇನೆ ಅಷ್ಟೇ’ ಎಂದು ಇಂಗ್ಲಿಷ್​ನಲ್ಲಿ ಹೇಳುವ ಮೂಲಕ ಅಸಲಿ ಘಟನೆಯನ್ನು ಅವರು ವಿವರಿಸಿದ್ದಾರೆ.

‘ಜೊತೆಗಿದ್ದವರಿಗೆ ಗೊತ್ತಾಗದೇ ಇರಲಿ ಎಂದು ಇಂಗ್ಲಿಷ್​ನಲ್ಲಿ ಮಾತಾಡಿದ್ದು. ಬೈಕೋಬೇಡಿ. ಇವತ್ತು ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಶೂಟಿಂಗ್ ಬೇಗ ಮುಗಿದಿತ್ತು. ಆದರೆ ಪ್ಯಾಕ್​ಅಪ್​ ಆಗಿರಲಿಲ್ಲ. ಎಲ್ಲರೂ ಬರೋದಕ್ಕೆ ಇನ್ನೂ ಸಮಯ ಇತ್ತು. ಒಟ್ಟಿಗೆ ವಾಪಸ್ ಹೋಟೆಲ್​ಗೆ ಹೋಗೋಕೆ ಕಾಯುತ್ತಿರುವಾಗ, ಹಾಗೇ ಏನೋ ಮಾತಾಡ್ತಾ ಕೂತಿದ್ದೆ. ಗಾಡಿ ಇದೆ ಬರ್ತೀರಾ ಎಂದು ಕಿರಣ್​ ರಾಜ್​ ಕೇಳಿದ್ರು. ನೋಡಿದ್ರೆ ಒಂದು ಲಗೇಜ್ ಗಾಡಿ ನಿಂತಿತ್ತು. ಇದ್ರಲ್ಲಿ ಹೋಗೋಣ ಮಜಾ ಇರುತ್ತೆ ಅಂತ ನಾನು ಏನೂ ಯೋಚನೆ ಮಾಡದೇ ಗಾಡಿ ಹತ್ತಿದೆ. ನಟಿ ಸಾರಾ ಕೂಡ ಅದಾಗಲೇ ಆ ಗಾಡಿ ಹತ್ತಿದ್ರು’ ಎಂದಿದ್ದಾರೆ ರಂಜನಿ.

‘ಬೇಗ ರೂಮ್ ತಲುಪಬಹುದು. ಸುತ್ತ ಮುತ್ತ ಜಾಗವನ್ನು ಓಪನ್ ಗಾಡೀಲಿ ನೋಡಬಹುದು ಅಂತ ಜೋಶ್​ನಲ್ಲಿ ಹೊರಟ್ವಿ. ಗಾಡಿ ಗಡಗಡ ಅಂತ ಶಬ್ದ ಮಾಡ್ತಾ ಸೆಟ್ ಇಂದ 2-3 ಕಿ.ಮೀ. ದೂರ ಬಂತು. ‘ಇವ್ರು ಎಲ್ಲಿಗೆ ಕರ್ಕೊಂಡ್ ಹೋಗ್ತಿದ್ದಾರೆ? ನನ್ ಮೈಮೇಲೇ ಮಿನಿಮಮ್ ಮೂರು ಲಕ್ಷ ಚಿನ್ನ ಇದೆ’ ಎಂದು ಕಿರಣ್ ಗುಟ್ಟಾಗಿ ಹೇಳಿದ ತಕ್ಷಣ ನನ್ನ ಎದೆ ಧಸಕ್ ಎಂದಿತು. ನೋಡಿದ್ರೆ ಗಾಡಿ ಎಲ್ಲೋ ಆಫ್​ರೋಡ್ ಹೋಗ್ತಿದೆ’ ಎಂದು ಭಯಾನಕ ಘಟನೆಯ ಬಗ್ಗೆ ರಂಜನಿ ಬರೆದುಕೊಂಡಿದ್ದಾರೆ.

