ಚಿತ್ರರಂಗದ ದಿಗ್ಗಜನ ಬಗ್ಗೆ ಸಿನಿಮಾ: ಯಾರಿದು ವಿ ಶಾಂತಾರಾಮ್?

Indian cinema legend: ಬಾಲಿವುಡ್​ನಲ್ಲಿ ಹಲವಾರು ಬಯೋಪಿಕ್​​ಗಳು ಬಂದಿವೆ. ಈಗಲೂ ಬರುತ್ತಲೇ ಇವೆ. ಚಿತ್ರರಂಗಕ್ಕೆ ಸಂಬಂಧಿಸಿದ ದಿಗ್ಗಜರ ಬಗೆಗೂ ಬಯೋಪಿಕ್​​ಗಳು ಬರುತ್ತಲೇ ಇವೆ. ಇದೀಗ ಭಾರತೀಯ ಚಿತ್ರರಂಗದ ದಿಗ್ಗಜರೊಬ್ಬರ ಕುರಿತಾದ ಬಯೋಪಿಕ್ ಒಂದು ತೆರೆಗೆ ಬರಲು ಸಜ್ಜಾಗುತ್ತಿದ್ದು, ನಾಯಕಿಯಾಗಿ ತಮನ್ನಾ ಭಾಟಿಯಾ ನಟಿಸಿದ್ದಾರೆ.

ಚಿತ್ರರಂಗದ ದಿಗ್ಗಜನ ಬಗ್ಗೆ ಸಿನಿಮಾ: ಯಾರಿದು ವಿ ಶಾಂತಾರಾಮ್?
V Shantaram

Updated on: Dec 09, 2025 | 5:49 PM

ಬಾಲಿವುಡ್​ನಲ್ಲಿ (Bollywood) ಬಯೋಪಿಕ್​​ಗಳ ಟ್ರೆಂಡ್ ಮುಗಿಯುತ್ತಲೇ ಇಲ್ಲ. ಒಂದರ ಹಿಂದೊಂದು ಬಯೋಪಿಕ್​​ಗಳು ಬಾಲಿವುಡ್​​ನಲ್ಲಿ ಬರುತ್ತಲೇ ಇವೆ. ಅವುಗಳಲ್ಲಿ ಹಲವು ಗಮನ ಸೆಳೆಯುತ್ತಿವೆ. ಕ್ರೀಡಾಪಟುಗಳು, ರಾಜಕಾರಣಿ, ಸೈನ್ಯಾಧಿಕಾರಿಗಳು, ಕ್ರಿಮಿನಲ್​​ಗಳು, ಸರ್ಕಾರಿ ಅಧಿಕಾರಿಗಳು, ಪೊಲೀಸರು, ಸಿನಿಮಾ ಕರ್ಮಿಗಳು ಹೀಗೆ ಹಲವು ವಿಭಾಗಗಳಲ್ಲಿ ಹೆಸರು ಮಾಡಿದವರ ಬಗ್ಗೆ ಸಿನಿಮಾಗಳನ್ನು ಮಾಡಲಾಗಿದೆ. ಇದೀಗ ಮತ್ತೊಮ್ಮೆ ಚಿತ್ರರಂಗದ ದಿಗ್ಗಜರೊಬ್ಬರ ಜೀವನ ಆಧರಿಸಿದ ಸಿನಿಮಾ ಮಾಡಲು ಬಾಲಿವುಡ್ ಮುಂದಾಗಿದೆ.

ಮರಾಠಿ ಮತ್ತು ಹಿಂದಿ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿರುವ ವಿ ಶಾಂತಾರಾಮ್ ಅವರ ಜೀವನವನ್ನು ಸಿನಿಮಾ ಮಾಡಲು ವೇದಿಕೆ ಸಜ್ಜುಗೊಳಿಸಲಾಗಿದೆ. ವಿ ಶಾಂತಾರಾಮ್ ಅವರ ಪಾತ್ರದಲ್ಲಿ ಯುವನಟ ಸಿದ್ಧಾಂತ್ ಚತುರ್ವೇಧಿ ನಟಿಸುತ್ತಿದ್ದಾರೆ. ಸಿನಿಮಾದ ನಾಯಕಿಯಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ನಟಿಸಲಿದ್ದಾರೆ. ಸಿನಿಮಾಕ್ಕೆ ‘ವಿ ಶಾಂತಾರಾಮ್’ ಎಂದೇ ಹೆಸರಿಡಲಾಗಿದೆ. ತಮನ್ನಾ ಭಾಟಿಯಾರ ಪೋಸ್ಟರ್ ಅನ್ನು ಇಂದಷ್ಟೆ (ಡಿಸೆಂಬರ್ 09) ಬಿಡುಗಡೆ ಮಾಡಲಾಗಿದೆ. ತಮನ್ನಾ ಭಾಟಿಯಾ ಅವರು ‘ವಿ ಶಾಂತಾರಾಮ್’ ಸಿನಿಮಾನಲ್ಲಿ ಹಿರಿಯ ನಟಿ ಜಯಶ್ರೀ ಅವರ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:ನಟಿ ತಮನ್ನಾ ಭಾಟಿಯಾ ಒಟ್ಟು ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೆ?

