AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಫಿ ಸಾಕ್ಷಿ ಅರ್ಜಿ ವಿಚಾರಣೆ: ಜಡ್ಜ್ ಕೇಳಿದ ಪ್ರಶ್ನೆಗಳಿಗೆ ಪ್ರದೋಷ್ ನೀಡಿದ ಉತ್ತರ ಏನು?

ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ಆತನಿಗೆ ಜಡ್ಜ್ ಹಲವು ಪ್ರಶ್ನೆ ಕೇಳಿದ್ದಾರೆ. ಅವುಗಳಿಗೆ ಆತ ಉತ್ತರ ನೀಡಿದ್ದಾನೆ. ಇದಕ್ಕೆ ಸಂಬಂಧಿಸಿದ ಆದೇಶವನ್ನು ಕಾಯ್ದಿರಿಸಿ, ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಲಾಗಿದೆ. ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಢವಢವ ಹೆಚ್ಚಿದೆ.

ಮಾಫಿ ಸಾಕ್ಷಿ ಅರ್ಜಿ ವಿಚಾರಣೆ: ಜಡ್ಜ್ ಕೇಳಿದ ಪ್ರಶ್ನೆಗಳಿಗೆ ಪ್ರದೋಷ್ ನೀಡಿದ ಉತ್ತರ ಏನು?
Darshan, Pradosh
ರಮೇಶ್​ ಎಮ್​.
| Edited By: |

Updated on: Aug 18, 2026 | 5:08 PM

Share

ಮುಖ್ಯಾಂಶಗಳು

  • ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಸ್ವಯಂಪ್ರೇರಿತವಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.
  • ವಿಚಾರಣೆ ವೇಳೆ ಜಡ್ಜ್ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಪ್ರದೋಷ್ ಸೂಕ್ತ ಉತ್ತರ ನೀಡಿದ್ದಾನೆ.
  • ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿದೆ.

ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಪ್ರದೋಷ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆದಿದೆ. 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು 14ನೇ ಆರೋಪಿ ಪ್ರದೋಷ್​ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಮಾಫಿ ಸಾಕ್ಷಿಯ ಅರ್ಜಿಯನ್ನು ಓದಿ ಪ್ರದೋಷ್ (Pradosh) ಪ್ರತಿಕ್ರಿಯಿಸಿದ್ದಾನೆ. ನೀವು ಸ್ವಯಂಪ್ರೇರಿತವಾಗಿ ಈ ಅರ್ಜಿ ಸಲ್ಲಿಸಿದ್ದೀರಾ ಎಂದು ಕೇಳಿದ್ದಕ್ಕೆ ಹೌದು ಎಂದು ಪ್ರದೋಷ್ ಉತ್ತರಿಸಿದ್ದಾನೆ. ಒಂದು ವೇಳೆ ಪ್ರದೋಷ್ ಮಾಫಿಸಾಕ್ಷಿಯಾಗಲು ಕೋರ್ಟ್ ಅವಕಾಶ ನೀಡಿದರೆ ದರ್ಶನ್ (Darshan) ಅವರಿಗೆ ಸಂಕಷ್ಟ ಹೆಚ್ಚಲಿದೆ.

‘ಈ ಅರ್ಜಿಯನ್ನು ಓದಿದ ಬಳಿಕ ಸಹಿ ಮಾಡಿದ್ದೀರಾ? ಅರ್ಜಿಯ ಪರಿಣಾಮದ ಬಗ್ಗೆ ವಕೀಲರು ಮಾಹಿತಿ ನೀಡಿದ್ದಾರಾ?’ ಎಂದು ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಪ್ರಶ್ನಿಸಿದರು. ‘ಸ್ವಯಂಪ್ರೇರಿತವಾಗಿ ಅರ್ಜಿ ಸಲ್ಲಿಸಿದ್ದೇನೆ, ಸಹಿ ಮಾಡಿದ್ದೇನೆ. ಅರ್ಜಿಯ ಪರಿಣಾಮದ ಬಗ್ಗೆ ವಕೀಲರು ಮಾಹಿತಿ ನೀಡಿದ್ದಾರೆ’ ಎಂದು ಪ್ರದೋಷ್ ಉತ್ತರ ನೀಡಿದ್ದಾನೆ.

