
ಸಿದ್ಧ ಸೂತ್ರಗಳು ಹಾಗೂ ಕಮರ್ಷಿಯಲ್ ಅಂಶಗಳನ್ನೇ ಬಂಡವಾಳವಾಗಿ ಇಟ್ಟುಕೊಂಡ ನೂರಾರು ಸಿನಿಮಾಗಳ ನಡುವೆ ಅಲ್ಲೊಂದು ಇಲ್ಲೊಂದು ವಿಶೇಷ ಪ್ರಯತ್ನಗಳು ಆಗುತ್ತವೆ. ಕನ್ನಡದ ‘ಬ್ರಹ್ಮ ಕಮಲ’ (Brahmakamala) ಸಿನಿಮಾ ಕೂಡ ಅಂಥ ಒಂದು ವಿಶೇಷ ಪ್ರಯತ್ನವಾಗಿದೆ. ತಾಯ್ತನದ ಕುರಿತ ಒಂದು ಎಮೋಷನಲ್ ಕಥೆಯನ್ನು ಈ ಸಿನಿಮಾ ತೆರೆದಿಡುತ್ತದೆ. ಆಗಸ್ಟ್ 21ರಂದು ಈ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ.
ಮಗು ಪಡೆಯಲು ಸಾಧ್ಯವಾಗದ ಹೆಣ್ಣಿನ ಮನಸ್ಸಿನಲ್ಲಿ ಎಷ್ಟೆಲ್ಲ ನೋವುಗಳು ಇರುತ್ತವೆ ಎಂಬ ಎಳೆಯನ್ನು ಇಟ್ಟುಕೊಂಡು ‘ಬ್ರಹ್ಮ ಕಮಲ’ ಸಿನಿಮಾ ಮಾಡಲಾಗಿದೆ. ನಟಿ ಅದ್ವಿತಿ ಶೆಟ್ಟಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ಜೊತೆಗೆ ಋತು ಚೈತ್ರಾ, ಲೋಕೇಂದ್ರ ಸೂರ್ಯ, ಸಿದ್ದು ಪೂರ್ಣಚಂದ್ರ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ.
ಸಿದ್ದು ಪೂರ್ಣಚಂದ್ರ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಅವರೇ ಬರೆದಿದ್ದಾರೆ. ತುಂಬು ಗರ್ಭಿಣಿಯೊಬ್ಬಳು ತನ್ನ ಸೀಮಂತಕ್ಕೆ ಎಲ್ಲರನ್ನೂ ಅಹ್ವಾನಿಸುವ ದೃಶ್ಯದೊಂದಿಗೆ ‘ಬ್ರಹ್ಮ ಕಮಲ’ ಸಿನಿಮಾ ಶುರು ಆಗುತ್ತದೆ. ಆಕೆಯ ಸೀಮಂತ ಕೂಡ ನಡೆಯುತ್ತದೆ. ಆದರೆ ನಂತರದ ದೃಶ್ಯದಲ್ಲಿ ಆಕೆ ಗರ್ಭಿಣಿಯೇ ಅಲ್ಲ ಎಂಬ ಕಹಿ ಸತ್ಯ ಎದುರಾಗುತ್ತದೆ! ಅಲ್ಲಿಂದಲೇ ಸಿನಿಮಾದ ಕುತೂಹಲ ಹೆಚ್ಚುತ್ತದೆ.
ಹಾಗಾದರೆ ತಾನು ಗರ್ಭಿಣಿ ಎಂದು ಆಕೆ ಸುಳ್ಳು ಹೇಳಿದ್ದು ಯಾಕೆ? ನಕಲಿ ಸೀಮಂತ ನಡೆದ ಬಳಿಕ ಮಗುವನ್ನು ಬೇರೆ ಮಾರ್ಗದಿಂದ ಪಡೆಯಲು ಆಕೆ ಏನೆಲ್ಲ ಕಷ್ಟಪಡುತ್ತಾಳೆ? ಅವಳು ಕಟ್ಟಿಕೊಂಡ ಸುಳ್ಳಿನ ಕೋಟೆ ಎಲ್ಲರ ಎದುರು ಒಡೆದುಹೋದಾಗ ಏನಾಗುತ್ತದೆ ಎಂಬಿತ್ಯಾದಿ ಅಂಶಗಳನ್ನು ‘ಬ್ರಹ್ಮ ಕಮಲ’ ಸಿನಿಮಾ ತೆರೆದಿಡುತ್ತಾ ಸಾಗುತ್ತದೆ. ಈ ಕಥೆಯ ಮೂಲಕ ಪ್ರೇಕ್ಷಕರಿಗೆ ಒಂದು ಮುಖ್ಯವಾದ ಸಂದೇಶವನ್ನು ನೀಡಲಾಗಿದೆ.