‘ಗಾಡಿಯಲ್ಲಿ ಒಬ್ಬ ಕನ್ನಡ ಮಾತಾಡೋನಿದ್ದ ಅಂತ ಅವನ ಹತ್ತಿರ ಮಾತಾಡಿಕೊಂಡು ಹೊರಟಿದ್ವಿ. ಸ್ವಲ್ಪ ಹೊತ್ತಿನ ಮೇಲೆ ಗೊತ್ತಾಯ್ತು ಅವನು ಕುಡಿದಿದ್ದ ಅಂತ. ರಾಮೋಜಿ ಫಿಲ್ಮ್​ ಸಿಟಿಯ ಮಾಮೂಲಿ ರೋಡ್ ಬಿಟ್ಟು ಕತ್ತಲೇಲಿ ನಮ್ಮನ್ನ ಎಲ್ಲಿಗೆ ಕರ್ಕೊಂಡು ಹೋಗ್ತಿದ್ದಾರೆ? ಮುಂದೆ ಕೂತಿರೋ ಡ್ರೈವರ್ ಗೊತ್ತಿರೋದಿರ್ಲಿ, ಅವರ ಮುಖಾನೂ ನೋಡಿಲ್ಲ! ನಮಗೇನಾದರು ಮಾಡಿಬಿಡ್ತಾರಾ? ಹೊರ ರಾಜ್ಯದಲ್ಲಿ, ಗೊತ್ತಿಲ್ಲದವರ ಗಾಡಿಯಲ್ಲಿ, ಗೊತ್ತೂ ಗುರಿ ಇಲ್ಲದೇ ಹೊರಟಿದ್ದೀವಿ. ಏನಪ್ಪಾ ಗತಿ ಅಂತ ಹೆದರಿಕೊಂಡು ಈ ವಿಡಿಯೋ ಮಾಡಿದ್ದು. ಕ್ರೈಮ್ ಇನ್ವೆಸ್ಟಿಗೇಶನ್ ನಡೆಯುವಾಗ ಸಾಕ್ಷಿಗೆ ಅಂತ ವಿಡಿಯೋ ಸಿಗುತ್ತಲ್ಲ ಆತರ’ ಎಂದು ರಂಜನಿ ಬರೆದುಕೊಂಡಿದ್ದಾರೆ.

ಕೊನೆಗೆ ರಂಜನಿ ಸೇಫ್​ ಆಗಿ ಹೋಟೆಲ್​ ರೂಮ್​ ತಲುಪಿದ್ರಾ? ‘ಮುಂದೇನಾಯ್ತು? ಭಾಗ ಎರಡರಲ್ಲಿ ನಿರೀಕ್ಷಿಸಿ’ ಎಂದು ಅವರು ಘಟನೆ ವಿವರಿಸೋದನ್ನು ನಿಲ್ಲಿಸಿದ್ದಾರೆ.

ಇದನ್ನೂ ಓದಿ:

Ranjani Raghavan: ‘ಕನ್ನಡತಿ’ ಧಾರಾವಾಹಿ ನಟಿ ರಂಜನಿ ರಾಘವನ್​ ಫೇಸ್​ಬುಕ್​ ಹ್ಯಾಕ್​; ಯಾರ ಮೇಲಿದೆ ಅನುಮಾನ?

Ranjani Raghavan: ಕೆಟ್ಟ ಕಾಲ ಶಾಶ್ವತವಲ್ಲ, ಯಾರೂ ಕುಗ್ಗಬೇಕಿಲ್ಲ; ಲಾಕ್​ಡೌನ್ ಸಂಕಷ್ಟದಲ್ಲಿ ರಂಜನಿ ರಾಘವನ್ ಸ್ಫೂರ್ತಿ ಮಾತು

Published On - 12:59 pm, Mon, 31 May 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us