‘ನಿಮ್ಮ ಮಾಫಿ ಸಾಕ್ಷಿ ಒಪ್ಪದಿದ್ದರೆ ನೀವು ಜೈಲಿನಲ್ಲೇ ಇರಬೇಕಾಗಲಿದೆ. ಈ ಬಗ್ಗೆ ನಿಮಗೆ ಮಾಹಿತಿ ಇದೆಯಾ?’ ಎಂದು ಜಡ್ಜ್ ಪ್ರಶ್ನಿಸಿದ್ದಕ್ಕೆ, ‘ಹೌದು ವಕೀಲರು ಹೇಳಿದ್ದಾರೆ’ ಎಂದು ಪ್ರದೋಷ್ ಉತ್ತರಿಸಿದ್ದಾನೆ. ‘ನೀವು ಸಂಪೂರ್ಣ ಸತ್ಯ ಹೇಳದಿದ್ದರೆ ಆರೋಪಿಯಾಗಿಸಲಾಗುವುದು. ಈ ಬಗ್ಗೆ ಮಾಹಿತಿ ಇದೆಯಾ’ ಎಂದು ಕೇಳಿದ್ದಕ್ಕೆ ಕೂಡ ‘ಹೌದು, ವಕೀಲರು ತಿಳಿಸಿದ್ದಾರೆ’ ಎಂದು ಪ್ರದೋಷ್ ಉತ್ತರ ನೀಡಿದ್ದಾನೆ.

ದರ್ಶನ್ ಪರ ವಕೀಲರ ಆಕ್ಷೇಪ:

ಮಾಫಿ ಸಾಕ್ಷಿಯಾಗಲು ಪ್ರದೋಷ್ ಅರ್ಜಿ ಸಲ್ಲಿಸಿರುವುದನ್ನು ದರ್ಶನ್ ಪರ ವಕೀಲರು ಆಕ್ಷೇಪಿಸಿದ್ದಾರೆ. ‘ಮಾಫಿ ಸಾಕ್ಷಿ ನೀಡಿದರೆ ಬಿಡುಗಡೆಯಾಗುತ್ತದೆಂದು ಅರ್ಜಿ ಹಾಕಿದ್ದಾರೆ. ಬಿಡುಗಡೆಯಾಗುವ ಆಸೆಯಿಂದ ಮಾಫಿ ಸಾಕ್ಷಿಯಾಗಿದ್ದಾರೆ. ಕೋರ್ಟ್ ಈ ಬಗ್ಗೆ ಸ್ವತಂತ್ರ ವಿಚಾರಣೆ ನಡೆಸಿ ತೀರ್ಮಾನಿಸಬೇಕು. ಮಾಫಿ ಸಾಕ್ಷಿ ಅರ್ಜಿ ಹಿಂದಿನ ದುರುದ್ದೇಶ ಅರಿಯಬೇಕು. ಯಾವುದಾದರೂ ಒತ್ತಡವಿದೆಯೇ ಎಂಬುದರ ವಿಚಾರಣೆ ನಡೆಸಬೇಕು. ಯಾರಾದರೂ ಏನಾದರೂ ಭರವಸೆ ನೀಡಿದ್ದಾರಾ ಎಂಬುದನ್ನು ಪರಿಶೀಲಿಸಬೇಕು’ ಎಂದು ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿದ್ದಾರೆ.

ಇದನ್ನೂ ಓದಿ: ಮಾಫಿ ಸಾಕ್ಷಿ: ನಟ ದರ್ಶನ್ ಮೇಲ್ಮನವಿ ವಜಾ; ಹೈಕೋರ್ಟ್​ನಲ್ಲಿ ಮತ್ತೆ ಹಿನ್ನಡೆ

ಆದೇಶ ಕಾಯ್ದಿರಿಸಿದ ಕೋರ್ಟ್:

ದರ್ಶನ್ ಆಪ್ತ ಬಳಗದಲ್ಲಿ ಪ್ರದೋಷ್ ಗುರುತಿಸಿಕೊಂಡಿದ್ದ. ರೇಣುಕಾಸ್ವಾಮಿ ಕೊಲೆಯಾದ ದಿನ ಏನೆಲ್ಲ ನಡೆಯಿತು ಎಂಬುದು ಪ್ರದೋಷ್​ಗೆ ಚೆನ್ನಾಗಿ ತಿಳಿದಿರುವ ಸಾಧ್ಯತೆ ಇದೆ. ಒಂದು ವೇಳೆ ಪ್ರದೋಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯನ್ನು ಕೋರ್ಟ್ ಒಪ್ಪಿದರೆ ದರ್ಶನ್​​ಗೆ ಆಘಾತ ಆಗಲಿದೆ. ಸದ್ಯ ಇದಕ್ಕೆ ಸಂಬಂಧಿಸಿದ ಆದೇಶವನ್ನು ಕಾಯ್ದಿರಿಸಿ, ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us