Manada Kadalu Review: ಮತ್ತದೇ ಶೈಲಿಯಲ್ಲಿ ಮೂಡಿಬಂದ ಯೋಗರಾಜ್ ಭಟ್ ಸಿನಿಮಾ ‘ಮನದ ಕಡಲು’
‘ಮನದ ಕಡಲು’ ಚಿತ್ರದಲ್ಲಿ ಸುಮುಖ, ಅಂಜಲಿ ಅನೀಶ್, ರಾಶಿಕಾ ಶೆಟ್ಟಿ, ರಂಗಾಯಣ ರಘು ಮುಂತಾದವರು ಅಭಿನಯಿಸಿದ್ದಾರೆ. ಹೊಸಬರ ಜೊತೆ ನಿರ್ದೇಶಕ ಯೋಗರಾಜ್ ಭಟ್ ಕೈ ಜೋಡಿಸಿದ್ದಾರೆ. ಆದರೆ ತಮ್ಮ ಹಳೇ ಫಾರ್ಮ್ಯಾಟ್ ಬಿಟ್ಟು ಅವರು ಹೊರಬಂದಿಲ್ಲ. ‘ಮನದ ಕಡಲು’ ಸಿನಿಮಾದ ವಿಮರ್ಶೆ ಇಲ್ಲಿದೆ..

ಸಿನಿಮಾ: ಮನದ ಕಡಲು. ನಿರ್ಮಾಣ: ಇ. ಕೃಷ್ಣಪ್ಪ. ನಿರ್ದೇಶನ: ಯೋಗರಾಜ್ ಭಟ್. ಪಾತ್ರವರ್ಗ: ಸುಮುಖ, ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ರಂಗಾಯಣ ರಘು, ದತ್ತಣ್ಣ ಮುಂತಾದವರು. ಸ್ಟಾರ್: 3/5
‘ಮುಂಗಾರುಮಳೆ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದಿತ್ತು. ಆ ಸಿನಿಮಾಗೆ ಬಂಡವಾಳ ಹೂಡಿದ್ದ ಇ. ಕೃಷ್ಣಪ್ಪ ಹಾಗೂ ನಿರ್ದೇಶನ ಮಾಡಿದ್ದ ಯೋಗರಾಜ್ ಭಟ್ (Yogaraj Bhat) ಅವರು ಮತ್ತೆ ಜೊತೆಯಾಗಿ ‘ಮನದ ಕಡಲು’ (Manada Kadalu) ಸಿನಿಮಾ ಮಾಡುತ್ತಾರೆ ಎಂದಾಗ ಸಹಜವಾಗಿಯೇ ಕುತೂಹಲ ಮೂಡಿತ್ತು. ಈ ಚಿತ್ರದ ಮೂಲಕ ಮತ್ತೆ ಯೋಗರಾಜ್ ಭಟ್ ಮತ್ತು ಇ. ಕೃಷ್ಣಪ್ಪ ಅವರು ಹೊಸಬರಿಗೆ ಅವಕಾಶ ನೀಡಿದ್ದಾರೆ. ಮಾರ್ಚ್ 28ರಂದು ಬಿಡುಗಡೆ ಆಗಿರುವ ‘ಮನದ ಕಡಲು’ ಚಿತ್ರ ಹೇಗಿದೆ ಎಂಬುದು ತಿಳಿಯಲು ಈ ವಿಮರ್ಶೆ (Manada Kadalu Review) ಓದಿ..
ಎಷ್ಟು ಸಾಧ್ಯವೋ ಅಷ್ಟು ಡಿಫರೆಂಟ್ ಆದ ಪಾತ್ರಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದು ಯೋಗರಾಜ್ ಭಟ್ ಅವರ ಸ್ಪೆಷಾಲಿಟಿ. ‘ಮುಂಗಾರುಮಳೆ’, ‘ಗಾಳಿಪಟ’ ಕಾಲದಿಂದಲೂ ಅದು ನಡೆದುಕೊಂಡು ಬಂದಿದೆ. ‘ಮನದ ಕಡಲು’ ಚಿತ್ರದಲ್ಲೂ ಅದು ಮುಂದುವರಿದಿದೆ. ಮೂರು ವರ್ಷ ಎಂಬಿಬಿಎಸ್ ಓದಿ, ಕೊನೇ ವರ್ಷದಲ್ಲಿ ಏಕಾಏಕಿ ಕಾಲೇಜು ಬಿಟ್ಟು ಊರು ಸುತ್ತಲು ಹೋಗುವ ಸುಮುಖ ಎಂಬ ಯುವಕನ ಪಾತ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಿದ್ದಾರೆ. ಕಥಾನಾಯಕನ ಪಾತ್ರ ಮಾತ್ರವಲ್ಲದೇ ನಾಯಕಿಯರ ಪಾತ್ರಗಳು ಕೂಡ ಈ ಚಿತ್ರದಲ್ಲಿ ಭಿನ್ನವಾಗಿಯೇ ಇವೆ. ಆದರೆ ಇಂಥ ಪಾತ್ರಗಳು ಪ್ರೇಕ್ಷಕನಿಗೆ ಎಷ್ಟರಮಟ್ಟಿಗೆ ಕನೆಕ್ಟ್ ಆಗುತ್ತವೆ ಎಂಬುದು ಸದ್ಯದ ಪ್ರಶ್ನೆ.
