Adipurush: ‘ಆದಿಪುರುಷ್​’ ಪ್ರದರ್ಶನ ಆಗುವ ಎಲ್ಲ ಚಿತ್ರಮಂದಿರದಲ್ಲಿ ಹನುಮನಿಗೆ ಒಂದು ಸೀಟು ಮೀಸಲು; ಏನಿದು ನಂಬಿಕೆ?

Devdatta Nage: ‘ಆದಿಪುರುಷ್​’ ಸಿನಿಮಾದಲ್ಲೂ ಶ್ರೀರಾಮನ ಗುಣಗಾನ ಮಾಡಲಾಗುತ್ತದೆ. ರಾಮನ ಕುರಿತಾದ ಹಾಡುಗಳು ಇದರಲ್ಲಿ ಇವೆ. ದೇವದತ್ತ ನಾಗೆ ಅವರು ಆಂಜನೇಯನ ಪಾತ್ರ ಮಾಡಿದ್ದಾರೆ.

Adipurush: ‘ಆದಿಪುರುಷ್​’ ಪ್ರದರ್ಶನ ಆಗುವ ಎಲ್ಲ ಚಿತ್ರಮಂದಿರದಲ್ಲಿ ಹನುಮನಿಗೆ ಒಂದು ಸೀಟು ಮೀಸಲು; ಏನಿದು ನಂಬಿಕೆ?
ದೇವದತ್ತ ನಾಗೆ

Updated on: Jun 06, 2023 | 1:00 PM

ರಾಮಾಯಣದ ಕಥೆಯನ್ನು ಆಧರಿಸಿ ‘ಆದಿಪುರುಷ್​’ (Adipurush) ಸಿನಿಮಾ ಮೂಡಿಬಂದಿದೆ. ಈ ಚಿತ್ರದಲ್ಲಿ ಪ್ರಭಾಸ್​ (Prabhas) ಅವರು ರಾಮನಾಗಿ ನಟಿಸಿದ್ದಾರೆ. ಜೂನ್​ 16ರಂದು ಅದ್ದೂರಿಯಾಗಿ ಈ ಸಿನಿಮಾ ಬಿಡುಗಡೆ ಆಗಲಿದೆ. ಅಚ್ಚರಿ ಏನೆಂದರೆ, ಈ ಸಿನಿಮಾ ಪ್ರದರ್ಶನ ಕಾಣುವ ಎಲ್ಲ ಚಿತ್ರಮಂದಿರಗಳಲ್ಲೂ ಆಂಜನೇಯನಿಗಾಗಿ ಒಂದು ಸೀಟ್​ ಮೀಸಲಿಡಲು ತೀರ್ಮಾನಿಸಲಾಗಿದೆ. ಚಿತ್ರತಂಡದವರು ಈ ರೀತಿ ಮಾಡಲು ಒಂದು ಸ್ಪೆಷಲ್​ ಕಾರಣ ಇದೆ. ಇದು ಅಪ್ಪಟ ನಂಬಿಕೆಗೆ ಸಂಬಂಧಿಸಿದ ವಿಚಾರ. ರಾಮನ ಪರಮ ಭಕ್ತ ಆಂಜನೇಯನಿಗೆ (Lord Hanuman) ಗೌರವ ಸಲ್ಲಿಸುವ ಸಲುವಾಗಿ ಪ್ರತಿ ಚಿತ್ರಮಂದಿರದಲ್ಲಿ ಒಂದು ಸೀಟನ್ನು ಖಾಲಿ ಬಿಡಲಾಗುವುದು ಎಂದು ಸ್ವತಃ ‘ಆದಿಪುರುಷ್​​’ ಚಿತ್ರತಂದವರು ತಿಳಿಸಿದ್ದಾರೆ.

