Review: ‘ನಗುವಿನ ಹೂಗಳ ಮೇಲೆ’ ಪ್ರೀತಿ ಹಾಗೂ ತಾಳ್ಮೆಯ ಪಾಠ; ಇದು ಪ್ರೇಮಿಗಳ ದಿನದ ಸ್ಪೆಷಲ್​

ಎಲ್ಲರ ಪ್ರೀತಿ ಒಂದೇ ರೀತಿಯಾಗಿ ಇರಬೇಕು ಎಂದೇನಿಲ್ಲ. ಈಗಿನ ಆನ್​ಲೈನ್​ ಕಾಲದಲ್ಲೂ ಪರಸ್ಪರ ದೂರ ಇದ್ದುಕೊಂಡು, ವರ್ಷಕ್ಕೆ ಒಮ್ಮೆ ಮಾತ್ರ ಭೇಟಿಯಾಗಿ ಮಾತನಾಡುವ ಪ್ರೇಮಿಗಳ ಲವ್​ ಸ್ಟೋರಿಯನ್ನು ‘ನಗುವಿನ ಹೂಗಳ ಮೇಲೆ’ ಸಿನಿಮಾದಲ್ಲಿ ತೋರಿಸಲಾಗಿದೆ. ಅಭಿದಾಸ್​ ಹಾಗೂ ಶರಣ್ಯ ಶೆಟ್ಟಿ ನಟನೆಯ ಈ ಚಿತ್ರಕ್ಕೆ ವೆಂಕಟ್​ ಭಾರದ್ವಜ್​ ನಿರ್ದೇಶನ ಮಾಡಿದ್ದಾರೆ.

Review: ‘ನಗುವಿನ ಹೂಗಳ ಮೇಲೆ’ ಪ್ರೀತಿ ಹಾಗೂ ತಾಳ್ಮೆಯ ಪಾಠ; ಇದು ಪ್ರೇಮಿಗಳ ದಿನದ ಸ್ಪೆಷಲ್​
ಶರಣ್ಯ ಶೆಟ್ಟಿ, ಅಭಿದಾಸ್​

Updated on: Feb 10, 2024 | 3:28 PM

ಸಿನಿಮಾ: ನಗುವಿನ ಹೂಗಳ ಮೇಲೆ. ನಿರ್ಮಾಣ: ಕೆ.ಕೆ. ರಾಧಾಮೋಹನ್​. ನಿರ್ದೇಶನ: ವೆಂಕಟ್​ ಭಾರದ್ವಜ್​. ಪಾತ್ರವರ್ಗ: ಅಭಿದಾಸ್​, ಶರಣ್ಯ ಶೆಟ್ಟಿ, ಗಿರೀಶ್​ ಬೆಟ್ಟಪ್ಪ, ಬೆನಕ ನಂಜಪ್ಪ, ಹರ್ಷ ಗೋಭಟ್​, ಬಲರಾಜ್​ ವಾಡಿ, ಆಶಾ ಸುಜಯ್​ ಮುಂತಾದವರು. ಸ್ಟಾರ್​: 3/5

ಫೆಬ್ರವರಿ ಬಂತೆಂದರೆ ಪ್ರೇಮಿಗಳಿಗೆ ಹಬ್ಬವೇ ಸರಿ. ಯಾಕೆಂದರೆ, ಫೆ.14ರಂದು ವ್ಯಾಲೆಂಟೈನ್ಸ್​ ಡೇ (Valentine’s Day) ಆಚರಿಸಲಾಗುತ್ತದೆ. ಎಷ್ಟೋ ಹೊಸ ಪ್ರೀತಿ ಹುಟ್ಟುವುದು ಇದೇ ದಿನ. ಆ ಒಂದು ದಿನಕ್ಕಾಗಿ ಎಷ್ಟೋ ದಿನಗಳ ತಯಾರಿ ನಡೆದಿರುತ್ತದೆ. ಈ ಸಂದರ್ಭಕ್ಕೆ ಸರಿಯಾಗಿ ಕನ್ನಡದಲ್ಲಿ ‘ನಗುವಿನ ಹೂಗಳ ಮೇಲೆ’ (Naguvina Hoogala Mele) ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದ ಕಥೆ ಕೂಡ ವ್ಯಾಲೆಂಟೈನ್ಸ್​ ಡೇ ಕುರಿತಾಗಿಯೇ ಇದೆ. ನಿರ್ದೇಶಕ ವೆಂಕಟ್​ ಭಾರದ್ವಜ್​ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಅಭಿದಾಸ್​ (Abhi Dass) ಮತ್ತು ಶರಣ್ಯ ಶೆಟ್ಟಿ ಅವರು ಜೋಡಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮಾಡರ್ನ್​ ಯುಗದಲ್ಲಿ ಓಲ್ಡ್​ ಸ್ಕೂಲ್​ ಎಂಬಂತಿರುವ ಒಂದು ಭಿನ್ನವಾದ ಪ್ರೇಮಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಅಂತಹ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ‘ನಗುವಿನ ಹೂಗಳ ಮೇಲೆ’ ಚಿತ್ರ ಖುಷಿ ನೀಡಲಿದೆ.

