Adipurush Review: ಗ್ರಾಫಿಕ್ಸ್​ ನಂಬಿಕೊಂಡು ಯುದ್ಧ ಮಾಡಿದ ರಾಮ-ರಾವಣ; ಇದು ಓಂ ರಾವತ್​ ರಾಮಾಯಣ

Adipurush Movie Review: ರಾಮಾಯಣದ ಅನೇಕ ಸನ್ನಿವೇಶಗಳನ್ನು ‘ಆದಿಪುರುಷ್​’ ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ ಎಲ್ಲ ದೃಶ್ಯವನ್ನು ಮೇಲ್ಮಟ್ಟದಲ್ಲೇ ತೋರಿಸಲಾಗಿದೆಯೇ ಹೊರತು ಯಾವುದರಲ್ಲೂ ಆಳವಾದ ವಿವರಣೆಗಳು ದಕ್ಕುವುದಿಲ್ಲ.

Adipurush Review: ಗ್ರಾಫಿಕ್ಸ್​ ನಂಬಿಕೊಂಡು ಯುದ್ಧ ಮಾಡಿದ ರಾಮ-ರಾವಣ; ಇದು ಓಂ ರಾವತ್​ ರಾಮಾಯಣ
ಪ್ರಭಾಸ್​ , ಸೈಫ್​ ಅಲಿ ಖಾನ್​
Follow us
| Updated By: ಮಂಜುನಾಥ ಸಿ.

Updated on:Jun 16, 2023 | 6:16 PM

ಸಿನಿಮಾ: ಆದಿಪುರುಷ್​

ನಿರ್ಮಾಣ: ಟೀ-ಸಿರೀಸ್​, ರೆಟ್ರೋಫೈಲ್ಸ್​

ನಿರ್ದೇಶನ: ಓಂ ರಾವತ್​

ಪಾತ್ರವರ್ಗ: ಪ್ರಭಾಸ್​, ಕೃತಿ ಸನೋನ್​, ಸೈಫ್​ ಅಲಿ ಖಾನ್​, ದೇವದತ್ತ ನಾಗೆ, ಸನ್ನಿ ಸಿಂಗ್​ ಮುಂತಾದವರು.

ಸ್ಟಾರ್​: 3/5

ನಿರ್ದೇಶಕ ಓಂ ರಾವತ್​ (Om Raut) ಅವರಿಗೆ ‘ತಾನಾಜಿ’ ಸಿನಿಮಾದಿಂದ ಭಾರಿ ಜನಪ್ರಿಯತೆ ಸಿಕ್ಕಿತ್ತು. ಬಿಗ್​ ಬಜೆಟ್​ನಲ್ಲಿ ಸಿನಿಮಾ ಮಾಡುವುದು ಹೇಗೆ ಎಂಬುದು ಅವರಿಗೆ ಕರಗತ ಆಗಿತ್ತು. ಅವರ ಮೇಲೆ ನಂಬಿಕೆ ಇಟ್ಟು ‘ಆದಿಪುರುಷ್​’ (Adipurush) ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ನೀಡಲಾಯಿತು. ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ (Prabhas) ಅವರು ಈ ಚಿತ್ರಕ್ಕೆ ಹೀರೋ ಎಂದಾಗ ಸಹಜವಾಗಿಯೇ ನಿರೀಕ್ಷೆ ಜೋರಾಗಿತ್ತು. ಹಾಗಾದರೆ ಆ ನಿರೀಕ್ಷೆಯ ಮಟ್ಟವನ್ನು ತಲುಪಲು ‘ಆದಿಪುರುಷ್​’ ಚಿತ್ರಕ್ಕೆ ಸಾಧ್ಯವಾಗಿದೆಯೇ? ರಾಮಾಯಣದ ಕಥೆಯನ್ನು ಪ್ರೇಕ್ಷಕರಿಗೆ ದಾಟಿಸಿರುವ ರೀತಿ ಹೇಗಿದೆ? ಪೌರಾಣಿಕ ಪಾತ್ರಗಳನ್ನು ಕಲಾವಿದರು ಹೇಗೆ ನಿಭಾಯಿಸಿದ್ದಾರೆ. ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಈ ವಿಮರ್ಶೆ ಓದಿ..