ಎಲ್ಲಿ ರಾಮನ ಆರಾಧನೆ ಮಾಡಲಾಗುತ್ತೋ ಅಲ್ಲಿ ಆಂಜನೇಯ ಬರುತ್ತಾನೆ ಎಂಬ ನಂಬಿಕೆ ಇದೆ. ‘ಆದಿಪುರುಷ್​’ ಸಿನಿಮಾದಲ್ಲೂ ಶ್ರೀರಾಮನ ಗುಣಗಾನ ಮಾಡಲಾಗುತ್ತದೆ. ರಾಮನ ಕುರಿತಾದ ಹಾಡುಗಳು ಇದರಲ್ಲಿ ಇವೆ. ಹಾಗಾಗಿ ಈ ಸಿನಿಮಾ ಪ್ರದರ್ಶನ ಆಗುವಾಗ ಚಿತ್ರಮಂದಿರಕ್ಕೆ ಹನುಮಂತ ಬರುತ್ತಾನೆ ಎಂಬ ನಂಬಿಕೆ ಹಲವರಿಗೆ ಇದೆ. ಆ ಕಾರಣದಿಂದ ಒಂದು ಸೀಟನ್ನು ಪವನ ಪುತ್ರನಿಗಾಗಿ ಮೀಸಲಿಡಲಾಗುವುದು ಎಂಬುದು ವಿಶೇಷ. ‘ಆದಿಪುರುಷ್​’ ಸಿನಿಮಾದಲ್ಲಿ ದೇವದತ್ತ ನಾಗೆ ಅವರು ಆಂಜನೇಯನ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಓಂ ರಾವತ್​ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: Dharma Censor Board: ‘ಧಾರ್ಮಿಕ ಸೆನ್ಸಾರ್​ ಮಂಡಳಿ’; ಸಿನಿಮಾಗಳಲ್ಲಿ ಹಿಂದೂ ದೇವರ ಅಪಮಾನ ತಡೆಯಲು ಹೀಗೊಂದು ಪ್ರಯತ್ನ

ಪ್ರಭಾಸ್​ ಅಭಿಮಾನಿಗಳು ಈ ಚಿತ್ರಕ್ಕಾಗಿ ತುದಿಗಾಲಿನಲ್ಲಿ ನಿಂತು ಕಾದಿದ್ದಾರೆ. ಪ್ರಭಾಸ್​ ಪಾಲಿಗೆ ಈ ಚಿತ್ರ ಬಹಳ ಮಹತ್ವದ ಪ್ರಾಜೆಕ್ಟ್​ ಆಗಿದೆ. ‘ಆದಿಪುರುಷ್​’ ಮೂಲಕ ಗೆಲ್ಲಲೇ ಬೇಕಾದ ಅನಿವಾರ್ಯತೆ ಅವರಿಗೆ ಇದೆ. ಹಾಗಾದರೆ ‘ಆದಿಪುರುಷ್​’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಮೊದಲ ದಿನ ಎಷ್ಟು ಕಲೆಕ್ಷನ್​ ಮಾಡಬಹುದು ಎಂಬ ಕೌತುಕ ಎಲ್ಲರಲ್ಲೂ ಇದೆ. ಬಾಕ್ಸ್​ ಆಫೀಸ್​ ತಜ್ಞರ ಪ್ರಕಾರ ಈ ಸಿನಿಮಾ ಮೊದಲ ದಿನ ವಿಶ್ವಾದ್ಯಂತ 100 ಕೋಟಿ ರೂಪಾಯಿ ಬಾಚಿಕೊಳ್ಳುವ ಸಾಧ್ಯತೆ ಇದೆ. ಈ ಊಹೆ ನಿಜವಾಗುತ್ತಾ ಎಂಬುದನ್ನು ತಿಳಿಯಲು ಇನ್ನು ಕೆಲವೇ ದಿನಗಳು ಬಾಕಿ. ಈ ಸಿನಿಮಾದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ಕೃತಿ ಸನೋನ್​ ನಟಿಸಿದ್ದಾರೆ.

ಇದನ್ನೂ ಓದಿ: Prabhas: ‘ಆದಿಪುರುಷ್​’ ಚಿತ್ರತಂಡ ರಿಲೀಸ್​ ಮಾಡಲಿದೆ ಇನ್ನೊಂದು ಟ್ರೇಲರ್​; ಏನಿದು ಸ್ಪೆಷಲ್​ ನ್ಯೂಸ್​?

‘ಆದಿಪುರುಷ್​’ ಚಿತ್ರಕ್ಕೆ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗುತ್ತಿದೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಎಲ್ಲ ರಾಜ್ಯಗಳಲ್ಲೂ ಉತ್ತಮ ಓಪನಿಂಗ್​ ಪಡೆದುಕೊಳ್ಳುವ ನಿರೀಕ್ಷೆ ಇದೆ. ಹಿಂದಿ ಪ್ರೇಕ್ಷಕರಲ್ಲೂ ಈ ಸಿನಿಮಾ ಬಗ್ಗೆ ಹೈಪ್​ ಕ್ರಿಯೇಟ್​ ಆಗಿದೆ. ಬಾಲಿವುಡ್​ ಕಲಾವಿದರು ಈ ಚಿತ್ರದಲ್ಲಿ ನಟಿಸಿರುವುದೇ ಅದಕ್ಕೆ ಕಾರಣ. ಅಲ್ಲದೇ ಪ್ರಭಾಸ್​ ಅವರಿಗೆ ಉತ್ತರ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಈ ಎಲ್ಲ ಕಾರಣದಿಂದ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮೊದಲ ದಿನ ಉತ್ತಮ ಕಲೆಕ್ಷನ್​ ಆಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us