‘ನಗುವಿನ ಹೂಗಳ ಮೇಲೆ’ ಸಿನಿಮಾದ ಕಥೆ ತುಂಬ ಸಿಂಪಲ್​. ಒಬ್ಬ ಇಂಜಿನಿಯರ್​ ಹಾಗೂ ಒಬ್ಬಳು ಡಾಕ್ಟರ್​ ನಡುವೆ ಚಿಗುರುವ ಪ್ರೇಮಕಥೆ. ತುರ್ತು ಪರಿಸ್ಥಿತಿಯಲ್ಲಿ ರಕ್ತದಾನ ಮಾಡಲು ಬಂದ ಮನು (ಅಭಿದಾಸ್​) ಮೇಲೆ ಡಾಕ್ಟರ್​ ತನುಗೆ (ಶರಣ್ಯ) ಪ್ರೀತಿ ಚಿಗುರುತ್ತದೆ. ಆ ಬಳಿಕ ಅವರ ಬದುಕು ಮಾಮೂಲಿ ಪ್ರೇಮಿಗಳಂತೆ ಇರುವುದಿಲ್ಲ. ಉನ್ನತ ಶಿಕ್ಷಣದ ಮೇಲೆ ಗಮನ ಹರಿಸಬೇಕು ಎಂಬ ಕಾರಣಕ್ಕೆ ತನು ಒಂದು ನಿರ್ಧಾರ ತೆಗೆದುಕೊಳ್ಳುತ್ತಾಳೆ. ಶಿಕ್ಷಣ ಮುಗಿಯುವ ತನಕ ವರ್ಷಕ್ಕೆ ಒಂದು ದಿನ ಮಾತ್ರ ತಾವಿಬ್ಬರು ಭೇಟಿ ಆಗಬೇಕು. ಅದು ವ್ಯಾಲೆಂಟೈನ್ಸ್​ ದಿನ ಮಾತ್ರ. ಆ ಷರತ್ತಿಗೆ ಮನು ಒಪ್ಪಿಕೊಳ್ಳುತ್ತಾನೆ. ಅದರಂತೆ ಎರಡು ವರ್ಷ ಜರುಗುತ್ತದೆ. ಆ ಬಳಿಕ ಬರುವ ವ್ಯಾಲೆಂಟೈನ್ಸ್​ ದಿನದಂದು ಭೇಟಿಯಾಗಲು ಮನು ಬರುವುದೇ ಇಲ್ಲ! ಹಾಗಾದರೆ ಅವನ ಬದುಕಿನಲ್ಲಿ ಏನಾಯ್ತು? ಇಬ್ಬರ ನಡುವೆ ಅಂತರ ಮೂಡಲು ಕಾರಣವಾದ ಅಂಶಗಳು ಏನು? ಅಂತಿಮವಾಗಿ ತನು-ಮನು ಮದುವೆ ಆಗ್ತಾರಾ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಇದನ್ನೂ ಓದಿ:  Captain Miller Review: ಮದ್ದು-ಗುಂಡುಗಳ ಸದ್ದಿನಲ್ಲಿ ಮಸುಕಾಯ್ತಾ ‘ಕ್ಯಾಪ್ಟನ್​ ಮಿಲ್ಲರ್​’ ಆಶಯ?

ಈಗಿನದ್ದು ಆನ್​ಲೈನ್​ ಯುಗ. ಈ ಕಾಲದ ಪ್ರೇಮಿಗಳು ಪ್ರೀತಿಸುವ ವಿಧಾನವೆಲ್ಲ ಹೈಕೆಟ್​ ಆಗಿದೆ. ಅದರ ನಡುವೆಯೂ ಒಂದು ಬೇರೆಯದೇ ರೀತಿಯ ಲವ್​​ಸ್ಟೋರಿಯನ್ನು ‘ನಗುವಿನ ಹೂಗಳ ಮೇಲೆ’ ಸಿನಿಮಾದಲ್ಲಿ ತೋರಿಸಲಾಗಿದೆ. ಇದು ಬರೀ ಪ್ರೀತಿಯ ಕಥೆಯಲ್ಲ. ತಾಳ್ಮೆಯ ಕಥೆ ಕೂಡ ಹೌದು. ಪ್ರೇಮಿಯನ್ನು ನೋಡಲು ಒಂದು ವರ್ಷ ಕಾಯುವ ಪರಿಶುದ್ಧ ಹೃದಯದ ಕಥೆ. ಅದೇ ರೀತಿ, ಇನ್ನುಳಿದ ಪಾತ್ರಗಳ ಮೂಲಕ ಸಹಬಾಳ್ವೆಯ ಕಥೆಯನ್ನೂ ವಿವರಿಸಲಾಗಿದೆ. ಒಟ್ಟಿನಲ್ಲಿ ನಿಜವಾದ ಪ್ರೀತಿ ಏನು ಎಂಬುದನ್ನು ಬಹಳ ಸಮಾಧಾನದಿಂದ ತಿಳಿಸುವ ಕೆಲಸ ಈ ಚಿತ್ರದಲ್ಲಾಗಿದೆ. ವೃತ್ತಿಬದುಕಿನಲ್ಲಿ ಯಶಸ್ಸು ಸಿಗಬೇಕಿದ್ದರೂ ತಾಳ್ಮೆ ತುಂಬ ಅಗತ್ಯ ಎಂಬ ಸಂದೇಶ ಕೂಡ ‘ನಗುವಿನ ಹೂಗಳ ಮೇಲೆ’ ಸಿನಿಮಾದಲ್ಲಿದೆ.

