ಯೋಗರಾಜ್ ಭಟ್ ಜೊತೆ ರಮ್ಯಾ ಹೊಸ ಸಿನಿಮಾ; ಕಡೆಗೂ ಸಿಕ್ತು ಗುಡ್ ನ್ಯೂಸ್
ರಮ್ಯಾ ಅವರ ಹೊಸ ಸಿನಿಮಾ ಬಗ್ಗೆ ಸಿಹಿ ಸುದ್ದಿ ಸಿಕ್ಕಿದೆ. ಯೋಗರಾಜ್ ಭಟ್ ನಿರ್ದೇಶನ ಮಾಡಲಿರವ ಮುಂದಿನ ಸಿನಿಮಾದಲ್ಲಿ ರಮ್ಯಾ ನಟಿಸಲಿದ್ದಾರೆ. ‘ರಂಗ SSLC’ ಬಳಿಕ ರಮ್ಯಾ ಮತ್ತು ಯೋಗರಾಜ್ ಭಟ್ ಅವರು ಮತ್ತೆ ಒಂದಾಗಿ ಸಿನಿಮಾ ಮಾಡಲಿದ್ದಾರೆ. ಈ ಪ್ರಾಜೆಕ್ಟ್ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

ನಟಿ ರಮ್ಯಾ (Ramya) ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಅವರು ಪೂರ್ಣ ಪ್ರಮಾಣದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಳ್ಳದೇ ಬಹಳ ವರ್ಷಗಳಾಗಿವೆ. ಅದರ ನಡುವೆ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಈಗ ರಾಜಕೀಯದಲ್ಲೂ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಹಾಗಾದರೆ ರಮ್ಯಾ ಅವರು ಸಿನಿಮಾಗೆ ಕಮ್ಬ್ಯಾಕ್ ಮಾಡುವುದು ಯಾವಾಗ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಆಗಾಗ ಕೇಳುತ್ತಿದ್ದರು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಖ್ಯಾತ ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಅವರ ಜೊತೆ ರಮ್ಯಾ ಕೈ ಜೋಡಿಸಿದ್ದಾರೆ. ಹೊಸ ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿದೆ.
ಕಮ್ಬ್ಯಾಕ್ ಮಾಡಬೇಕು ಎಂಬ ಉದ್ದೇಶ ರಮ್ಯಾ ಅವರಿಗೆ ಇದೆ. ಆದರೆ ಸೂಕ್ತವಾದ ಸ್ಕ್ರಿಪ್ಟ್ ಸಲುವಾಗಿ ಅವರು ಕಾಯುತ್ತಿದ್ದರು. ‘ಉತ್ತರಕಾಂಡ’ ಚಿತ್ರದಲ್ಲಿ ಅವರು ನಟಿಸುತ್ತಾರೆ ಎಂಬುದು ಗೊತ್ತಾದಾಗ ಅಭಿಮಾನಿಗಳಿಗೆ ಖುಷಿ ಆಗಿತ್ತು. ಆದರೆ ಆ ಪ್ರಾಜೆಕ್ಟ್ನಿಂದ ರಮ್ಯಾ ಹೊರನಡೆದರು. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ನಟಿಸಲು ಮೊದಲು ಒಪ್ಪಿಕೊಂಡು ನಂತರ ಹಿಂದೇಟು ಹಾಕಿದ್ದರು. ಇಷ್ಟೆಲ್ಲ ಆದ ಬಳಿಕ ರಮ್ಯಾ ಈಗ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.
ಸದ್ಯ ‘ಮನದ ಕಡಲು’ ಸಿನಿಮಾಗೆ ನಿರ್ದೇಶನ ಮಾಡಿರುವ ಯೋಗರಾಜ್ ಭಟ್ ಅವರು ರಮ್ಯಾ ಜೊತೆ ಹೊಸ ಸಿನಿಮಾ ಮಾಡುವುದು ಖಚಿತವಾಗಿದೆ. ಈ ಮೊದಲು ಯೋಗರಾಜ್ ಭಟ್ ಮತ್ತು ರಮ್ಯಾ ಅವರ ಕಾಂಬಿನೇಷನ್ನಲ್ಲಿ ‘ರಂಗ SSLC’ ಸಿನಿಮಾ ಮೂಡಿಬಂದಿತ್ತು. ಈಗ ಮತ್ತೆ ಅವರಿಬ್ಬರು ಜೊತೆಯಾಗಿ ಕೆಲಸ ಮಾಡಲು ಮುಂತಾಗಿದ್ದಾರೆ.
‘ಮನದ ಕಡಲು’ ಸಿನಿಮಾಗೆ ಬಂಡವಾಳ ಹೂಡಿರುವ ಇ. ಕೃಷ್ಣಪ್ಪ ಹಾಗೂ ಜಿ. ಗಂಗಾಧರ್ ಅವರು ರಮ್ಯಾ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ನ ಹೊಸ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ರಮ್ಯಾ ಅವರ ‘ಆ್ಯಪಲ್ ಬಾಕ್ಸ್’ ನಿರ್ಮಾಣ ಸಂಸ್ಥೆ ಕೂಡ ಕೈ ಜೋಡಿಸಲಿದೆ. ‘ಇ.ಕೆ.ಎಂಟರ್ ಟೈನರ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ.
ಇದನ್ನೂ ಓದಿ: ನನಗೆ ತೀರಾ ಮೋಸ ಆಗಿದೆ: ಹಾಸ್ಟೆಲ್ ಹುಡುಗರ ಕಿರಿಕ್ ಬಗ್ಗೆ ವಿವರಣೆ ನೀಡಿದ ರಮ್ಯಾ
ಸದ್ಯ ಯೋಗರಾಜ್ ಭಟ್ ಅವರ ಗಮನವೆಲ್ಲ ‘ಮನದ ಕಡಲು’ ಸಿನಿಮಾದ ಮೇಲಿದೆ. ಮಾರ್ಚ್ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಆ ಬಳಿಕ ರಮ್ಯಾ ಜೊತೆಗಿನ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ. ಸಿನಿಮಾದ ಶೀರ್ಷಿಕೆ ಏನು? ಬೇರೆ ಯಾರೆಲ್ಲ ನಟಿಸಲಿದ್ದಾರೆ? ತಾಂತ್ರಿಕ ಬಳಗದಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಉತ್ಸುಕರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.