
ದೀಪಾವಳಿ ಹಬ್ಬಕ್ಕೆ ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ತೆರೆಕಾಣಲಿದೆ. ಆದರೆ ಅದಕ್ಕೂ ಮುನ್ನವೇ ಮತ್ತೊಂದು ರಾಮಾಯಣ ಆಧಾರಿತ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅಭಿಷೇಕ್ ಸಿಂಗ್ ನಿರ್ದೇಶನದ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಸಿನಿಮಾ ಸೆಪ್ಟೆಂಬರ್ 25 ರಂದು ಹಿಂದಿ ಮತ್ತು ಛತ್ತೀಸ್ಗಢಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೇಲರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ.
ಚಿತ್ರದ ಟ್ರೇಲರ್ ನೇರವಾಗಿ ಪ್ರಮುಖ ಕಥಾವಸ್ತುವಿಗೆ ಪ್ರೇಕ್ಷಕರನ್ನು ಕರೆದೊಯ್ಯುತ್ತದೆ. ರಾವಣನು ಸೀತೆಯನ್ನು ಅಪಹರಿಸಿ ಲಂಕೆಗೆ ಕರೆದೊಯ್ಯುವ ದೃಶ್ಯದಿಂದ ಕಥೆ ತೀವ್ರತೆ ಪಡೆದುಕೊಳ್ಳುತ್ತದೆ. ಚಿನ್ನದ ಜಿಂಕೆಯ ಮಾಯೆಗೆ ಮರುಳಾಗುವ ರಾಮನಿಗೆ ಸೀತೆಯ ಅಪಹರಣದ ವಿಷಯ ತಿಳಿಯುತ್ತದೆ. ನಂತರ ರಾಮನು ಸೀತೆಯ ಹುಡುಕಾಟದಲ್ಲಿ ಲಂಕೆಯತ್ತ ಪ್ರಯಾಣ ಬೆಳೆಸುತ್ತಾನೆ. ಹನುಮಂತನು ಸೀತೆಯನ್ನು ಭೇಟಿಯಾಗುವ ದೃಶ್ಯಗಳು ಟ್ರೇಲರ್ನಲ್ಲಿ ಇದೆ.
ಈ ಸಿನಿಮಾದಲ್ಲಿ ರಾಮಾಯಣದ ಪ್ರಮುಖ ಘಟನೆಗಳನ್ನು ಒಂದೇ ಭಾಗದಲ್ಲಿ ಕಟ್ಟಿಕೊಡಲಾಗಿದೆ. ರಾಮಸೇತು ನಿರ್ಮಾಣ, ಹನುಮಂತನು ಲಂಕಾ ದಹನ ಮಾಡುವುದು ಮತ್ತು ಸಂಜೀವಿನಿ ಪರ್ವತವನ್ನು ತರುವ ಸಾಹಸಮಯ ದೃಶ್ಯಗಳು ಇದರಲ್ಲಿವೆ. ನಿತೇಶ್ ತಿವಾರಿ ಅವರ ಬಿಗ್ ಬಜೆಟ್ ಸಿನಿಮಾಗೆ ಹೋಲಿಸಿದರೆ ಈ ಚಿತ್ರವು ಕೊಂಚ ಸರಳವಾಗಿದೆ. ಆದರೂ ತನ್ನದೇ ಆದ ವಿಶಿಷ್ಟ ಹಾಗೂ ಪ್ರಾದೇಶಿಕ ಸ್ಪರ್ಶವನ್ನು ಕಾಯ್ದುಕೊಂಡಿದೆ.
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರವು ಭಾರಿ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಆ ಚಿತ್ರಕ್ಕೆ ಆಸ್ಕರ್ ವಿಜೇತ ವಿಎಫ್ಎಕ್ಸ್ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಆದರೆ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಚಿತ್ರವು ಪ್ರಾದೇಶಿಕ ಮಾರುಕಟ್ಟೆಯನ್ನು ಹೆಚ್ಚು ನೆಚ್ಚಿಕೊಂಡಿದೆ. ಪ್ರಮುಖವಾಗಿ ಛತ್ತೀಸ್ಗಢ ರಾಜ್ಯದಲ್ಲಿ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆಯಿದೆ.
ಇದನ್ನೂ ಓದಿ: ‘ರಾಮಾಯಣ’ ಚಿತ್ರದ ‘ಜೈ ಜೈ ರಾಮ್’ ಹಾಡು ಬಿಡುಗಡೆ: ಶ್ರೇಯಾ-ಅರಿಜಿತ್ ಕಂಠಕ್ಕೆ ಅಭಿಮಾನಿಗಳು ಫಿದಾ
ಈ ಚಿತ್ರದಲ್ಲಿ ದೇವ್ ಶರ್ಮಾ ರಾಮನಾಗಿ, ಅಂಜಲಿ ಅರೋರಾ ಸೀತೆಯಾಗಿ ಮತ್ತು ರಜನೀಶ್ ದುಗ್ಗಲ್ ರಾವಣನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಥಿಯೇಟರ್ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ‘ದಿ ವನ್’ ಚಿತ್ರದ ಜೊತೆಗೆ ಇದು ಸ್ಪರ್ಧಿಸಲಿದೆ. ರಾಮಾಯಣದ ಭಕ್ತಿಪೂರ್ವಕ ಕಥೆಯನ್ನು ಸರಳವಾಗಿ ಪ್ರೇಕ್ಷಕರಿಗೆ ತಲುಪಿಸುವುದು ಈ ಚಿತ್ರತಂಡದ ಮುಖ್ಯ ಉದ್ದೇಶವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.