ರಾಮಾಯಣದ ಕಥೆ ಇಟ್ಟುಕೊಂಡು ಸಿನಿಮಾ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಎಲ್ಲರಿಗೂ ಇದರ ಕಥೆ ಗೊತ್ತಿದೆ. ಗೊತ್ತಿರುವ ಕಥೆಯನ್ನೇ ಮತ್ತೆ ಹೇಳಲು ಹೊರಟಾಗ ಹೊಸತನದ ಅವಕಶ್ಯಕತೆ ಇರುತ್ತದೆ. ಇನ್ನು, ಈಗಾಗಲೇ ಬಂದಿರುವ ರಾಮಾಯಣ ಆಧಾರಿತ ಸೀರಿಯಲ್​ ಮತ್ತು ಸಿನಿಮಾಗಳ ಛಾಯೆಯನ್ನು ಮೀರಿ ಬೇರೆ ಏನನ್ನಾದರೂ ಕಟ್ಟಿಕೊಡಬೇಕಾಗುತ್ತದೆ. ಅದನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ‘ಆದಿಪುರುಷ್​’ ಸಿನಿಮಾ ಮಾಡಲಾಗಿದೆ. ಆದರೆ ಕೇವಲ ಗ್ರಾಫಿಕ್ಸ್​ ಮತ್ತು ತಂತ್ರಜ್ಞಾನದಲ್ಲಿ ಮಾತ್ರವೇ ಇಲ್ಲಿ ಹೊಸತನವನ್ನು ಪ್ರಯತ್ನಿಸಲಾಗಿದೆ. ಪಾತ್ರಗಳ ಗೆಟಪ್​ಗಳನ್ನು ಬದಲಾಯಿಸುವಲ್ಲಿ ಅಲ್ಪ ಸ್ವಲ್ಪ ಪ್ರಯೋಗ ಮಾಡಲಾಗಿದೆ. ಎಲ್ಲ ವರ್ಗದ ಪ್ರೇಕ್ಷಕರು ಇದನ್ನು ಇಷ್ಟಪಡುವುದು ಅನುಮಾನ. ಉಳಿದಂತೆ ಕಥೆಯನ್ನು ನಿರೂಪಿಸುವ ಶೈಲಿಯಲ್ಲಿ ಯಾವುದೇ ಹೊಸತನ ಕಾಣಿಸದು.

ಇದನ್ನೂ ಓದಿ: Sara Ali Khan: ಅಪ್ಪನ ಸಿನಿಮಾ ಬಿಡುಗಡೆಯಿಂದ ಮಗಳ ಚಿತ್ರಕ್ಕೆ ಹೊಡೆತ; ‘ಆದಿಪುರುಷ್​’ ವರ್ಸಸ್​ ‘ಜರಾ ಹಟ್ಕೆ ಜರಾ ಬಚ್ಕೆ’

ಶ್ರೀರಾಮನು ವನವಾಸಕ್ಕೆ ಹೊರಡುವ ಸನ್ನಿವೇಶದಿಂದ ಶುರುವಾಗುವ ‘ಆದಿಪುರುಷ್​’ ಚಿತ್ರದ ಕಥೆ, ರಾವಣನ ಸಂಹಾರದಲ್ಲಿ ಅಂತ್ಯವಾಗುತ್ತದೆ. ಇದರ ನಡುವೆ ಬರುವ ಎಲ್ಲ ಪ್ರಮುಖ ಸನ್ನಿವೇಶಗಳನ್ನು ತೆರೆಗೆ ತರಲು ಪ್ರಯತ್ನಿಸಲಾಗಿದೆ. ಶೂರ್ಪನಕಿಯ ಮೂಗನ್ನು ಲಕ್ಷ್ಮಣ ಕೊಯ್ದಿದ್ದು, ಸೀತೆಯನ್ನು ರಾವಣ ಅಪಹರಿಸಿದ್ದು, ರಾಮನನ್ನು ಶಬರಿ ಭೇಟಿ ಆಗಿದ್ದು, ವಾಲಿ-ಸುಗ್ರೀವರ ಯುದ್ಧ, ರಾಮಸೇತು ನಿರ್ಮಾಣ, ಆಂಜನೇಯ ಲಂಕಾ ದಹನ ಮಾಡಿದ್ದು, ಯುದ್ಧದಲ್ಲಿ ಲಕ್ಷ್ಮಣ ಗಾಯಗೊಂಡಿದ್ದು, ಸಂಜೀವಿನಿಗಾಗಿ ಹನುಮಂತನು ಪರ್ವತವನ್ನೇ ಹೊತ್ತು ತಂದಿದ್ದು, ರಾಮ-ರಾವಣನ ನಡುವಿನ ಯುದ್ಧ ನಡೆದಿದ್ದು, ಸೀತೆಯನ್ನು ರಾಮ ಮರಳಿ ಪಡೆದಿದ್ದು.. ಸೇರಿದಂತೆ ಅನೇಕ ಸನ್ನಿವೇಶಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ ಎಲ್ಲ ದೃಶ್ಯವನ್ನು ಮೇಲ್ಮಟ್ಟದಲ್ಲೇ ತೋರಿಸಲಾಗಿದೆಯೇ ಹೊರತು ಯಾವುದರಲ್ಲೂ ಆಳವಾದ ವಿವರಣೆಗಳು ದಕ್ಕುವುದಿಲ್ಲ. ಹೊಸ ಹೊಳವುಗಳಿಗೂ ಜಾಗವಿಲ್ಲ.