ಮಗುವಿಗೆ ಜನ್ಮ ನೀಡಲೇಬೇಕು ಎಂಬ ಒತ್ತಡವನ್ನು ಮಹಿಳೆಯರ ಮೇಲೆ ಈ ಸಮಾಜ ಹೇರಿದೆ. ಒಂದು ವೇಳೆ ಆಕೆಗೆ ಮಗು ಪಡೆಯಲು ಸಾಧ್ಯವಾಗದೇ ಇದ್ದರೆ ಆಕೆಯನ್ನು ಇಡೀ ಕುಟುಂಬ ದೂಷಿಸುತ್ತದೆ. ಗಂಡಿನ ಸಮಸ್ಯೆ ಇದ್ದರೂ ಹೆಣ್ಣನ್ನೇ ಹೊಣೆಯಾಗಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇಂಥ ವಿಷಯಗಳನ್ನು ಈ ಸಿನಿಮಾದಲ್ಲಿ ನಿರ್ದೇಶಕರು ತೋರಿಸಿದ್ದಾರೆ.
ಇದನ್ನೂ ಓದಿ: ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ ಆಯ್ಕೆ ಆದ ಅದ್ವಿತಿ ಶೆಟ್ಟಿ ನಟನೆಯ ‘ಬ್ರಹ್ಮ ಕಮಲ’ ಸಿನಿಮಾ
ಅಂದಹಾಗೆ, ಈ ಸಿನಿಮಾದಲ್ಲಿ ಇರುವುದು ಒಂದು ಎಮೋಷನಲ್ ಕಥೆ ಮಾತ್ರವಲ್ಲ. ಅದರ ಜೊತೆಗೆ ಒಂದು ಸಸ್ಪೆನ್ಸ್ ಸಹ ಇದೆ. ಕ್ಲೈಮ್ಯಾಕ್ಸ್ ತಲುಪುವ ತನಕ ಮುಂದೇನಾಗುತ್ತದೆ ಎಂಬ ಕೌತುಕವನ್ನು ಕಾಯ್ದುಕೊಳ್ಳುವಲ್ಲಿ ಈ ಸಿನಿಮಾ ಯಶಸ್ವಿ ಆಗಿದೆ. 1 ಗಂಟೆ 47 ನಿಮಿಷ ಅವಧಿಯ ಒಳಗೆ ಎಲ್ಲವನ್ನೂ ಚುಟುಕಾಗಿ ತೋರಿಸಲಾಗಿದೆ. ಅನಗತ್ಯ ವಿಷಯಗಳಿಗೆ ಕತ್ತರಿ ಹಾಕಿ ಒಂದು ಅಚ್ಚುಕಟ್ಟಾದ ಸಿನಿಮಾವನ್ನು ನೀಡಲಾಗಿದೆ.
ಚಿತ್ರದ ಒಟ್ಟಾರೆ ಮೇಕಿಂಗ್ ಸಾಧಾರಣ ಎಂಬಂತಿದೆ. ಆದ್ದರಿಂದ ಶುರುವಿನ ಕೆಲವು ದೃಶ್ಯಗಳು ಕಿರುತೆರೆ ಸೀರಿಯಲ್ ರೀತಿಯ ಫೀಲ್ ನೀಡುತ್ತವೆ. ಇಂಥ ಕೆಲವು ಮೈನಸ್ ಅಂಶಗಳನ್ನು ಬದಿಗಿಟ್ಟರೆ ‘ಬ್ರಹ್ಮ ಕಮಲ’ ಸರಳ-ಸುಂದರ ಚಿತ್ರವಾಗಿ ಇಷ್ಟ ಆಗುತ್ತದೆ. ನಟಿ ಅದ್ವಿತಿ ಶೆಟ್ಟಿ ಅವರಿಗೆ ಈ ಸಿನಿಮಾ ವಿಶೇಷವಾಗಿದೆ. ಕಥೆಯ ಕೇಂದ್ರಬಿಂದು ಅವರೇ ಆಗಿದ್ದಾರೆ. ಋತು ಚೈತ್ರಾ, ಲೋಕೇಂದ್ರ ಸೂರ್ಯ ಅವರು ನಿರ್ವಹಿಸಿರುವ ಪಾತ್ರಗಳು ಕೂಡ ಗಮನ ಸೆಳೆಯುತ್ತವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.