ಬಿಗ್ ಬಾಸ್ ಶೋನಿಂದ ಹೊರಗೆ ಬರಲು ನಿರ್ಧರಿಸಿದ ಅವಿನಾಶ್; ಮಂಜನ ವರ್ತನೆಯೇ ಕಾರಣ
ಅಗ್ನಿಪರೀಕ್ಷೆ ಮೂಲಕ ಬಿಗ್ ಬಾಸ್ ಮನೆಗೆ ಬಂದಿರುವ ಸ್ಪರ್ಧಿಗಳ ವರ್ತನೆಯಿಂದ ಇಡೀ ಮನೆಯ ಶಾಂತಿಭಂಗ ಆಗಿದೆ. ಮಂಜನ ಅತಿರೇಕದ ನಡೆಯಿಂದಾಗಿ ಅವಿನಾಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರಲು ನಿರ್ಧರಿಸಿದ್ದಾರೆ. ಸೂಟ್ಕೇಸ್ ಪ್ಯಾಕ್ ಮಾಡಿಕೊಂಡು ಅವರು ಹೊರಡಲು ಸಿದ್ಧರಾಗಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಮಂಜನ ಹಾವಳಿ ಜಾಸ್ತಿ ಆಗಿದೆ. ಅದರಿಂದಾಗಿ ಹಲವು ಸ್ಪರ್ಧಿಗಳಿಗೆ ಕಿರಿಕಿರಿ ಆಗಿದೆ. ಈ ಮಾತನ್ನು ಹಲವರು ಮೊದಲಿನಿಂದಲೂ ಹೇಳುತ್ತಲೇ ಇದ್ದಾರೆ. ಸೆಪ್ಟೆಂಬರ್ 17ರ ಸಂಚಿಕೆಯಲ್ಲಿ ಮಂಜ ನಡೆದುಕೊಂಡ ರೀತಿಗೆ ಅವಿನಾಶ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಂಥ ವ್ಯಕ್ತಿಗಳ ಜೊತೆಯಲ್ಲಿ ತಾವು ಇರುವುದಿಲ್ಲ ಎಂದು ಅವಿನಾಶ್ ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಬಿಗ್ ಬಾಸ್ ಮನೆಯಿಂದ ತಾವು ಹೊರಗೆ ಹೋಗಲು ನಿರ್ಧರಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಎಲ್ಲದಕ್ಕೂ ಇತಿಮಿತಿ ಇದೆ. ಆಹಾರದ ಸಾಮಾಗ್ರಿಗಳನ್ನು ಬಳಸುವಾಗಲೂ ಆ ನಿಯಮ ಪಾಲಿಸಬೇಕು. ಆದರೆ ಲಿಖಿತ್, ಧನುಷ್, ಮಂಜ ಈ ವಿಚಾರದಲ್ಲಿ ಹದ್ದು ಮೀರಿದ್ದಾರೆ. ಬೇರೆ ಎಲ್ಲರೂ ಮಲಗಿರುವಾಗ ಮಧ್ಯ ರಾತ್ರಿ ಅಡುಗೆ ಮನೆಗೆ ಬಂದು ಬೇರೆಯವರ ಪಾಲಿನ ಮೊಟ್ಟೆ ಇತ್ಯಾದಿಯನ್ನು ತಿಂದಿದ್ದಾರೆ. ಅಲ್ಲದೇ ಅಡುಗೆ ಮನೆಯ ತುಂಬ ಮೊಟ್ಟೆಯ ವಾಸನೆ ಹರಡುವಂತೆ ಮಾಡಿದ್ದಾರೆ.
ಇದನ್ನು ಗಮನಿಸಿದ ಹಲವು ಸ್ಪರ್ಧಿಗಳಿಗೆ ಕೋಪ ಬಂದಿದೆ. ಹಾಗಿದ್ದರೂ ಕೂಡ ಯಾರೂ ಮಾತನಾಡಿಲ್ಲ. ಆದರೆ ಅವಿನಾಶ್ ಅವರು ಮಂಜ ಹಾಗೂ ಸಂಗಡಿಗರ ನಡೆಯನ್ನು ಖಂಡಿಸಿದ್ದಾರೆ. ಇಷ್ಟು ಕೀಳುಮಟ್ಟದ ವ್ಯಕ್ತಿಗಳ ಜೊತೆಯಲ್ಲಿ ತಾವು ಇರುವುದಿಲ್ಲ ಎಂದು ಅವಿನಾಶ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಬಟ್ಟೆ ಪ್ಯಾಕ್ ಮಾಡಿಕೊಂಡು ಮನೆಯಿಂದ ಹೊರಡಲು ತೀರ್ಮಾನಿಸಿದ್ದಾರೆ.
ತಾವು ಬಿಗ್ ಬಾಸ್ ಆಟವನ್ನು ಅರ್ಧಕ್ಕೆ ನಿಲ್ಲಿಸುವ ನಿರ್ಧಾರವನ್ನು ಅವಿನಾಶ್ ಅವರು ತಿಳಿಸಿದ್ದಾರೆ. ಬಿಗ್ ಬಾಸ್ ಮನೆಯ ಮುಖ್ಯದ್ವಾರವನ್ನು ತೆರೆಯುವಂತೆ ಅವರು ಕ್ಯಾಮೆರಾ ಎದುರು ನಿಂತು ಕೇಳಿಕೊಂಡಿದ್ದಾರೆ. ಅಲ್ಲದೇ, ತಮ್ಮನ್ನು ಕನ್ಫೆಷನ್ ರೂಮ್ಗೆ ಕರೆಸುವಂತೆ ಮನವಿ ಮಾಡಿದ್ದಾರೆ. ಇಷ್ಟೆಲ್ಲ ನಡೆಯುವ ವೇಳೆಗೆ ಅವರನ್ನು ಇನ್ನಷ್ಟು ಕೆಣಕಲು ಮಂಜ ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: ಸಹಸ್ಪರ್ಧಿಗೆ ಹೊಡೆದ ಪ್ರಕರಣ; ಬಿಗ್ ಬಾಸ್ ಬಿಟ್ಟರೂ ಸೌಂದರ್ಯಾಗೆ ತಪ್ಪಿಲ್ಲ ಸಂಕಷ್ಟ
ಕೋಪ ಜಾಸ್ತಿಯಾದರೆ ಮಂಜನಿಗೆ ಹೊಡೆಯುವುದಾಗಿ ಕೂಡ ಅವಿನಾಶ್ ಎಚ್ಚರಿಸಿದ್ದಾರೆ. ತಾವಾಗಿಯೇ ಬಿಗ್ ಬಾಸ್ ಆಟವನ್ನು ಅರ್ಧಕ್ಕೆ ನಿಲ್ಲಿಸಿ, ದೊಡ್ಮನೆಯಿಂದ ಹೊರಗೆ ಹೋಗಲು ನಿರ್ಧರಿಸಿರುವುದರಿಂದ ಮಂಜನ ಮೇಲೆ ಕೈ ಮಾಡುವುದು ತಮಗೆ ದೊಡ್ಡ ವಿಷಯ ಅಲ್ಲ ಎಂಬರ್ಧದಲ್ಲಿ ಅವಿನಾಶ್ ಅವರು ಮಾತನಾಡಿದ್ದಾರೆ. ಬಳಿಕ ಅವರನ್ನು ಬಿಗ್ ಬಾಸ್ ಕನ್ಫೆಷನ್ ರೂಮಿಗೆ ಬರಲು ಹೇಳಿದ್ದಾರೆ. ಮುಂದೇನಾಗುತ್ತದೆ ಎಂಬ ಕೌತುಕ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