ಇದನ್ನೂ ಓದಿ: Adipurush: 2250 ರೂಪಾಯಿಗೆ ಏರಿತು ‘ಆದಿಪುರುಷ್​’ ಸಿನಿಮಾ ಟಿಕೆಟ್​ ಬೆಲೆ; ಮುಗಿಬಿದ್ದು ಖರೀದಿಸಿದ ಪ್ರೇಕ್ಷಕರು

ರಾಮಾಯಣದ ಕಥೆಯ ಮೇಲಾಗಲಿ, ಅದರ ಆಶಯದ ಮೇಲಾಗಲಿ ನಿರ್ದೇಶಕ ಓಂ ರಾವತ್​ ಅವರು ಹೆಚ್ಚು ಗಮನ ಹರಿಸಿದಂತಿಲ್ಲ. ಅವರು ಸಂಪೂರ್ಣ ಒತ್ತು ನೀಡಿರುವುದು ಗ್ರಾಫಿಕ್ಸ್​ ಮೇಲೆ! ವಿಎಫ್​ಎಕ್ಸ್​ ಬಲನ್ನೇ ನಂಬಿಕೊಂಡು ಅವರು ಸಿನಿಮಾ ಮಾಡಿದ್ದಾರೆ. ರಾವಣನ ಸಾಮ್ರಾಜ್ಯವನ್ನು ತಮ್ಮದೇ ರೀತಿಯಲ್ಲಿ ಚಿತ್ರಿಸುವ ಪ್ರಯತ್ನವನ್ನು ಓಂ ರಾವತ್​ ಮಾಡಿದ್ದಾರೆ. ಅದಕ್ಕಾಗಿ ಅವರು ಬೃಹತ್​ ಸೆಟ್​ಗಳ ಮೊರೆ ಹೋಗಿದ್ದಾರೆ. ಲಂಕೆಯ ಮೇಲೆ ವಾನರ ಸೇನೆಯ ಜೊತೆ ರಾಮ ಯುದ್ಧ ಮಾಡಿದ ಸನ್ನಿವೇಶವನ್ನು ತೆರೆಗೆ ತರಲು ಗ್ರಾಫಿಕ್ಸ್​ ಅಲ್ಲದೇ ಬೇರೆ ಯಾವುದರಿಂದಲೂ ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಅವರು ಬಂದಂತಿದೆ. ರಣರಂಗದ ಪ್ರದೇಶ, ಅಲ್ಲಿನ ಬೆಳಕು, ರಾವಣನ ಕೋಟೆ ಇತ್ಯಾದಿ ಲೊಕೇಷನ್​ಗಳನ್ನು ನೋಡಿದರೆ ಅಕ್ಷರಶಃ ಯಾವುದೋ ವಿಡಿಯೋ ಗೇಮ್​ ನೋಡಿದಂತೆ ಭಾಸವಾಗುತ್ತದೆ. ರಾವಣನ ಸೇನೆಯಲ್ಲಿನ ರಾಕ್ಷಸರಂತೂ ಬೇರೆ ಗ್ರಹದ ಪ್ರಾಣಿಗಳ ರೀತಿ ಕಾಣಿಸಿಕೊಳ್ಳುತ್ತಾರೆ. ನಿರ್ದೇಶಕರ ಈ ಕಲ್ಪನೆ ಸಂಪೂರ್ಣ ಭಿನ್ನವೇ ಆಗಿದೆ.