ವಿ ಶಾಂತಾರಾಮ್ ಅವರು ಭಾರತೀಯ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ಕೊಟ್ಟ ಸಿನಿಮಾ ಕರ್ಮಿ. ವಿಶ್ವ ಚಿತ್ರರಂಗದ ದಂತಕತೆ ಚಾರ್ಲಿ ಚಾಪ್ಲಿನ್ ಸಹ ಮೆಚ್ಚಿಕೊಂಡಿದ್ದ ಸಿನಿಮಾ ಕರ್ಮಿ ವಿ ಶಾಂತಾರಾಮ್. 1927 ರಲ್ಲಿ ಮೊದಲ ಸಿನಿಮಾ ನಿರ್ದೇಶಿಸಿದ ಶಾಂತಾರಾಮ್ ಅವರು, ಸಿನಿಮಾಗಳ ಮೂಲಕ ಸಾಮಾಜಿಕ ವಿಷಯಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಿದವರು. ಪುರಾಣ ಕತೆಗಳನ್ನೇ ಹೆಚ್ಚಾಗಿ ಸಿನಿಮಾ ಮಾಡುತ್ತಿದ್ದ ಸಮಯದಲ್ಲಿ ಶಾಂತಾರಾಮ್ ಅವರು ಸಾಮಾಜಿಕ ವಿಷಯಗಳನ್ನು ಸಿನಿಮಾ ಮಾಡುತ್ತಿದ್ದರು. ಸುಮಾರು ಏಳು ದಶಕಗಳ ಕಾಲ ಅವರು ಸಿನಿಮಾ ನಿರ್ದೇಶಕನಾಗಿ ಕೆಲಸ ಮಾಡಿ, ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದು ಮಾತ್ರವಲ್ಲದೆ, ಸಿನಿಮಾಗಳ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣರಾದರು.

ವಿ ಶಾಂತಾರಾಮ್ ಅವರು ನಿರ್ದೇಶಕನಾಗಿ, ನಟನಾಗಿ, ನಿರ್ಮಾಪಕನಾಗಿ, ಸಂಗೀತ ನಿರ್ದೇಶಕನಾಗಿ, ಸಿನಿಮಾಟೊಗ್ರಾಫರ್ ಆಗಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಅವರ ಸಿನಿಮಾಗಳು 1950ರ ದಶಕದಲ್ಲಿ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜವಾಗಿವೆ. ಕೆಲವು ಬಾರಿ ರಾಷ್ಟ್ರಪ್ರತಿಗಳ ಸುವರ್ಣ ಪದಕ ಗಳಿಸಿವೆ. ಶಾಂತಾರಾಮ್ ಅವರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಪದ್ಮವಿಭೂಷಣ ಗೌರವ ನೀಡಿದೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಸಹ ಶಾಂತಾರಾಮ್ ಅವರಿಗೆ ಸಂದಿದೆ. ಇದೀಗ ಈ ದಿಗ್ಗಜನ ಕತೆ ಸಿನಿಮಾ ಆಗಿ ಮೂಡಿ ಬರಲಿದೆ.

‘ವಿ ಶಾಂತಾರಾಮ್’ ಸಿನಿಮಾವನ್ನು ಅಭಿಜಿತ್ ಶಿರಿಶ್ ದೇಶಪಾಂಡೆ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ‘ವಿ ಶಾಂತಾರಾಮ್: ದಿ ರೆಬಲ್ ಆಫ್ ಇಂಡಿಯನ್ ಸಿನಿಮಾ’ ಎಂದು ಹೆಸರಿಡಲಾಗಿದೆ. ಸಿನಿಮಾ ಮೂಲಕ ಅವರು ಮಾಡಿದ ಸಾಮಾಜಿಕ ಕ್ರಾಂತಿಯ ಕತೆಯನ್ನು ಈ ಸಿನಿಮಾ ಹೇಳಲಿದೆ. ಸಿನಿಮಾದ ನಾಯಕಿಯಾಗಿ ತಮನ್ನಾ ಭಟ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:47 pm, Tue, 9 December 25