ಈ ಸಿನಿಮಾದ ಅವಧಿ 2 ಗಂಟೆ 6 ನಿಮಿಷ ಮಾತ್ರ. ಅಷ್ಟರಲ್ಲೇ ಸಾಧ್ಯವಾದಷ್ಟನ್ನು ಹೇಳಿ ಮುಗಿಸುವ ಪ್ರಯತ್ನ ಮಾಡಲಾಗಿದೆ. ಚಿಕ್ಕದಾಗಿ ಚೊಕ್ಕದಾಗಿ ಹಾಸ್ಯ ಮತ್ತು ಆ್ಯಕ್ಷನ್​ ಬೆರೆಸಲಾಗಿದೆ. ಉಳಿದಂತೆ ಪೂರ್ತಿ ಫೋಕಸ್​ ಇರುವುದು ತನು-ಮನು ನಡುವಿನ ಪ್ರೇಮದ ಬಗ್ಗೆ ಮಾತ್ರ. ಯಾವುದೇ ಬಗೆಯ ಪ್ರೀತಿಯಲ್ಲಿ ಕೆಲವೊಮ್ಮೆ ಅಡೆತಡೆ ಉಂಟಾಗುತ್ತವೆ. ಆಗ ಅನುಮಾನಕ್ಕೆ ಎಡೆಮಾಡಿಕೊಡಬಾರದು ಎನ್ನುವ ಮೆಸೇಜ್​ ಸಹ ಈ ಚಿತ್ರದಲ್ಲಿದೆ.

ಇದನ್ನೂ ಓದಿ: Review: ಸರಳವಾದರೂ ತುಂಬ ವಿರಳವಾದ ಪ್ರೇಮಕಥೆಯಾಗಿ ಮೆಚ್ಚುಗೆ ಪಡೆಯುವ ಸುನಿ ಸಿನಿಮಾ

ಅಭಿದಾಸ್​ ಅವರು ‘ನಗುವಿನ ಹೂಗಳ ಮೇಲೆ’ ಸಿನಿಮಾದಲ್ಲಿ ಪಾಸಿಟಿವ್​ ಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರೀತಿಗಾಗಿ ಎಲ್ಲ ಷರತ್ತುಗಳನ್ನು ಒಪ್ಪಿಕೊಂಡು, ತಾಳ್ಮೆಯಿಂದ ಕಾಯುವ ಆ ಪಾತ್ರ ತುಂಬ ವಿರಳವಾದದ್ದು. ನಟಿ ಶರಣ್ಯ ಅವರು ವೈದ್ಯೆಯಾಗಿ ನಟಿಸಿದ್ದಾರೆ. ಹಾಡುಗಳಲ್ಲಿ ತನು-ಮನು ಜೋಡಿಯ ಕೆಮಿಸ್ಟ್ರೀ ಚೆನ್ನಾಗಿ ಮೂಡಿಬಂದಿದೆ. ಈ ಸಿನಿಮಾಗೆ ಲವ್​ ಪ್ರಾಣ್​ ಮೆಹ್ತಾ ಅವರು ಸಂಗೀತ ನೀಡಿದ್ದಾರೆ. ಪ್ರಮೋದ್​ ಭಾರತೀಯ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಅಭಿಷೇಕ್​ ಅಯ್ಯಂಗಾರ್​ ಸಂಭಾಷಣೆ ಬರೆದಿದ್ದಾರೆ. ‘ನಗುವಿನ ಹೂಗಳ ಮೇಲೆ’ ಸಿನಿಮಾ ನಿಧಾನಗತಿಯಲ್ಲಿ ಸಾಗುತ್ತದೆ. ಕಥಾನಾಯಕನ ರೀತಿಯೇ ಪ್ರೇಕ್ಷಕರಿಗೂ ತಾಳ್ಮೆ ಅಗತ್ಯ. ಕೆಲವೇ ಪಾತ್ರಗಳ ಸುತ್ತ ಕಥೆ ಸುತ್ತುವ ಕಾರಣದಿಂದ ಸ್ವಲ್ಪ ಏಕತಾನತೆ ಕಾಡುತ್ತದೆ. ಹೆಚ್ಚೇನೂ ಟ್ವಿಸ್ಟ್​ಗಳನ್ನು ಇಲ್ಲಿ ನಿರೀಕ್ಷಿಸುವಂತಿಲ್ಲ. ಇದರ ನಡುವೆಯೂ ಒಂದು ಚಂದದ ಪ್ರಯತ್ನವಾಗಿ ‘ನಗುವಿನ ಹೂಗಳ ಮೇಲೆ’ ಸಿನಿಮಾ ಮೂಡಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us