‘ಮನದ ಕಡಲು’ ಸಿನಿಮಾದ ಅವಧಿ 2 ಗಂಟೆ 34 ನಿಮಿಷ ಇದೆ. ಹೊಸ ಲೊಕೇಷನ್ಗಳನ್ನು ತೋರಿಸಿ ಪ್ರೇಕ್ಷಕರನ್ನು ರಂಜಿಸುವ ತಂತ್ರವನ್ನು ಯೋಗರಾಜ್ ಭಟ್ ಅವರು ಈ ಬಾರಿಯೂ ಮುಂದುವರಿಸಿದ್ದಾರೆ. ದೋಣಿದುರ್ಗ ಎಂಬ ಊರಿನಲ್ಲಿ ಈ ಸಿನಿಮಾದ ಬಹುಪಾಲು ಕಥೆ ಸಾಗುತ್ತದೆ. ರಂಗಾಯಣ ರಘು ಅವರು ಆದಿವಾಸಿ ವ್ಯಕ್ತಿಯಾಗಿ ಕಾಣಿಸಿಕೊಂಡು, ಪ್ರೇಕ್ಷಕರಿಗೆ ಅರ್ಥವಾಗದ ಭಾಷೆಯಲ್ಲಿ ಮಾತನಾಡುತ್ತ ಕ್ಲೈಮ್ಯಾಕ್ಸ್ ತನಕವೂ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಡಿಫರೆಂಟ್ ಆಗಿದ್ದರೂ ಕೂಡ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವುದು ಅನುಮಾನ. ರಂಗಾಯಣ ರಘು ಅವರಂತಹ ಪ್ರತಿಭಾವಂತ ಕಲಾವಿದನಿಂದ ಹೆಚ್ಚಿನಿದನ್ನು ಬಯಸುವ ಪ್ರೇಕ್ಷಕರಿಗೆ ಇಲ್ಲಿ ಕೊಂಚ ನಿರಾಸೆ ಆಗಬಹುದು.
ಈ ಸಿನಿಮಾದಲ್ಲಿ ಯುವ ಹೃದಯಗಳ ತ್ರಿಕೋನ ಪ್ರೇಮಕಥೆ ಇದೆ. ಆದರೆ ಕಾಡುವ ಗುಣ ಮಿಸ್ ಆಗಿದೆ. ಸಿನಿಮಾ ಮುಗಿಯುವ ಹೊತ್ತಿಗೆ ಪ್ರೇಕ್ಷಕ ಬಯಸುವ ಒಂದು ಫೀಲ್ ಇಲ್ಲದಂತಾಗಿದೆ. ಎಲ್ಲವನ್ನೂ ಬಿಟ್ಟು ಇನ್ನೇನನ್ನೋ ಹುಡುಕುವ ಜನರಿಗೆ ಒಂದು ಸಂದೇಶವನ್ನು ಈ ಸಿನಿಮಾ ಮೂಲಕ ನೀಡಲಾಗಿದೆ. ಆದರೆ ಅದು ಮನಮುಟ್ಟುವ ರೀತಿಯಲ್ಲಿ ಇಲ್ಲ. ಚಿತ್ರದ ಹಾಡುಗಳು ಕೂಡ ಭಾವತೀವ್ರತೆಯನ್ನು ಕಟ್ಟಿಕೊಡಲು ಸೋತಂತಿವೆ. ತಿಳಿ ಹಾಸ್ಯದ ಮೂಲಕ ರಂಜಿಸುವ ಪ್ರಯತ್ನ ಮಾಡಲಾಗಿದೆ. ಹಾಗಂತ, ಎಲ್ಲ ದೃಶ್ಯಗಳಲ್ಲೂ ಅದನ್ನು ನಿರೀಕ್ಷಿಸುವಂತಿಲ್ಲ.
ಇದನ್ನೂ ಓದಿ: ಯೋಗರಾಜ್ ಭಟ್ ಜೊತೆ ರಮ್ಯಾ ಹೊಸ ಸಿನಿಮಾ; ಕಡೆಗೂ ಸಿಕ್ತು ಗುಡ್ ನ್ಯೂಸ್
ಹೊಸ ಕಲಾವಿದರಿಗೆ ಬೆಂಬಲ, ಪ್ರೋತ್ಸಾಹ ನೀಡಬೇಕು ಎಂಬುವವರು ‘ಮನದ ಕಡಲು’ ನೋಡಬಹುದು. ನಟ ಸುಮುಖ ಅವರು ಯೋಗರಾಜ್ ಭಟ್ಟರ ಹಳೇ ಸಿನಿಮಾಗಳ ಹೀರೋಗಳನ್ನು ನೆನಪಿಸುತ್ತಾರೆ. ನಾಯಕಿಯರಿಗೂ ಈ ಮಾತು ಅನ್ವಯ. ಅಂಜಲಿ ಅನೀಶ್ ಮತ್ತು ರಾಶಿಕಾ ಶೆಟ್ಟಿ ಅವರು ತುಂಬ ಸಹಜವಾಗಿ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ. ಹಸಿರು ಪರಿಸರ, ತಂಪೆನಿಸುವ ಜಲಪಾತ, ಚುರುಕು ಸಂಭಾಷಣೆ ಮುಂತಾದವುಗಳಿಂದ ಯೋಗರಾಜ್ ಭಟ್ ಅವರು ಈ ಚಿತ್ರದಲ್ಲಿ ಸಿಗ್ನೇಚರ್ ಹಾಕಿದ್ದಾರೆ. ಇಷ್ಟನ್ನು ಮಾತ್ರ ನಿರೀಕ್ಷಿಸುವವರಿಗೆ ‘ಮನದ ಕಡಲು’ ಖುಷಿ ಕೊಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.