ಇದನ್ನೂ ಓದಿ: Adipurush: ಕರ್ನಾಟಕವನ್ನು ಕಡೆಗಣಿಸಿದ ‘ಆದಿಪುರುಷ್​’ ತಂಡ; ಉತ್ತರ ಭಾರತದ ಮೇಲೆ ಭಾರಿ ವ್ಯಾಮೋಹ

ಸಾಕಷ್ಟು ಸನ್ನಿವೇಶಗಳನ್ನು ಒಂದೇ ಸಿನಿಮಾದಲ್ಲಿ ಹೇಳಲು ಹೊರಟಿರುವುದರಿಂದ ಯಾವುದಕ್ಕೂ ಹೆಚ್ಚಿನ ಮಹತ್ವ ನೀಡಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ. ರಾಮನನ್ನು ನೋಡುವುದೋ? ಆಂಜನೇಯಯನ್ನು ನೋಡುವುದೋ? ರಾವಣನ ಆರ್ಭಟವನ್ನು ನೋಡುವುದೋ? ಸೀತೆಯ ಕಷ್ಟದ ಪರಿಸ್ಥಿತಿಗೆ ಮರುಗುವುದೋ? ವಾಲಿ-ಸುಗ್ರೀವರ ಯುದ್ಧದ ಕಡೆ ಗಮನ ಕೊಡುವುದೋ? ಪ್ರೇಕ್ಷಕನಿಗೆ ಗೊಂದಲ ಖಚಿತ. ಅದೂ ಸಾಲದೆಂಬಂತೆ ರಾಮ-ಸೀತೆಯ ನಡುವಿನ ಒಂದು ಕಾಲ್ಪನಿಕ ಹಾಡಿಗೂ ಅವರು ಜಾಗ ನೀಡಿದ್ದಾರೆ! ಎಲ್ಲವೂ ಇದ್ದರೂ ಯಾವುದೂ ಪೂರ್ಣ ಎನಿಸದಂತಹ ಸ್ಥಿತಿ ‘ಆದಿಪುರುಷ್​’ ಚಿತ್ರದ್ದಾಗಿದೆ.

ಇದನ್ನೂ ಓದಿ: Kriti Sanon: ನಿರ್ಮಾಪಕಿ ಆಗ್ತಾರೆ ಕೃತಿ ಸನೋನ್​; ‘ಆದಿಪುರುಷ್​’ ಸುಂದರಿ ಬಗ್ಗೆ ಹೊಸ ಸುದ್ದಿ

ರಾಮನ ಪಾತ್ರದಲ್ಲಿ ಪ್ರಭಾಸ್​ ನಟಿಸಿದ್ದಾರೆ. ಅವರಿಂದ ಗಮನ ಸೆಳೆಯುವಂತಹ ಅಭಿನಯ ಸಾಧ್ಯವಾಗಿಲ್ಲ. ಸಿನಿಮಾದ ಶೀರ್ಷಿಕೆ ‘ಆದಿಪುರುಷ್​’ ಎಂದಿದ್ದರೂ ಕೂಡ ರಾಮನ ಪಾತ್ರವನ್ನು ಸಮರ್ಥವಾಗಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದಂತಿಲ್ಲ. ಸೀತೆ ಪಾತ್ರದಲ್ಲಿರುವ ಕೃತಿ ಸನೋನ್​ ಅವರಿಗೆ ಅಷ್ಟೋ ಇಷ್ಟೋ ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ ಅಷ್ಟೇ. ಆಂಜನೇಯನ ಪಾತ್ರ ಮಾಡಿರುವ ದೇವದತ್ತ ನಾಗೆ ಅವರು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುತ್ತಾರೆ. ಸೈಫ್​ ಅಲಿ ಖಾನ್​ ಅವರು ಬೇರೆಯದೇ ಮ್ಯಾನರಿಸಂ ಮೂಲಕ ರಾವಣನಾಗಿ ಆರ್ಭಟಿಸುತ್ತಾರೆ. ರಾವಣನ ಹತ್ತು ತಲೆಯ ವಿನ್ಯಾಸ ಎತ್ತೆತ್ತಲೋ ಸಾಗಿದೆ! ‘ರಾಮ್​.. ಸಿಯಾ ರಾಮ್​..’ ಹಾಗೂ ‘ಜೈಶ್ರೀರಾಮ್​..’ ಹಾಡು ಗುಂಗು ಹಿಡಿಸುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:47 am, Fri, 16 June 23

ತಾಜಾ ಸುದ್ದಿ